ಟಿಪ್ಪು: ತಪ್ಪು-ಒಪ್ಪುಗಳ ಬಗ್ಗೆ ಚರ್ಚಿಸೋಣ: ಇದು ಬಹಿರಂಗ ಸವಾಲಲ್ಲ, ಮುಕ್ತ ಆಹ್ವಾನ
ಟಿಪ್ಪು ಜಯಂತಿ ಆಚರಿಸಬೇಕೇ, ಬೇಡವೇ ಎನ್ನುವ ಗದ್ದಲ, ಸಮರ್ಥನೆ ಈ ವರ್ಷವೂ ಮುಂದುವರಿದಿದೆ. ಈ ಸಂದರ್ಭದಲ್ಲಿ ಟಿ ಗುರುರಾಜ್ ಅವರು ತಮ್ಮ ಫೇಸ್ ಬುಕ್ ಟೈಂಲೈನಿನಲ್ಲಿ ಹಾಕಿರುವ ಪೋಸ್ಟ್ ಅನ್ನು ಯಥವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ (ಸಂ)
ಪ್ರಿಯರೇ, ಟಿಪ್ಪು ಜಯಂತಿಯ ಬೆನ್ನಲ್ಲಿ ಈ ನೆಲದ ಹಿಂದೂ - ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮತ್ತೆ ಆರಂಭವಾಗಿದೆ. ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಧರ್ಮಕ್ಕೆ ಬೆಂಕಿ ಇಡುವ ಹೊಲಸು ಕೆಲಸವನ್ನು ನಡೆಸಲಾಗುತ್ತಿದೆ.
ಟಿಪ್ಪು ಎಂಬ ಹೆಸರನ್ನು ಕೇವಲ ನೆಪವಾಗಿಟ್ಟುಕೊಂಡು, ಎರಡು ಕೋಮುಗಳ ನಡುವೆ ಕಿಚ್ಚು ಹಚ್ಚಿ ಸಂಭ್ರಮಿಸುವ ಕೊಳಕು ಮನಸ್ಸುಗಳು , ತಮ್ಮ ಸ್ವಾರ್ಥಕ್ಕೆ ಅಮಾಯಕರ ರಕ್ತ ತರ್ಪಣ ನೀಡಲು ಸಜ್ಜಾಗುತ್ತಿವೆ. ಸರಿ ಸುಮಾರು ಎರಡೂವರೆ ಶತಮಾನಗಳ ಹಿಂದೆ ಆಳಿ , ಅಳಿದುಹೋದ ರಾಜನನ್ನು, ಸಮಾಧಿಯಿಂದ ಹೊರಗೆಳೆದು ಮತ್ತೆ-ಮತ್ತೆ ಇರಿದಿರಿದು ಕೊಲ್ಲಲಾಗುತ್ತಿದೆ.
ಟಿಪ್ಪು ಓರ್ವ ರಾಜನಾಗಿದ್ದ ಎಂಬುದಕ್ಕಿಂತ ಹೆಚ್ಚಾಗಿ , ಆತನೂ ಓರ್ವ ಮನುಷ್ಯನಾಗಿದ್ದ ಎನ್ನುವುದನ್ನು ಮರೆಯಲಾಗುತ್ತಿದೆ. ತಾನು ಹುಟ್ಟಿದ ಧರ್ಮಕ್ಕೆ ಸಹಜವಾಗಿಯೇ ನಿಷ್ಠನಾಗಿದ್ದ ಆ ಸುಲ್ತಾನ, ತನ್ನ ರಾಜ್ಯದಲ್ಲಿದ್ದ ಬಹುಸಂಖ್ಯಾತರ ಧಾರ್ಮಿಕ ಆಚರಣೆ, ಪೂಜಾ ವಿಧಿ ವಿಧಾನಗಳಿಗೆ ಕಟ್ಟು ಹಾಕಿರಲಿಲ್ಲ. ಟಿಪ್ಪುವಿನ ಕಾಲದಲ್ಲಿ ಇಸ್ಲಾಂ ವೈಭವೀಕೃತಗೊಂಡು , ಹಿಂದೂ ಧರ್ಮ ಅವನತಿಗೊಂಡಿರಲಿಲ್ಲ.
ಟಿಪ್ಪು ತನ್ನ ಧರ್ಮಕ್ಕೆ ನೀಡಿದ ಕೊಡುಗೆಗಳು ಎಲ್ಲಿಯೂ ಉಲ್ಲೇಖಗೊಂಡಿಲ್ಲ. ಬದಲಿಗೆ ಆತ ಹಿಂದೂ ನೆಲೆಗೆ ನೀಡಿದ - ಮಾಡಿದ ಸಾಕಷ್ಟು ಕೆಲಸಗಳು ಚರಿತ್ರೆಯ ಪುಟದಲ್ಲಿ ದಾಖಲಾಗಿವೆ. ಹಾಗಂಥ ಟಿಪ್ಪು ತಪ್ಪುಗಳನ್ನೇ ಮಾಡದ , ಒಪ್ಪವಾದ ಮಹಾ ಪುರುಷನೆಂದು ವಾದಿಸುವುದು ನನ್ನ ಉದ್ದೇಶವಲ್ಲ. ಆತನಿಂದ ನಡೆದಿರಬಹುದಾದ ಪ್ರಮಾದಗಳ ಪಟ್ಟಿ ನಿಮ್ಮಲ್ಲಿದ್ದರೆ ಆಧಾರ ಸಮೇತ ನಿರೂಪಿಸಿ ,ಹಾಗೆಯೇ ಒಳ್ಳೆಯ ಸಂಗತಿಗಳನ್ನೂ ಸಮಾಜದ ಮುಂದಿಡಿ. ಮುಂದೆ ಓದಿ..

ಯಾವುದೇ ವೇದಿಕೆಯಲ್ಲಿ ಉತ್ತರ ನೀಡಲು ನಾನು ಸಿದ್ದನಿದ್ದೇನೆ
ಹೆಚ್ಚು ಮಾತುಗಳು ಬೇಕಿಲ್ಲ. ನನ್ನ ಈ ಮಾತುಗಳನ್ನು ಅಹಂಕಾರದ ಪರಮಾವಧಿ ಎಂದು ಭಾವಿಸುವುದು ಬೇಡ ಎಂಬವಿನಯದೊಂದಿಗೆ ಈ ಮನವಿಯನ್ನು ಮಾಡುತ್ತಿದ್ದೇನೆ. ಟಿಪ್ಪು ಕುರಿತಂತೆ ಹುಟ್ಟಿಸಲಾಗುತ್ತಿರುವ, ಎಬ್ಬಿಸಲಾಗುತ್ತಿರುವ ಎಲ್ಲ ಪ್ರಶ್ನೆಗಳಿಗೆ , ಷಡ್ಯಂತ್ರ ಮತ್ತು ಹುನ್ನಾರಗಳಿಗೆ ಯಾವುದೇ ವೇದಿಕೆಯಲ್ಲಿ ಉತ್ತರ ನೀಡಲು ನಾನು ಸಿದ್ದನಿದ್ದೇನೆ.

ಟಿಪ್ಪುವಿನ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಾನು ಸಿದ್ದನಿದ್ದೇನೆ
ಸಾಹಿತ್ಯ ಸರಸ್ವತಿಯ ವರಪುತ್ರನೆಂದೇ ಹೇಳಬಹುದಾದ ಮತ್ತು ನನ್ನ ಓದಿನ ಹಾದಿಯಲ್ಲಿ ಹೊಸ ಬೆಳಕು ಮತ್ತು ಅರಿವನ್ನು ವಿಸ್ತರಿಸಿದ ಖ್ಯಾತ ಸಾಹಿತಿ ಡಾ. ಎಸ್ಎಲ್. ಭೈರಪ್ಪನವರೂ ಸೇರಿದಂತೆ ಈ ನಾಡಿನ ಹಿರಿಯ ಸಂಶೋಧಕರಾದ ಡಾ. ಚಿದಾನಂದ ಮೂರ್ತಿ, ಸಂಸತ್ ಸದಸ್ಯರೂ ಆದ , ಖ್ಯಾತ ಪತ್ರಕರ್ತ ಪ್ರತಾಪ ಸಿಂಹ. ಹಿಂದೂ ಪರ ಹೋರಾಟಗಾರರಾದ ಪ್ರಮೋದ್ ಮುತಾಲಿಕ್, ಸಂಸ್ಕೃತಿ ಚಿಂತಕರೆನಿಸಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಇವರೆಲ್ಲರ ಎದುರು ಅಥವಾ ಇವರ ಪೈಕಿ ಯಾರೇ ಆದರೂ ಟಿಪ್ಪುವಿನ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಾನು ಸಿದ್ದನಿದ್ದೇನೆ.

ನನ್ನ ಈ ಪ್ರಯತ್ನದ ಹಿಂದಿರುವುದು ಸತ್ಯದ ಹುಡುಕಾಟ ಮಾತ್ರ
ಟಿಪ್ಪು ಮಾಡಿದ ಅನ್ಯಾಯಗಳೇನು , ಆತ ಮತಾಂಧನೆ, ಹಿಂದೂ ದ್ರೋಹಿಯೇ , ದೇವಾಲಯಗಳ ಭಂಜಕನೇ , ಕನ್ನಡ ವಿಧ್ವಂಸಿಯೇ , ಮತಾಂತರಿಯೇ , ಕ್ರೂರಿಯೇ , ಹಂತಕನೇ- ಎಂಬೆಲ್ಲ ಸಂಗತಿಗಳು ರಾಜ್ಯದ ಜನರೆದುರು ಬಿಚ್ಚಿಕೊಳ್ಳಲಿ. ಹುದುಗಿಟ್ಟ ಸತ್ಯ ಹೊರಬರಲಿ. ನನ್ನ ಈ ಪ್ರಯತ್ನದ ಹಿಂದಿರುವುದು ಸತ್ಯದ ಹುಡುಕಾಟ ಮಾತ್ರ. ಈ ನೆಲದ ಮುಸ್ಲಿಮರನ್ನು ಓಲೈಸುವುದಕ್ಕೆ ನಾನು ರಾಜಕಾರಣಿಯಲ್ಲ. ಟಿಪ್ಪುವನ್ನು ಹೊಗಳುವುದರಿಂದ ನನಗೆ ಯಾವ ಕಿರೀಟವೂ ದೊರಕುವುದಿಲ್ಲ ; ಅದರ ಅಗತ್ಯವೂ ನನಗಿಲ್ಲ. ಹಿಂದೂಗಳ ಭಗವದ್ಗೀತೆಗಿಂತ , ಮುಸ್ಲಿಮರ ಖುರಾನಿಗಿಂತಲೂ ದೊಡ್ಡದಾದ , ನನ್ನ ದೇಶದ ಸಂವಿಧಾನವೇ ನನಗೆ ಪವಿತ್ರ ಗ್ರಂಥ.

ನನಗೆ ಮನುಷ್ಯ ಧರ್ಮವೇ ದೊಡ್ಡದು
ಭರತ ಭೂಮಿಯ ಹಿರಿಮೆಗಿಂತ ಯಾವ ಜಾತಿಯೂ ನನಗೆ ದೊಡ್ಡದಲ್ಲ. ಹಿಂದೂ - ಮುಸ್ಲಿಂ ಎಂಬ ನಿಮ್ಮಿಬ್ಬರ ಸೀಮಿತ ಧರ್ಮಕ್ಕಿಂತ ನನಗೆ ಮನುಷ್ಯ ಧರ್ಮವೇ ದೊಡ್ಡದು. ಮನುಷ್ಯ - ಮನುಷ್ಯರ ನಡುವೆ ಒಡಕುಂಟು ಮಾಡುವ ಕೆಟ್ಟ ಕೆಲಸದ ಬದಲು , ಕಟ್ಟಿರುವ ಗೋಡೆಯನ್ನು ಕೆಡವಲು ಆದೀತಾ ಎಂಬುದಷ್ಟೇ ನನ್ನ ಕನಸು. ಬನ್ನಿ ಯಾರಾದರೂ ಸರಿ - ಟಿಪ್ಪು : ತಪ್ಪು - ಒಪ್ಪುಗಳ ಬಗ್ಗೆ ಬಹಿರಂಗವಾಗಿ ಚರ್ಚಿಸೋಣ . ಗದ್ದಲ - ಗಲಭೆಗಳಿಗೆ ಆಸ್ಪದ ನೀಡದ ಹಾಗೆ ಕವಿದಿರುವ ಕತ್ತಲೆಗೆ ಬೆಳಕಿನ ಸ್ಪರ್ಶ ನೀಡೋಣ. ಸರಿ - ತಪ್ಪುಗಳೆರಡೂ ಹೊರ ಬರಲಿ , ಯಾರು ಸರಿ, ಯಾವುದು ಸರಿ ಎಂಬುದನ್ನು ಕನ್ನಡಿಗರೇ ನಿರ್ಧರಿಸಲಿ.

ನನ್ನೀ ಮಾತುಗಳಿಗೆ ಅನಗತ್ಯ ಬಣ್ಣ ಬೇಡ
ನೆನಪಿರಲಿ - ಇದು ಬಹಿರಂಗ ಸವಾಲಲ್ಲ ; ಮುಕ್ತ ಆಹ್ವಾನ . ಧಾರ್ಮಿಕ ಸಂಘಟನೆಗಳಲ್ಲದ , ರಾಜಕೀಯದಿಂದ ಹೊರತಾದ ಯಾವುದೇ ವೇದಿಕೆಯಲ್ಲಿ ಮಾತು- ಕಥೆ ನಡೆಸಲು ನಾನು ಸಿದ್ದನಿದ್ದೇನೆ. ಸ್ಥಳ ಮತ್ತು ದಿನವನ್ನು ನಿಗದಿ ಮಾಡಿ, ನಿಮ್ಮೊಡನೆ ವಿಚಾರ ವಿನಿಮಯಕ್ಕೆ ನಾನು ತಯ್ಯಾರಿದ್ದೇನೆ. ನನ್ನೀ ಮಾತುಗಳಿಗೆ ಅನಗತ್ಯ ಬಣ್ಣ ಬೇಡ. ಮೊದಲೇ ಹೇಳಿದ್ದೇನೆ , ಸವಾಲು ಹಾಕುವಷ್ಟು ದಾರ್ಷ್ಟ್ಯ ನನಗಿಲ್ಲ. ಯಾರನ್ನೂ ಓಲೈಸುವ , ಹೀಗಳೆಯುವ ಆಸಕ್ತಿಯೂ ನನಗಿಲ್ಲ.
ಇದೇನಿದ್ದರೂ ಬೆಳಕಿನ ಹುಡುಕಾಟ ಮಾತ್ರ . ಈ ನನ್ನ ಆಹ್ವಾನ ಮತ್ತೊಂದು ಗುಂಡಿಗೆ ಕರೆಯೋಲೆಯಾದೀತೆಂಬ ಕೆಲವು ಗೆಳೆಯರ ಎಚ್ಚರಿಕೆಯ ನಡುವೆಯೂ ಮುಂದಾಗಿದ್ದೇನೆ. ಬಂದದ್ದೆಲ್ಲವೂ ಬರಲಿ, ನಿಮ್ಮ ಹಾರೈಕೆಯ ಬಲವೊಂದಿರಲಿ. ಪ್ರೀತಿಯಿರಲಿ, ಟಿ. ಗುರುರಾಜ್












Click it and Unblock the Notifications