ಇನ್ನು ಮುಂದೆ ಪ್ರತಿ ವರ್ಷ ಟಿಪ್ಪು ಜಯಂತಿ, ನವೆಂಬರ್ 10 ದಿನ ನಿಗದಿ
ಬೆಂಗಳೂರು, ಅಕ್ಟೋಬರ್ 7: ಕಳೆದ ವರ್ಷ ನವೆಂಬರ್ 10ರಂದು ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ವಿರೋಧ ವ್ಯಕ್ತವಾಗಿತ್ತು. ಇನ್ನು ಈ ಸಲದಿಂದ ಪ್ರತಿ ವರ್ಷವೂ ಟಿಪ್ಪು ಜಯಂತಿ ನಡೆಸಲು ರಾಜ್ಯ ಸರಕಾರವು ತೀರ್ಮಾನಿಸಿದೆ. ನವೆಂಬರ್ 10ಕ್ಕೆ ದಿನ ಕೂಡ ನಿಗದಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಿದ್ದು, ಈ ಬಾರಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಕಳೆದ ಸಲದಂತೆ ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಯುವುದಿಲ್ಲ. ಈ ವಿಷಯವನ್ನು ದೊಡ್ಡದು ಮಾಡದೆ, ಯಾವುದೇ ವಿವಾದಕ್ಕೆ ಎಡೆ ಮಾಡದಂತೆ ನೋಡಿಕೊಳ್ಳುವುದಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ನಿರ್ದೇಶಕ ಎಸ್.ಆರ್.ಉಮಾಶಂಕರ್ ಹೇಳುವಂತೆ, ಎಲ್ಲ ಜಿಲ್ಲೆಗಳಲ್ಲೂ ಟಿಪ್ಪು ಜಯಂತಿ ಆಚರಿಸಲು ಅರವತ್ತು ಲಕ್ಷ ರುಪಾಯಿ ಮೀಸಲಿಡಲಾಗಿದೆ.[ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿಸಿ ಕೊಡವರ ಅರ್ಜಿ]
ಇತಿಹಾಸಕಾರರು, ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ಟಿಪ್ಪು ಹುಟ್ಟಿದ ದಿನದ ಬಗ್ಗೆ ಇರುವ ಅನುಮಾನವನ್ನು ಬಗೆಹರಿಸಿಕೊಂಡ ನಂತರ ದಿನವನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸಿ, ವಿವಿಧೆಡೆ ಅಹಿತಕರ ಘಟನೆಗಳು ನಡೆದಿದ್ದವು. ಆ ನಿರ್ಧಾರದ ವಿರುದ್ಧ ಬಿಜೆಪಿ ಹಾಗೂ ಆರ್ ಎಸ್ ಎಸ್ ನಿಂದ ಪ್ರತಿಭಟನೆಗಳಾಗಿದ್ದವು.
ನವೆಂಬರ್ 20 ಟಿಪ್ಪು ಜನ್ಮದಿನ. ನವೆಂಬರ್ 10, ಆತ ಏಳು ನೂರು ಮೇಲುಕೋಟೆ ಅಯ್ಯಂಗಾರರನ್ನು ನೇಣು ಹಾಕಿ ಕೊಂದ ದಿನ ಎಂದು ಕೆಲವರು ಹೇಳಿದ್ದರು. ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವೇಳೆ ನಡೆದ ಮೆರವಣಿಗೆಯಲ್ಲಿ ಗಲಭೆಯಾಗಿ ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದರು.[ಟಿಪ್ಪು ದಿನಾಚರಣೆ ವಿರೋಧಿಸಿ ಕೊಡಗು ಬಂದ್]
ಟಿಪ್ಪು ಬಗ್ಗೆ ಕೊಡವರಲ್ಲಿ ಸಿಟ್ಟಿದೆ. ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಟಿಪ್ಪು ಜಯಂತಿ ಆಚರಿಸುವ ಅಗತ್ಯವಾದರೂ ಏನಿದೆ? ಕೆಲವರು ಆತನನ್ನು ಜಾತ್ಯತೀತವಾದಿ ಎಂದರೂ, ಹಲವರು ಅತನನ್ನು ಕೋಮುವಾದಿ ಎನ್ನುತ್ತಾರೆ. ಏಕೆಂದರೆ ಅತ ಹಲವಾರು ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ ಎನ್ನುತ್ತಾರೆ.