Tungabhadra Dam: ಇಂದಿನಿಂದ ಗೇಟ್ ಅಳವಡಿಕೆ ಕೆಲಸ ಆರಂಭ, ಎಷ್ಟು ದಿನ ಆಗಲಿದೆ?
ಬೆಂಗಳೂರು, ಆಗಸ್ಟ್ 14: ಕೊಪ್ಪಳದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಿಂಕ್ ಕಟ್ಟಾಗಿ ಕೊಚ್ಚಿ ಹೋಗಿತ್ತು. ಹೀಗಾಗಿ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಯಿತು. ಈ ಸ್ಥಳಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಇಂದು ಬುಧವಾರದಿಂದ ಜಲಾಶಯಕ್ಕೆಂದೆ ಸಿದ್ದಪಡಿಸಲಾದ ಗೇಟ್ಗಳನ್ನು ಅಳವಡಿಸುವ ಕಾರ್ಯ ಶುರುವಾಗಲಿದೆ ಎಂದು ಮಾಹಿತಿ ನೀಡಿದರು.
ತುಂಗಭದ್ರಾ ಜಲಾಶಯದ ಗೇಟ್ ಕೊಚ್ಚಿ ಹೋದ ಬಳಿಕ ಇತರ ಗೇಟ್ಗಳ ಮೇಲೆ ಒತ್ತಡ ಉಂಟಾಗಿತ್ತು. ಅಲ್ಲದೇ ಗೇಟ್ ಮರು ಅಳವಡಿಕೆಗಾಗಿ ಒಂದಷ್ಟು ನೀರು ಹೊಡ ಬೀಡಬೇಕಾಗಿತ್ತು. ಅದರಂತೆ ಸುಮಾರು 52 ಟಿಎಂಸಿ ನೀರನ್ನು ಹೊರ ಬಿಟ್ಟ ಸರ್ಕಾರವು ಇಂದಿನಿಂದ ಗೇಟ್ ಅಳವಡಿಕೆ ಕಾರ್ಯ ನಡೆಸಲಿದೆ.

ಹೇಗಿದೆ ನೂತನ ಗೇಟ್
ಸರ್ಕಾರ ಜಿಂದಾಲ್ ಕಂಪನಿಗೆ ಕಬ್ಬಿಣ ಇನ್ನಷ್ಟು ಸಲಕರಣೆಗೆ ಮನವಿ ಮಾಡಿತ್ತು. ಅದರಂತೆ ಜಿಂದಾಲ್ ಕಂಪನಿ ಸಹಕಾರದಲ್ಲಿ ಹೊಸಪೇಟೆಯಲ್ಲಿ ತ್ವರಿತವಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಗೇಟ್ಗಳನ್ನು ತಯಾರಿಸಲಾಯಿತು.
ಈ ಗೇಟ್ 12ಅಡಿ ಎತ್ತರವಿದ್ದು, 4 ಅಡಿ ಅಗಲವಿದೆ. ಅಲ್ಲದೇ 16ಎಂಎಂ ದಪ್ಪವಿರುವ 5 ಗೇಟ್ಗಳನ್ನು ಜಲಸಂಪನ್ಮೂಲ ಇಲಾಖೆ ಹಾಗೂ ತಜ್ಞರ ಸೂಚನೆ ಮೇರೆಗೆ ಸಿದ್ದಪಡಿಸಲಾಗಿದೆ. ಅವುಗಳನ್ನು ಇಂದಿನಿಂದ ಅಳವಡಿಕೆ ಕಾರ್ಯ ನಡೆಯಲಿದೆ.
ಇದಕ್ಕಾಗಿ ಅಧಿಕಾರಿಗಳು ಹಾಗೂ ಗೇಟ್ ಅಳವಡಿಕೆ ಸಿಬ್ಬಂದಿಯು ತುಂಬಿ ಹರಿಯುತ್ತಿರುವ ಡ್ಯಾಂ ಒಳಗೆ ರಕ್ಷಾಕವಚ ಸಹಿತ ಇಳಿದು ಆಳ, ಅಗಲ ಪರಿಶೀಲಿಸಿದೆ. ನೀರಿನ ಹರಿವು ಪ್ರಮಾಣದ ವೇಗ, ಇನ್ನಿತರ ಪ್ರಮುಖ ಅಂಶಗಳ ಬಗ್ಗೆ ಪರಿಶೀಲಿಸಿದೆ. ಈ ಮೂಲಕ ಮಹತ್ವದ ಸಾಹಸ ಮಾಡಿ ಗೇಟ್ ಅಳವಡಿಕೆ ಕಾರ್ಯಕ್ಕೆ ಕೈ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಗೇಟ್ ಅಳವಡಿಕೆ ಎಷ್ಟು ದಿನ ಬೇಕು?
ಇನ್ನೂ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಆದಷ್ಟು ಶೀಘ್ರವೇ ವ್ಯಾಪಕ ಮಳೆ ಆಗಲಿದೆ. ಆಗಸ್ಟ್ 15ರ ನಂತರ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಾಗಲಿದೆ ಎಂದು ತಿಳಿಸಲಾಗಿದೆ. ಈ ಕಾರಣದಿಂದ ಜಲಾಶಯದಲ್ಲಿ ಅರ್ಧದಷ್ಟು ನೀರು ಉಳಿಸಿಕೊಂಡ ಗೇಟ್ ಅಳವಡಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಡ್ಯಾಂ ಮತ್ತೆ ಭರ್ತಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications