ಮತ್ತೆ ವಿವಾದಲ್ಲಿ ಟಿಪ್ಪು ಜಯಂತಿ : ಯಾರು, ಏನು ಹೇಳಿದರು?
ಬೆಂಗಳೂರು, ನವೆಂಬರ್ 05 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆ ಮಾಡುವುದಾಗಿ ಘೋಷಣೆ ಮಾಡಿದೆ. ಪ್ರತಿಪಕ್ಷ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಜಯಂತಿ ಆಚರಣೆ ಬೇಡ ಎಂದು ಸರ್ಕಾರವನ್ನು ಆಗ್ರಹಿಸುತ್ತಿವೆ.
ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸೋಮವಾರ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನವೆಂಬರ್ 10ರಂದು ರಾಜ್ಯದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದರು.
ಟಿಪ್ಪು ಜಯಂತಿ ಓಕೆ, ಆದರೆ ಪರ, ವಿರೋಧಿ ಮೆರವಣಿಗೆಗೆ ಅವಕಾಶವಿಲ್ಲ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದ್ದು, ಹಣ ಬಿಡುಗಡೆ ಮಾಡಲಾಗಿದೆ.
ಕೊಡಗಿನಲ್ಲಿ 'ಟಿಪ್ಪು' ಹೆಸರನ್ನ ನಾಯಿಗಳಿಗೆ ಇಡ್ತಾರೆ: ಪ್ರತಾಪ್ ಸಿಂಹ
ಟಿಪ್ಪು ಜಯಂತಿ ಆಚರಣೆ ಮಾಡಲು ಸರ್ಕಾರ ಸಕಲ ಸಿದ್ಧತೆ ನಡೆಸುತ್ತಿದೆ. ಸರ್ಕಾರದ ವತಿಯಿಂದ ಮುಸ್ಲಿಂ ಧರ್ಮಗುರುಗಳಾದ ಆಮೀರ್ ಇ ಶಾರಿಯತ್ ಅವರಿಗೆ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಲು ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ.
'ಯಾರೂ ವಿರೋಧ ಮಾಡಿದರೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ'
ಕಾನೂನು ಸುವ್ಯವಸ್ಥೆ
ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಟಿಪ್ಪು ಜಯಂತಿ ಬಗ್ಗೆ ಹೇಳಿಕೆ ನೀಡಿದ್ದು, 'ಯಾರೂ ಸಹ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. ಶಾಂತಿ ಭಂಗ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರು ಕಾರ್ಯಕ್ರಮ ನಡೆಸಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ನಾವು ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದೇವೆ. ಜನರನ್ನು ಪ್ರಚೋದಿಸುವ ಹೇಳಿಕೆ ನೀಡಿದರೆ ಪರಿಶೀಲನೆ ಮಾಡುತ್ತೇವೆ' ಎಂದು ಹೇಳಿದರು.
ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ
'ಕಾಂಗ್ರೆಸ್ ಮಾಡಿದ ತಪ್ಪನ್ನು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವೂ ಮಾಡಲು ಹೊರಟಿದೆ. ವೋಟಿನ ಆಸೆಗೆ ಬಾಬರ್, ಲಾಡೆನ್ ಜಯಂತಿ ಆಚರಣೆಯನ್ನು ಮಾಡಿದರೂ ಅಚ್ಚರಿಯಿಲ್ಲ. ಟಿಪ್ಪು ಜಯಂತಿಗೆ ವಿರೋಧವಿದೆ. ಆಕ್ರಮಣ ಮಾಡಿದವರ ಜಯಂತಿ ಆಚರಣೆ ನಾಡಿಗೆ ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯದಲ್ಲಿ ಯಾವುದೇ ಅನಾಹುತ ಘಟಿಸಿದರೂ ಅದಕ್ಕೆ ಸರ್ಕಾರವೇ ಹೊಣೆ' ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.
ಬಿಜೆಪಿಯವರು ವಿವಾದ ಮಾಡುತ್ತಿದ್ದಾರೆ
ಸಚಿವ ಜಮೀರ್ ಅಹಮದ್ ಖಾನ್ ಅವರು ಟಿಪ್ಪು ಜಯಂತಿ ಬಗ್ಗೆ ಹೇಳಿಕೆ ನೀಡಿದ್ದು, 'ಟಿಪ್ಪು ಜಯಂತಿಯನ್ನು ಬಿಜೆಪಿಯವರು ಕೇವಲ ವೋಟ್ ಬ್ಯಾಂಕ್ಗಾಗಿ ವಿವಾದ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಚುನಾವಣಾ ಪ್ರಚಾರಕ್ಕೆ ಯಾವುದೇ ವಿಚಾರವಿಲ್ಲ. ಹೀಗಾಗಿ ಟಿಪ್ಪು ಜಯಂತಿಯನ್ನು ತೆಗೆದುಕೊಂಡಿದ್ದಾರೆ' ಎಂದು ಆರೋಪಿಸಿದರು.
ನಾವು ಪ್ರತಿಭಟನೆ ಮಾಡಲಿದ್ದೇವೆ
'ಕರ್ನಾಟಕ ಸರ್ಕಾರ ಒಬ್ಬ ಮತಾಂಧ, ಕನ್ನಡ ಭಾಷೆಯ ವಿರೋಧಿ, ಪರ್ಷಿಯನ್ ಭಾಷೆಯ ಪ್ರೇಮಿ ಟಿಪ್ಪುವಿನ ಜಯಂತಿಯನ್ನು ಆಚರಿಸಲು ಮುಂದಾಗಿದೆ. ಟಿಪ್ಪು ಜಯಂತಿ ಆಚರಣೆ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಬಹಳ ಮುಖ್ಯವಾಗಿ ಮೈಸೂರು ಭಾಗದಲ್ಲಿ ನಮ್ಮ ಪ್ರತಿಭಟನೆ ಜೋರಾಗಿರುತ್ತದೆ' ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಹೇಳಿದರು.
ಟಿಪ್ಪು ಜಯಂತಿ ಆಚರಣೆ ಕೈ ಬಿಡಿ
'ಎಚ್.ಡಿ.ಕುಮಾರಸ್ವಾಮಿ ಅವರು ತಾವೇ ವಿರೋಧಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡಬೇಕು. ಆಗಿನ ಸಿದ್ದರಾಮಯ್ಯ ಸರ್ಕಾರ ಯಾವುದೇ ಸಂಘಟನೆಗಳ ಬೇಡಿಕೆಗಳಿಲ್ಲದೇ ಮತಗಳಿಸುವ ತಂತ್ರದ ಭಾಗವಾಗಿ ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ಆರಂಭಿಸಿತು' ಎಂದು ಬಿಜೆಪಿ ಶಾಸಕ ವಿಶ್ವೇಶ್ವರ ಹೆಗೆಡೆ ಕಾಗೇರಿ ಹೇಳಿದರು.