ಇಬ್ಬರು ಕನ್ನಡಿಗರೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕನ್ನಡಿಗರಾದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನವದೆಹಲಿ, ಫೆಬ್ರವರಿ 17: ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕನ್ನಡಿಗರಾದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದ ಕೊಲಿಜಿಯಂ ಇತ್ತೀಚೆಗೆ ಇವರಿಬ್ಬರ ಹೆಸರನ್ನು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸ್ಸು ಮಾಡಿತ್ತು. ಕೊಲಿಜಿಯಂ ಶಿಫಾರಸ್ಸನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದ್ದು ಇಂದು ಇಬ್ಬರೂ ನ್ಯಾಯಮೂರ್ತಿ (ಫೆ. 17) ಪ್ರಮಾಣವಚನ ಸ್ವೀಕರಿಸಿದ್ದಾರೆ.[ನ್ಯಾಯಾಂಗ ವರ್ಗಾವಣೆ: ಕರ್ನಾಟಕ ಹೈಕೋರ್ಟಿನ ಇಬ್ಬರಿಗೆ ಪದೋನ್ನತಿ]
ನ್ಯಾಯಮೂರ್ತಿ ಅಬ್ದುಲ್ ನಜೀರ್:
ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ಅಬ್ದುಲ್ ನಜೀರ್ ಸೇವೆ ಸಲ್ಲಿಸುತ್ತಿದ್ದರು. ಅವರೀಗ ನೇರ ಸುಪ್ರೀಂ ಕೊರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದಾರೆ. 1958ರಲ್ಲಿ ಜನಿಸಿದ ಜಸ್ಟಿಸ್ ನಜೀರ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು.
1983ರಲ್ಲಿ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ಅಭ್ಯಾಸ ಆರಂಭಿಸಿದ ನಜೀರ್ 2003ರಲ್ಲಿ ಕರ್ನಾಟಕ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. ನಂತರ ಅವರನ್ನು ಖಾಯಂ ನ್ಯಾಯಮೂರ್ತಿಯಾಗಿ ನೆಮಕ ಮಾಡಲಾಯಿತು. ಕರ್ನಾಟಕ ಹೈಕೋರ್ಟಿನಲ್ಲಿ ಸುದೀರ್ಘ 14 ವರ್ಷ ಸೇವೆ ಸಲ್ಲಿಸಿದ ನಂತರ ಅಬ್ದುಲ್ ನಜೀರ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.
ನ್ಯಾಯಮೂರ್ತಿ ಮೋಹನ್ ಎಮ್ ಶಾಂತನಗೌಡರ್:
ಮೋಹನ್ ಎಮ್ ಶಾಂತನಗೌಡರ್ ಈ ಹಿಂದೆ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಕರ್ನಾಟಕದ ಹಾವೇರಿ ಜಿಲ್ಲೆಯ ಹಿರೇಕೆರೂರು ಇವರ ಹುಟ್ಟೂರು. ಧಾರವಾಡದಲ್ಲಿ ತಮ್ಮ ವಕೀಲಿ ವೃತ್ತಿ ಅಭ್ಯಾಸ ಆರಂಭಿಸಿದ ಶಾಂತನಗೌಡರ್ ನಂತರ ಬೆಂಗಳೂರಿಗೆ ಬಂದರು.
1991-93ರವರೆಗೆ ಕರ್ನಾಟಕ ಬಾರ್ ಕೌನ್ಸಿಲ್ ಉಪಾಧ್ಯಕ್ಷರಾಗಿ ಹಾಗೂ 1995-96ರವರೆಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಇವರನ್ನು ಕರ್ನಾಟಕ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಯಾಗಿನೇಮಕ ಮಾಡಲಾಗಿತ್ತು. ಮುಂದೆ 2004ರಲ್ಲಿ ಶಾತನಗೌಡರ್ ರನ್ನು ಖಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು.
2016ರಲ್ಲಿ ಮೋಹನ್ ಶಾಂತನಗೌಡರ್ ಅವರಿಗೆ ಕೇರಳ ಹೈಕೋರ್ಟಿಗೆ ಮೂಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಿ ವರ್ಗಾವಣೆ ಮಾಡಲಾಗಿತ್ತು.
ಕರ್ನಾಟಕ ಮೂಲದ ಇಬ್ಬರು ನ್ಯಾಯಮೂರ್ತಿಗಳು ಸೇರಿ ಒಟ್ಟು 5 ಜನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.