ಹುಲಿ ಉಗುರು ಪೆಂಡೆಂಟ್: ಮತ್ತೊಬ್ಬ ಬಿಜೆಪಿ ನಾಯಕನ ಮನೆ ತಲಾಶ್, ಲಾಕೆಟ್ ವಶಕ್ಕೆ
ವಿಜಯಪುರ, ಅಕ್ಟೋಬರ್ 26: ರಾಜ್ಯದಲ್ಲಿ ಅರಣ್ಯಾಧಿಕಾರಿಗಳು ಹುಲಿ ಉಗುರು ಧರಿಸಿದವರ ಭೇಟೆ ಆರಂಭಿಸಿದ್ದಾರೆ. ಬಿಜೆಪಿಯ ಮತ್ತೊಬ್ಬ ಮುಖಂಡನ ಮನೆಯಲ್ಲಿ ಅರಣ್ಯಾಧಿಕಾರಿಗಳು ಪರಿಶೀಲಿಸಿ ಹುಲಿ ಉಗುರಿನ ಪೆಂಡೆಂಟ್ ಅನ್ನು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.
ವಿಜಯಪುರದ ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ಅವರ ಮನೆಗೆ ಗುರುವಾರ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಾಯಕನ ಪುತ್ರ ಶಾಶ್ವತಗೌಡ ಪಾಟೀಲ್ ಅವರು ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಜಾಡು ಹಿಡಿದು ಬಂದ ಅರಣ್ಯಾಧಿಕಾರಿಗಳು ಮನೆಯನ್ನೆಲ್ಲ ಶೋಧಿಸಿ ಹುಲಿ ಉಗುರಿನ ಲಾಕೆಟ್ ಅನ್ನು ವಶಕ್ಕೆ ಪಡೆದಿದ್ದಾರೆ.

ಪುತ್ರ ಶಾಶ್ವತಗೌಡ ಪಾಟೀಲ್ ಹುಲಿ ಉಗುರು ಧರಿಸಿದ ಫೋಟೊ ಪತ್ತೆಯಾಗಿದೆ. ಮನೆಗೆ ಬಂದ ಅಧಿಕಾರಿಗಳಿಗೆ ಇದು ಹುಲಿ ಉಗುರು ಒರಿನಲ್ ಅಲ್ಲ, ನಕಲಿ ಲಾಕೆಟ್ ಎಂದು ವಿಜುಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಇದಕ್ಕು ಮೊದಲು ಇದೇ ಮಾತನ್ನು ಹೇಳಿದ್ದ ಅವರು ಬೇಕಿದ್ದರೆ ತನಿಖೆ ಮಾಡಿಕೊಳ್ಳಲಿ ಎಂದಿದ್ದರು. ಅದರ ಬೆನ್ನಲ್ಲೆ ಅರಣ್ಯಾಧಿಕಾರಿಗಳು ಮನೆಗೆ ಬಂದು ಅವರಿಗೆ ಶಾಕ್ ನೀಡಿದ್ದಾರೆ.
ಅಸಲಿ-ನಕಲಿ ಎಂದು ಪರಿಶೀಲನೆ
ಮನೆಯನ್ನೆಲ್ಲ ಶೋಧ ನಡೆಸಿದ ಅಧಿಕಾರಿಗಳು ಹುಲಿ ಉಗುರು ಇದ್ದ ಪೆಂಡೆಂಟ್ ದೊರೆತಿದೆ. ಅದು ಅಸಲಿಯೋ, ನಕಲಿಯೋ ಎಂದು ಪರಿಶೀಲನೆಗೆ ಒಳಪಡಿಸಿ ತನಿಖೆ ಕೈಗೊಳ್ಳಲಿದ್ದಾರೆ. ಅಲ್ಲಿಯವರಿಗೆ ತನಿಖೆಗೆ ಸಹಕರಿಸುವಂತೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ವಶಕ್ಕೆ ಪಡೆದ ಹುಲಿ ಉಗುರನ್ನು ಅಧಿಕಾರಿಗಳು ಎಫ್ಎಸ್ಎಲ್ ಗೆ ಕಳುಹಿಸಿ ವರದಿ ತರಿಸಿಕೊಳ್ಳಲಿದ್ದಾರೆ. ಒಂದು ವೇಳೆ ಅದು ನಿಜವೇ ಆದರೆ ಕಾಯ್ದೆ ಅಡಿ ಶಿಕ್ಷೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಮಗನ ಫೋಟೋ ಇಟ್ಟುಕೊಂಡು ರಾಜಕಾರಣ
ನನ್ನ ಪುತ್ರ ಧರಿಸಿದ್ದು ಹುಲಿ ಉಗುರು ಅಸಲಿಯಲ್ಲ. ಏಳು ವರ್ಷಗಳ ಹಿಂದೆ ಪೆಂಡೆಂಟ್ನಲ್ಲಿ ನಕಲಿ ಹುಲಿ ಉಗುರು ಮಾಡಿಸಿ ಹಾಕಿಕೊಂಡಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದರು. ನಮಗೂ ಕಾನೂನು ಅರಿವು ಇದೆ. ನಾನು ಮಗನ ಫೋಟೊ ಇಟ್ಟುಕೊಂಡು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ ಎಂದು ಅವರು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ಸಚಿವ ಎಂಬಿ ಪಾಟೀಲ್ ವಿರುದ್ಧ ಅವರು ಆಕ್ರೋಶ ಹೊರ ಹಾಕಿದರು.
ಸದ್ಯ ಇದೇ ಪ್ರಕರಣದಲ್ಲಿ ವರ್ತೂರು ಸಂತೋಷ್ ಅವರ ಬಂಧನವಾಗಿದೆ. ಉಳಿದಂತೆ ಬಿಜೆಪಿ ಮುಖಂಡ, ನಟ ಜಗ್ಗೇಶ್, ದರ್ಶನ್, ರಾಕ್ಲೈನ್ ವೆಂಕಟೇಶ್ ಮತ್ತಿತರರ ಹೆಸರು ಕೇಳಿ ಬಂದಿದೆ. ಸದ್ಯ ಎಲ್ಲದರ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications