ಕೆ.ಜೆ.ಜಾರ್ಜ್ ಕಾಡಿದ 5 ಪ್ರಮುಖ ವಿವಾದಗಳು
ಬೆಂಗಳೂರು, ಜುಲೈ 18 : 'ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಪ್ರತಿಪಕ್ಷಗಳು ನನ್ನ ರಾಜೀನಾಮೆ ಕೇಳುತ್ತಿವೆ'. ಕಳೆದ ವಾರ ಕೆ.ಜೆ.ಜಾರ್ಜ್ ಅವರು ಸಂದರ್ಶನದಲ್ಲಿ ಹೇಳಿದ್ದ ಮಾತುಗಳಿವು. ಹೌದು, ಸಚಿವ ಸ್ಥಾನದಲ್ಲಿದ್ದಾಗ ಹೆಚ್ಚು ಬಾರಿ ವಿವಾದ ಹುಟ್ಟು ಹಾಕಿದವರು ಕೆ.ಜೆ.ಜಾರ್ಜ್.
2013ರ ಚುನಾವಣೆ ನಂತರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡರು. ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡುವಾಗಲೇ ಮಹತ್ವದ ಗೃಹ ಖಾತೆಯನ್ನು ಕೆ.ಜೆ.ಜಾರ್ಜ್ ಅವರಿಗೆ ವಹಿಸಿದರು. ಅಂದಿನಿಂದಲೂ ಜಾರ್ಜ್ ಅವರನ್ನು ಒಂದಿಲ್ಲೊಂದು ವಿವಾದಗಳು ಕಾಡಲಾರಂಭಿಸಿದವು. [ಗಣಪತಿ ಅವರ ಕೊನೆಯ ಮಾತುಗಳನ್ನು ನೋಡಿ]
ಸಚಿವ ಕೆ.ಜೆ.ಜಾರ್ಜ್ ಅವರು ಗೃಹ ಸಚಿವರಾಗಿದ್ದಾಗ ಅವರ ಸಲಹೆಗಾರರನ್ನಾಗಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ನೇಮಕ ಮಾಡಿದ್ದು, ದೊಡ್ಡ ಸುದ್ದಿಯಾಗಿತ್ತು. ಸಿದ್ದರಾಮಯ್ಯ ಅವರು ಕೆಂಪಯ್ಯ ನೇಮಕವನ್ನು ಸಮರ್ಥಿಸಿಕೊಂಡಿದ್ದರು. ಸಲಹೆಗಾರರನ್ನು ನೇಮಿಸಿ ಸಚಿವರು ಅಸಮರ್ಥರೆಂಬುದನ್ನು ಸಾಬೀತು ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. [ಜಾರ್ಜ್ ವಿರುದ್ಧ FIR : ಯಾರು, ಏನು ಹೇಳಿದರು?]
ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಹೆಸರು ಕೇಳಿಬಂದಿತ್ತು. ಸಾಯುವ ಮುನ್ನ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಗಣಪತಿ ಅವರು ಜಾರ್ಜ್ ಹೆಸರನ್ನು ಉಲ್ಲೇಖಿಸಿದ್ದರು. ಇದನ್ನು ಅಸ್ತ್ರವನ್ನಾಗಿ ಮಾಡಿಕೊಂಡ ಪ್ರತಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿದ್ದವು. ಜುಲೈ 18ರ ಸೋಮವಾರ ಸಂಜೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಗೃಹ ಖಾತೆಯಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆ ತನಕ ಜಾರ್ಜ್ರನ್ನು ಕಾಡಿದ ಪ್ರಮುಖ 5 ವಿವಾದಗಳ ಸಂಕ್ಷಿಪ್ತ ನೋಟ ಇಲ್ಲಿವೆ......[ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

'ಜಾರ್ಜ್ ಹೆಸರು ಹೇಳಿದ ಎಂ.ಕೆ.ಗಣಪತಿ'
ಮಂಗಳೂರು ಐಜಿ ಕಚೇರಿ ಡಿವೈಎಸ್ಪಿ ಎಂ.ಕೆ.ಗಣಪತಿ ಅವರು 'ನನಗೆ ಮುಂದೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಸುದ್ದಿವಾಹಿನಿಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಈ ಹೇಳಿಕೆಯಿಂದಾಗಿ ಜಾರ್ಜ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಜಾರ್ಜ್ ಲೇವಡಿ ಮಾಡಿದ್ದ ಪ್ರತಿಪಕ್ಷಗಳು
ಜಾರ್ಜ್ ಅವರು ಗೃಹ ಸಚಿವರಾಗಿದ್ದಾಗ ಗೃಹ ಸಚಿವರ ಸಲಹೆಗಾರರನ್ನಾಗಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ನೇಮಕ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಕೆಂಪಯ್ಯ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡುವ ಮೂಲಕ ಕೆ.ಜೆ. ಜಾರ್ಜ್ ಅವರು ಅಸಮರ್ಥರೆಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಬೀತು ಪಡಿಸಿದ್ದಾರೆ ಎಂದು ಪ್ರತಿಪಕ್ಷಗಳು ವ್ಯಂಗ್ಯವಾಡಿದ್ದವು.

ವಿವಾದ ಹುಟ್ಟು ಹಾಕಿದ ಟಿಆರ್ಪಿ ಹೇಳಿಕೆ
ಜಾರ್ಜ್ ಅವರು ಗೃಹ ಸಚಿವರಾಗಿದ್ದಾಗ 'ಅತ್ಯಾಚಾರದ ಸುದ್ದಿಗಳನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ. ಟಿಆರ್ಪಿಗಾಗಿ ಮಾಧ್ಯಮಗಳು ಈ ಸುದ್ದಿಯನ್ನು ಸೆನ್ಸೇಷನಲ್ ಮಾಡುತ್ತಿದೆ. ಬೆಂಗಳೂರನ್ನು ರೇಪ್ ಸಿಟಿ ಎಂದು ಬಿಂಬಿಸುವ ಬದಲು ತಪ್ಪಿತಸ್ಥರ ಬಗ್ಗೆ ವರದಿ ಮಾಡಿ' ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿದ್ದ ಪ್ರತಿಪಕ್ಷಗಳು
ಕಲಬುರಗಿಯಲ್ಲಿ ಸುಫಾರಿ ಹಂತಕ ಮುನ್ನಾ ಜೊತೆಗಿನ ಗುಂಡಿನ ಕಾಳಗದಲ್ಲಿ ಗುಂಡೇಟು ತಿಂದು ಗಾಯಗೊಂಡಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಪ್ರಕರಣದಲ್ಲಿ ಅಂದಿನ ಗೃಹ ಸಚಿವರ ಅಸಮರ್ಥತೆ ಇದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು.

ಚುನಾವಣಾ ಪ್ರಚಾರದ ವಿವಾದ
2014ನೇ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅವರೊಂದಿಗೆ ರೌಡಿ ಶೀಟರ್ ಬ್ರಿಗೇಡ್ ಅಜಂ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಪ್ರಚಾರ ವಾಹನದಲ್ಲಿ ಅಂದು ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಇದ್ದರು. ಈ ಬಗ್ಗೆ ಹೇಳಿಕೆ ನೀಡಿದ್ದ ಅವರು, 'ಪ್ರಚಾರ ವಾಹನದಲ್ಲಿ ಯಾರಿದ್ದರು ಎಂಬುದನ್ನು ನಾವು ಸ್ಕ್ಯಾನ್ ಮಾಡಿ ನೋಡಲಾಗುವುದಿಲ್ಲ' ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದರು.

ಈ ವಿವಾದಗಳು ಅವರನ್ನು ಕಾಡಿದ್ದವು
* ಬೆಂಗಳೂರು ಎಟಿಎಂನಲ್ಲಿನ ಹಲ್ಲೆ ಪ್ರಕರಣ
* ರಾಜ್ಯದಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣ
* ಸೌಜನ್ಯ ಕೊಲೆ ಪ್ರಕರಣ ಮುಂತಾದವುಗಳನ್ನು ಪ್ರಸ್ತಾಪಿಸಿ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಲಾಗಿತ್ತು.












Click it and Unblock the Notifications