ಉಡುಪಿಯ ರಾಜೇಶ್ ಪ್ರಭು ಸಾಧನೆಗೆ ಪ್ರಪಂಚವೇ ಬೆರಗು!
ಉಡುಪಿ, ನವೆಂಬರ್ 25 : ಹಲ್ಲಿನಿಂದ, ಕಾಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿಯುವ ಸಾಹಸ ಮಾಡುವ ರಾಜೇಶ್ ಪ್ರಭು ಅವರು ವರ್ಲ್ಡ್ ರೆಕಾರ್ಡ್ ಇಂಡಿಯಾಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜೇಶ್ ಪ್ರಭು ಅವರ ಮೂರು ದಾಖಲೆಗಳು ಈಗಾಗಲೇ ಲಿಮ್ಕಾ ಬುಕ್ ಸೇರಿವೆ.
ಉಡುಪಿಯ ಶಿರ್ವ ಪೆರ್ನಲಿನ ರಾಜೇಶ್ ಪ್ರಭು ಅವರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗಿನ್ನೆಸ್ ದಾಖಲೆ ಮಾಡುವ ಹಂಬಲ ಅವರಿಗಿದ್ದರೂ ಅದಕ್ಕಾಗಿ ಸುಮಾರು 25 ಲಕ್ಷ ಹೊಂದಿಸುವುದು ಕಷ್ಟದ ಕೆಲಸವಾಗಿದೆ. ಯಾರಾದರೂ ಕರೆದರೆ ಹೋಗಿ ತಮ್ಮ ಸಾಹಸವನ್ನು ಪ್ರದರ್ಶಿಸಿ ಬರುತ್ತಾರೆ. [ಈ ಪಂಚಮಿ ಪಂಚ ಕ್ಷೇತ್ರದ ಸಾಧಕಿ]

6 ನಿಮಿಷದಲ್ಲಿ 16 ತೆಂಗಿನ ಕಾಯಿಯನ್ನು ಹಲ್ಲಿನಿಂದ, 111 ಸೆಕೆಂಡ್ ನಲ್ಲಿ 2 ತೆಂಗಿನಕಾಯಿಯನ್ನು ಕಾಲಿನಿಂದ ಮತ್ತು 42 ಸೆಕೆಂಡಿಗೆ 2 ತೆಂಗಿನಕಾಯಿಯನ್ನು ಉಗುರಿನಿಂದ ಸುಲಿದು ಸಾಹಸ ಪ್ರದರ್ಶಿಸುವ ರಾಜೇಶ್ ಪ್ರಭು ಅವರಿಗೆ ಗಿನ್ನೆಸ್ ದಾಖಲೆ ಮಾಡಲು ಆರ್ಥಿಕವಾಗಿ ಶಕ್ತಿ ತುಂಬುವವರು ಬೇಕಾಗಿದ್ದಾರೆ. [ಇದು ಕೊಡಗಿನ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ಮಂಗಗಳಿಂದ ಪ್ರೇರಣೆ ಪಡೆದರು : ರಾಜೇಶ್ ಪ್ರಭು ಅವರ ಈ ಸಾಹಸಕ್ಕೆ ಮಂಗಗಳೇ ಪ್ರೇರಣೆ ಎಂದು ಹೇಳಿದರೆ ಎಲ್ಲರಿಗೂ ಆಶ್ವರ್ಯವಾಗುತ್ತದೆ. ಶಿರ್ವಾದ ಪೆರ್ನಾಲ್ ಸುತ್ತಮುತ್ತ ಕಾಡು ಹೆಚ್ಚಿದ್ದು, ಮಂಗಗಳ ಕಾಟವೂ ಜಾಸ್ತಿ ಇದೆ.

ಮಂಗಗಳು ಎಲ್ಲಿಂದಲೋ ಎತ್ತಿಕೊಂಡು ಬಂದ ತೆಂಗಿನಕಾಯಿಯನ್ನು ಸುಲಿಯುವುದನ್ನು ನೋಡಿದ ರಾಜೇಶ್ ಪ್ರಭು ಅವರು ಬಾಲ್ಯದಿಂದಲೇ ಈ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ತಂದೆಯವರ ಪ್ರೋತ್ಸಾಹದಿಂದ ಯಂತ್ರದ ಸಹಾಯವಿಲ್ಲದೇ ತೆಂಗಿನಕಾಯಿಯನ್ನು ಸುಲಿಯಲು ಪ್ರಯತ್ನ ನಡೆಸುತ್ತಿದ್ದರು. ಈಗ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ.
22 ಸೆಕೆಂಡ್ನಲ್ಲಿ ಸುಲಿದಿದ್ದರು : 2006 ರಲ್ಲಿ ಝೀ ಟಿವಿಯಲ್ಲಿ ಅವರು ಕೊಟ್ಟ ಕಾರ್ಯಕ್ರಮದಲ್ಲಿ ಕೇವಲ 22 ಸೆಕೆಂಡ್ಗಳಲ್ಲಿ ತೆಂಗಿನಕಾಯಿ ಸಿಪ್ಪೆಸುಲಿದು ಎಲ್ಲರ ಚಪ್ಪಾಳೆ ಗಿಟ್ಟಿಸಿದ್ದರು. ಈಗ ರಾಜೇಶ್ ಅವರ ಸಾಹಸ ವರ್ಲ್ಡ್ ರೆಕಾರ್ಡ್ ಇಂಡಿಯಾದಲ್ಲಿ ದಾಖಲಾಗಿದೆ.

ಪ್ರಭು ಸಾಧನೆಗೆ ಹಲವು ಪ್ರಶಸ್ತಿ : ರಾಜೇಶ್ ಪ್ರಭು ಅವರ ಸಾಧನೆಗಳು ಈಗಾಗಲೇ ಲಿಮ್ಕಾ ಬುಕ್ ಸೇರಿವೆ. ಸುಭಾಶ್ಚಂದ್ರ ಬೋಸ್ ರಾಷ್ಟ್ರೀಯ ಯುವ ರತ್ನ ಪ್ರಶಸ್ತಿ, ತಾಜ್ ಮಹೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪ್ರಭು ಅವರು ಪಡೆದಿದ್ದಾರೆ.
ತೆಂಗಿನಕಾಯಿ ಸಿಪ್ಪೆ ಸುಲಿಯುವುದನ್ನು ಹೊರತುಪಡಿಸಿ 60 ಕೆಜಿ ಭಾರವನ್ನು ಹಲ್ಲಿನಿಂದ ಎತ್ತುವುದು ಸೇರಿದಂತೆ ವಿವಿಧ ಸಾಹಸಗಳನ್ನು ರಾಜೇಶ್ ಪ್ರಭು ಅವರು ಮಾಡುತ್ತಾರೆ.












Click it and Unblock the Notifications