ಟಿಪ್ಪು ದಿನಾಚರಣೆ ವಿರೋಧಿಸಿ ಕೊಡಗು ಬಂದ್
ಮಡಿಕೇರಿ, ನವೆಂಬರ್, 09: ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡ ಕ್ರಮಕ್ಕೆ ಕೊಡಗು ಜಿಲ್ಲಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಇವರ ಆಶ್ರಯದಲ್ಲಿ ನ.10 ರಂದು ಬೆಳಗ್ಗೆ 11 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಟಿಪ್ಪು ಸುಲ್ತಾನ್ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಕೊಡಗು ಬಂದ್ ಗೆ ಕರೆ ನೀಡಿವೆ. ಮತ್ತೊಂದೆಡೆ ದಿನಾಚರಣೆಗೆ ಕೆಲವು ಸಂಘಟನೆಗಳು ಬೆಂಬಲ ನೀಡಿವೆ. ಒಟ್ಟಾರೆ ಪರ ವಿರೋಧಗಳು ವ್ಯಕ್ತವಾಗಿದ್ದು, ಇದರ ನಡುವೆಯೇ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಅಚ್ಚು ಹಾಕಲಾಗಿದ್ದರೂ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವುದು ಅನುಮಾನ.[ಟಿಪ್ಪು ಜಯಂತಿ ಆಚರಣೆಗೆ ವಿರೋಧ ಯಾಕೆ?]
ಜಿಲ್ಲಾಡಳಿತ ಕಾರ್ಯಕ್ರಮಕ್ಕೂ ಮೊದಲು ನಗರದ ಗದ್ದಿಗೆಯಿಂದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತಾದರೂ ಅದನ್ನು ಇದೀಗ ಕೈಬಿಡಲಾಗಿದೆ. ಜತೆಗೆ ಭದ್ರತಾ ದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಟಿಪ್ಪು ಸುಲ್ತಾನ್ ಜನ್ಮದಿನಾಚರಣೆಗೆ ಮುಂದಾಗಿರುವುದನ್ನು ಕೊಡವ ಸಮಾಜವು ಖಂಡಿಸಿದ್ದು, ಸಮಾಜದ ಅಧ್ಯಕ್ಷ ಮಣವಟ್ಟೀರ ಮಾಚಯ್ಯ ಅವರು ಟಿಪ್ಪು ಸುಲ್ತಾನ್ ಒಬ್ಬ ಧರ್ಮಾಂಧನಾಗಿದ್ದ ಎನ್ನುವುದಕ್ಕೆ ಅನೇಕ ದಾಖಲೆಗಳಿವೆ. ಈತ ಕೊಡಗಿನಲ್ಲಿ ಅನೇಕ ದೇವಾಲಯಗಳನ್ನು ಭಗ್ನ ಗೊಳಿಸಿರುವುದನ್ನು ಇಂದಿಗೂ ಕಾಣಬಹುವುದು. ದೇವಟ್ಟಿ ಪರಂಬುವಿನಲ್ಲಿ ಕೊಡವರ ಹತ್ಯೆ ಮಾಡಿರುವುದಕ್ಕೂ ದಾಖಲೆ ಇದೆ. ಇಂಥ ಕ್ರೂರ ಇತಿಹಾಸವನ್ನು ಹೊಂದಿರುವ ಟಿಪ್ಪುವಿನ ಜನ್ಮದಿನವನ್ನು ಆಚರಿಸಲು ಸರಕಾರ ಮುಂದಾಗಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.
ಕೊಡಗು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ತಿಳಿಸಿದ್ದಾರೆ. ಒಟ್ಟಾರೆ ಕೊಡಗಿನಲ್ಲಿ ಟಿಪ್ಪು ದಿನಾಚರಣೆಗೆ ವಿರೋಧ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆ ಮಾಡಿದೆ.