Railway: 2027ಕ್ಕೆ ದಾವಣಗೆರೆ-ತುಮಕೂರು ರೈಲು ಮಾರ್ಗ ಪೂರ್ಣ: ಬೆಣ್ಣೆನಗರಿಯಿಂದ ಬೆಂಗಳೂರಿಗೆ ಕೇವಲ 2.5 ಗಂಟೆ ಪ್ರಯಾಣ
ದಾವಣಗೆರೆ: ಎರಡು ದಶಕಗಳ ಬಹುನಿರೀಕ್ಷಿತ 'ತುಮಕೂರು-ಚಿತ್ರದುರ್ಗ-ದಾವಣಗೆರೆ' ನೇರ ರೈಲು ಮಾರ್ಗದ ಕಾಮಗಾರಿಯನ್ನು 2027ರ ಡಿಸೆಂಬರ್ ಒಳಗಾಗಿ ಸಂಪೂರ್ಣವಾಗಿ ಮುಕ್ತಾಯಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈ ಮಹತ್ವದ ಘೋಷಣೆಯಿಂದ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದ ಲಕ್ಷಾಂತರ ಪ್ರಯಾಣಿಕರಲ್ಲಿ ಹರ್ಷ ಮುಗಿಲುಮುಟ್ಟಿದೆ.
ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗುರುವಾರ ದಾವಣಗೆರೆ ಜಿಲ್ಲೆಯ ತೋಳಹುಣಸೆಯಿಂದ ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಕಾಮಗಾರಿಯ ಪ್ರಗತಿಯನ್ನು ಖುದ್ದಾಗಿ ಪರಿಶೀಲನೆ ನಡೆಸಿದರು. ತೋಳಹುಣಸೆಯಿಂದ ಆನಗೋಡು ರೈಲು ನಿಲ್ದಾಣದವರೆಗೆ ಮೋಟಾರ್ ಟ್ರಾಲಿಯಲ್ಲಿ ಸಂಚರಿಸಿದ ಸಚಿವರು, ಅಧಿಕಾರಿಗಳಿಂದ ಕಾಮಗಾರಿಯ ಹಂತಗಳ ಬಗ್ಗೆ ಮಾಹಿತಿ ಪಡೆದರು.

ಭೂಸ್ವಾಧೀನ ವಿಳಂಬಕ್ಕೆ ಸಚಿವರ ಗರಂ
ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ರೈಲ್ವೆ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ನೆರೆಯ ಚಿತ್ರದುರ್ಗ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಆಮೆಗತಿಯಲ್ಲಿ ಸಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಯೋಜನೆಗೆ ಒಟ್ಟು ಸುಮಾರು 1,200 ಎಕರೆ ಜಮೀನಿನ ಅಗತ್ಯವಿದ್ದು, ಚಿತ್ರದುರ್ಗ ಜಿಲ್ಲೆಯಲ್ಲೇ ಇನ್ನೂ 111 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಬಾಕಿಯಿದೆ. ಈ ವಿಳಂಬದ ಬಗ್ಗೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ವಿ. ಸೋಮಣ್ಣ, ಬರುವ ಮಾರ್ಚ್ 31ರೊಳಗೆ ಯಾವುದೇ ಅಡ್ಡಿಯಿಲ್ಲದೆ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಸುಮಾರು 20 ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ಬೃಹತ್ ಯೋಜನೆ ನಾನಾ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಕಾಮಗಾರಿ ಚುರುಕುಗೊಂಡಿದ್ದು, ತೋಳಹುಣಸೆಯಿಂದ ಹೆಬ್ಬಾಳದವರೆಗೆ ಹಳಿ ಅಳವಡಿಕೆ ಕಾರ್ಯ ವೇಗವಾಗಿ ಸಾಗುತ್ತಿದೆ. ಭವಿಷ್ಯದಲ್ಲಿ ಹೆಚ್ಚಾಗಲಿರುವ ಜನಸಂಖ್ಯೆ ಹಾಗೂ ಪ್ರಯಾಣಿಕರ ದಟ್ಟಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಕನಿಷ್ಠ 21 ಬೋಗಿಗಳ ರೈಲುಗಳು ನಿರಾಯಾಸವಾಗಿ ನಿಲುಗಡೆಗೊಳ್ಳುವಂತೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಆದರೆ, ಕೆಲವು ಕಡೆ ಕಿಡಿಗೇಡಿಗಳು ಕಾಮಗಾರಿಗೆ ಕಲ್ಲು ತೂರಿ ಅಡ್ಡಿಪಡಿಸುತ್ತಿರುವ ಘಟನೆಗಳ ಬಗ್ಗೆ ಸಚಿವರು ಇದೇ ವೇಳೆ ತೀವ್ರ ಕಳವಳ ವ್ಯಕ್ತಪಡಿಸಿದರು.
ರಾಜ್ಯಕ್ಕೆ 7,800 ಕೋಟಿ ರೂ. ಅನುದಾನ
ರೈಲ್ವೆ ಇಲಾಖೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಈ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಒಟ್ಟು 52,000 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ಕರ್ನಾಟಕದ ವಿವಿಧ ರೈಲ್ವೆ ಯೋಜನೆಗಳಿಗಾಗಿಯೇ ಬರೋಬ್ಬರಿ 7,800 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದರ ಜೊತೆಗೆ ರಾಜ್ಯದ ರೈಲು ನಿಲ್ದಾಣಗಳ ನವೀಕರಣ, ಪ್ರಯಾಣಿಕರ ಸೌಲಭ್ಯಗಳು ಹಾಗೂ ಶೌಚಾಲಯಗಳ ಸಮರ್ಪಕ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ 2,093 ಕೋಟಿ ರೂ. ಒದಗಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪರಿಶೀಲನಾ ಕಾರ್ಯದ ವೇಳೆ ಉಪಸ್ಥಿತರಿದ್ದ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಸ್ಥಳೀಯ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು. ವಂದೇ ಭಾರತ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕು, ದಾವಣಗೆರೆ ಲಿಂಗೇಶ್ವರ ದೇವಸ್ಥಾನದ ಬಳಿ ಸುಸಜ್ಜಿತ ಸೇವಾ ರಸ್ತೆ ನಿರ್ಮಿಸಬೇಕು ಹಾಗೂ ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ ಮಾರ್ಗವಾಗಿ ಮುಂಬೈ ಮತ್ತು ಬೆಂಗಳೂರು ನಡುವೆ ಹೊಸ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಬೆಂಗಳೂರಿಗೆ ಕೇವಲ 2.5 ಗಂಟೆಗಳ ಪ್ರಯಾಣ
ಪ್ರಸ್ತುತ ದಾವಣಗೆರೆಯಿಂದ ರಾಜಧಾನಿ ಬೆಂಗಳೂರಿಗೆ ಸರ್ಕಾರಿ ಅಥವಾ ಖಾಸಗಿ ಬಸ್ ಮೂಲಕ ಪ್ರಯಾಣಿಸಲು ಕನಿಷ್ಠ 4 ರಿಂದ 5 ಗಂಟೆ ಬೇಕಾಗುತ್ತದೆ. ಸ್ವಂತ ಕಾರಿನಲ್ಲಿ ಬರುವವರಿಗೂ ಟ್ರಾಫಿಕ್ ಕಿರಿಕಿರಿ ಸೇರಿ 3 ರಿಂದ 4 ಗಂಟೆಗಳ ಸಮಯ ಹಿಡಿಯುತ್ತದೆ. ಆದರೆ, ಈ ನೂತನ ನೇರ ರೈಲು ಮಾರ್ಗ ಪೂರ್ಣಗೊಂಡರೆ, ಪ್ರಯಾಣದ ಅವಧಿ ಕೇವಲ 2 ಗಂಟೆ 30 ನಿಮಿಷಗಳಿಗೆ ಇಳಿಕೆಯಾಗಲಿದೆ.
-
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹ; ರಾಜ್ಯದ ಎಲ್ಲ ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಪತ್ರ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ












Click it and Unblock the Notifications