ಮೀಟರ್ ಬಡ್ಡಿ ವಸೂಲಿ ಮಾಡಿದ್ರೆ ಜೈಲು ಗ್ಯಾರಂಟಿ
ಕೊಪ್ಪಳ, ಜುಲೈ,17 : ಸರ್ಕಾರ ನಿಗದಿಪಡಿಸಿರುವ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುವ ಲೇವಾದೇವಿ, ಗಿರವಿ ಹಾಗೂ ಹಣಕಾಸು ಸಂಸ್ಥೆಗಳ ಪರವಾನಗಿ ರದ್ದುಪಡಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಲೇವಾದೇವಿ ನಿಬಂಧಕ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕ ಡಾ. ಜಿ. ಉಮೇಶ ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಲೇವಾದೇವಿ,ಗಿರವಿ ಹಾಗೂ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಭದ್ರತೆ ಇರುವ ಸಾಲಗಳಿಗೆ 14% , ಭದ್ರತೆ ಇಲ್ಲದಿರುವ ಸಾಲಗಳಿಗೆ 16% ದರದಂತೆ ಮಾತ್ರ ಬಡ್ಡಿ ಪಡೆಯಬೇಕು. ಈ ದರಕ್ಕಿಂತ ಹೆಚ್ಚಾಗಿ ಬಡ್ಡಿ ವಸೂಲಿ ಮಾಡಿದಲ್ಲಿ ಪರವಾನಗಿ ರದ್ದುಪಡಿಸಲಾಗುವುದು.[ತುಮಕೂರು : ಮೀಟರ್ ಬಡ್ಡಿ ದಂಧೆ ತಡೆಯಲು ಸಹಾಯವಾಣಿ]

ಲೇವಾದೇವಿ ಸಂಸ್ಥೆಗಳು, ವ್ಯವಹಾರ ಮಾಡುವ ಸಂಸ್ಥೆಗಳಲ್ಲಿ ತಾವು ಪಡೆಯುವ ಬಡ್ಡಿ ದರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಪಾನ್ ಟಿಕೆಟ್ ನ್ನು ಕನ್ನಡದಲ್ಲಿ ಮುದ್ರಿಸಿ ನಿರ್ವಹಿಸಬೇಕು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಪರವಾನಗಿ ಪಡೆಯದೇ ಅಕ್ರಮವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಲೇವಾದೇವಿ ಕಾಯ್ದೆಯಡಿ ಕ್ರಮ ಕೈಗೊಳ್ಳುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ನಿಗದಿತ ದರಕ್ಕಿಂತ ಹೆಚ್ಚಿನ ಬಡ್ಡಿದರ ವಸೂಲಿ ಮಾಡುವಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಕೊಪ್ಪಳ ಜಿಲ್ಲೆ, ಕೊಪ್ಪಳ ದೂ: 08539-221109 ಅಥವಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕೊಪ್ಪಳ ಉಪ ವಿಭಾಗ, ಕೊಪ್ಪಳ ದೂ: 08539-221601 ಇವರಲ್ಲಿ ದೂರು ನೀಡಬಹುದಾಗಿದೆ.












Click it and Unblock the Notifications