'ಏ ಗುಬ್ಬಿ ಶ್ರೀನಿವಾಸ್ ಬೆಂಗಳೂರಿಗೆ ಬಂದಿದ್ದೇನೆಂದು ಹೇಳು, ಸಾಕು'
ಬೆಂಗಳೂರು, ಜೂನ್ 12: ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಮುಗಿದು, ಫಲಿತಾಂಶ ಪ್ರಕಟವಾಗಿದೆ. ಗೆದ್ದವರು ಸಂಭ್ರಮದಿಂದ ಸಿಹಿ ಹಂಚುತ್ತಿದ್ದರೆ, ಅಡ್ಡ ಮತದಾನ ಮಾಡಿದವರ ವಿರುದ್ಧ ಪ್ರತಿಭಟನೆ ಶುರುವಾಗಿದೆ. ಜೆಡಿಎಸ್ ಟಿಕೆಟಿನಿಂದ ಆಯ್ಕೆಯಾಗಿ ಶಾಸಕರಾಗಿರುವ ಕೋಲಾರದ ಶ್ರೀನಿವಾಸ ಗೌಡ ಮತ್ತು ಗುಬ್ಬಿ ಕ್ಷೇತ್ರದ ಎಸ್.ಆರ್.ಶ್ರೀನಿವಾಸ, ಅಡ್ಡಮತದಾನ ಮಾಡಿದ್ದು ಖಚಿತವಾಗುತ್ತಿದ್ದಂತೆಯೇ ಅವರ ಮೇಲೆ ಜೆಡಿಎಸ್ ಕಾರ್ಯಕರ್ತರ ಆಕ್ರೋಶ ಮುಗಿಲುಮುಟ್ಟಿದೆ.
ಜೆಡಿಎಸ್ ಶಾಸಕರ ಅಡ್ಡ ಮತದಾನದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ದ ಜೆಡಿಎಸ್ ಬೃಹತ್ ಪ್ರತಿಭಟನೆಯನ್ನು ನಗರದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿತ್ತು. ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಸ್.ಆರ್. ಶ್ರೀನಿವಾಸ್ ಹಾಗೂ ಶ್ರೀನಿವಾಸಗೌಡ ವಿರುದ್ದ ಜೆಡಿಎಸ್ ಮುಖಂಡರು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೂಡಾ ಭಾಗವಹಿಸಿದ್ದರು.
ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, "ವಿಪ್ ಉಲ್ಲಂಘನೆ ಮಾಡಿ ಮತದಾನ ಮಾಡಿದ್ದಾರೆ. ಅದರ ವಿರುದ್ಧ ಹೋರಾಟ ನಡೆಯುತ್ತಿದೆ, ಸಂವಿಧಾನದ ಪರಿಚ್ಛೇದ 10 ಪ್ರಕಾರ ನಾವು ಪ್ರಕರಣ ದಾಖಲು ಮಾಡುತ್ತೇವೆ. ಗುಬ್ಬಿ ಶ್ರೀನಿವಾಸ್ ಗೌಡ ಬೆಳಗ್ಗೆ ಒಂದು ಹೇಳಿದ್ದರು, ಸಂಜೆ ಇನ್ನೊಂದು ಮಾಡಿದ್ದಾರೆ" ಎಂದು ರಂಗನಾಥ್ ಆಕ್ರೋಶ ಹೊರಹಾಕಿದರು.
ರಾಜ್ಯಸಭಾ ಚುನಾವಣಾ ಫಲಿತಾಂಶ: ಬೆಕ್ಕಿಗೆ ಗಂಟೆ ಕಟ್ಟುವವರಾರು?
"ಗುಬ್ಬಿ ಶಾಸಕರನ್ನು ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಕುಣಿಗಲ್ ಶಾಸಕ ರಂಗನಾಥ ಕರೆದುಕೊಂಡು ಬಂದರು. ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹಣ ಕೊಟ್ಟರು. ಸಿದ್ದರಾಮಯ್ಯ ಅವರು ಮತದಾನ ಮಾಡು ಎಂದು ಹೇಳಿದ್ದರು, ಇದನ್ನು ಒಪ್ಪಿಕೊಳ್ಳಿ"ಎಂದು ರಂಗನಾಥ್ ಸವಾಲು ಹಾಕಿದರು.
ಅಡ್ಡ ಮತದಾನದ ಬಗ್ಗೆ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ವಿವರಣೆ
ಜೆಡಿಎಸ್ ಪ್ರತಿಭಟನೆಯಲ್ಲಿ ಗದ್ದಲ ಉಂಟಾಗಿ ಸ್ವಲ್ಪಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರು ಅಡ್ಡ ಮತದಾನದ ಬಗ್ಗೆ ವಿವರಣೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಕೋಲಾರದ ಶ್ರೀನಿವಾಸಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಅವರನ್ನು ಸನ್ಮಾನ್ಯ ಎಂದು ಸಂಭೋದಿಸಿದರು. ಇದರಿಂದ ಜೆಡಿಎಸ್ ಶಾಸಕರು ಕೆಂಡಾಮಂಡಲವಾದರು. ಅವರಿಬ್ಬರಿಗೆ ಗೌರವ ಕೊಡಬೇಡಿ, ನಮ್ಮ ಪಾಲಿಗೆ ಅವರು ಸತ್ತು ಹೋಗಿದ್ದಾರೆ, ಅವರು ಸನ್ಮಾನ್ಯ ಅಲ್ಲ ಲೋಫರ್ಗಳು, ಅವರಿಬ್ಬರಿಗೂ ಮಾನ ಮರ್ಯಾದೆ ಇಲ್ಲ. ಅವರನ್ನು ಅಧಿಕೃತವಾಗಿ ಉಚ್ಚಾಟನೆ ಮಾಡಿ ಎಂದು ಕಾರ್ಯಕರ್ತರು ಒತ್ತಾಯಿಸಿದರು. ಆಗ ಮಧ್ಯ ಪ್ರವೇಶಿಸಿದ ಇಬ್ರಾಹಿಂ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಕುಪೇಂದ್ರ ರೆಡ್ಡಿಯವರ ಸೋಲು ದೇವೇಗೌಡರಿಗೆ ನೋವು ನೀಡಿದೆ
ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ಮಾತನಾಡಿ, "ಕುಪೇಂದ್ರ ರೆಡ್ಡಿಯವರ ಸೋಲು ದೇವೇಗೌಡರಿಗೆ ನೋವು ನೀಡಿದೆ. ಇಳಿ ವಯಸ್ಸಿನಲ್ಲಿ ದೇವೇಗೌಡರಿಗೆ ನೋವು ನೀಡಿದ ಶಾಪ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ತಟ್ಟುತ್ತದೆ. ಏ.. ಗುಬ್ಬಿ ಶ್ರೀನಿವಾಸ ಗೌಡ ನೀನೇದಾರೂ ಬೆಂಗಳೂರಿನಲ್ಲಿ ಸಿಕ್ಕರೇ ಕಾರ್ಯಕರ್ತರು ನಿನ್ನನ್ನು ಹೊಡೆಯುತ್ತಾರೆ" ಎಂದು ಪ್ರಕಾಶ್ ಪಕ್ಕಾ ಲೋಕಲ್ ಭಾಷೆಯಲ್ಲಿ ತರಾಟೆಗೆ ತೆಗೆದುಕೊಂಡರು.
ಎಚ್ಡಿಕೆ ಅವಕಾಶವಾದಿ ತರ್ಕದಲ್ಲೇ ಕಾಂಗ್ರೆಸ್ಸಿನ ಉತ್ತರವೂ ಅಡಗಿದೆನಾವು ಕೂಡ ನಮ್ಮ ತಂದೆ ತಾಯಿಗೆ ಹುಟ್ಟಿದ್ದೇವೆ
ಆಗ ಮಧ್ಯಪ್ರವೇಶ ಮಾಡಿದ ಪರಿಷತ್ ಸದಸ್ಯ ಟಿ.ಎ. ಶರವಣ, "ಹೌದು, ಗುಬ್ಬಿ ಶ್ರೀನಿವಾಸ್ ಬೆಂಗಳೂರಿಗೆ ಬಂದಿದ್ದು ಗೊತ್ತಾದರೆ ಕಾರ್ಯಕರ್ತರು ಬಟ್ಟೆ ಬಿಚ್ಚಿ ಹೊಡೆಯುತ್ತಾರೆ. ಮನೆಯಲ್ಲಿ ಕೂತು ಮಾತಾಡೋದಲ್ಲ ಶ್ರೀನಿವಾಸ್, ಬೆಂಗಳೂರಿಗೆ ಬಂದಾಗ, ಬಂದಿದ್ದೇನೆ ಎಂದು ಹೇಳು ಸಾಕು. ನಾವು ಕೂಡ ನಮ್ಮ ತಂದೆ ತಾಯಿಗೆ ಹುಟ್ಟಿದ್ದೇವೆ"ಎಂದು ಆಕ್ರೋಶ ಹೊರಹಾಕಿದರು.
Recommended Video
ಹಮಾರ ಕುತ್ತಾ ಹಮಾರಾ ಗಲ್ಲಿ ಮೇ ಶೇರ್ ಅಂತೀರಾ
"ತಾಕತ್ತಿದ್ದರೆ ಬೆಂಗಳೂರಿಗೆ ಬಾ, ಹಮಾರ ಕುತ್ತಾ ಹಮಾರಾ ಗಲ್ಲಿ ಮೇ ಶೇರ್ ಅಂತೀರಾ. ಸಿದ್ದರಾಮಯ್ಯ ವೈಯಕ್ತಿಕ ಸ್ವಾರ್ಥಕ್ಕೆ ಮತ್ತು ದ್ವೇಷಕ್ಕೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಇನ್ನು ಮುಂದೆ ಒಂದಾಗದ ರೀತಿ ಮಾಡಿದ್ದಾರೆ ಸಿದ್ದರಾಮಯ್ಯನವರು. ಕಳೆದ ಬಾರಿ 8 ಜನರನ್ನು ಕಾಂಗ್ರೆಸ್ ಎತ್ಕೊಂಡೋದ್ರು, ಅವರಲ್ಲಿ ಬಹಳ ಜನ ಕಸಾಯಿಖಾನೆಗೆ ಹೋಗಿದ್ದಾರೆ. ಈಗ ಈ ಇಬ್ಬರೂ ಕಸಾಯಿಖಾನೆಗೆ ಹೋಗುತ್ತಾರೆ"ಎಂದು ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಕಿಡಿಕಾರಿದರು.