ಶಿರಸಿ ಸೋಂದಾ ಮಠದಲ್ಲಿ ಕೆರೆ ಸಮ್ಮೇಳನ 2014
ಸೋಂದಾ (ಉತ್ತರ ಕನ್ನಡ), ನ. 12 : ಪಶ್ಚಿಮಘಟ್ಟಗಳ ಕೆರೆಗಳು ಮತ್ತು ಜಲಮೂಲಗಳ ಸಂರಕ್ಷಣೆ-ನಿರ್ವಹಣೆ ಕುರಿತು 'ಕೆರೆ ಸಮ್ಮೇಳನ 2014' ಉತ್ತರ ಕನ್ನಡ ಜಿಲ್ಲೆಯ, ಶಿರಸಿ ತಾಲೂಕಿನಲ್ಲಿರುವ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಆವರಣದಲ್ಲಿ ನವೆಂಬರ್ 13ರಿಂದ 15ರವರೆಗೆ ಜರುಗಲಿದೆ.
ನಗರೀಕರಣದಿಂದಾಗಿ ನಗರಗಳಲ್ಲಿ ಮಾತ್ರವಲ್ಲಿ ಹಳ್ಳಿಗಳಲ್ಲಿಯೂ ಕೆರೆಗಳು ಮತ್ತು ಜಲಮೂಲಗಳು ಕಾಣೆಯಾಗುತ್ತಿರುವ ಘಟ್ಟದಲ್ಲಿ ಇಂಥದೊಂದು ಬೃಹತ್ ಸಮಾವೇಶವನ್ನು ಆಯೋಜಿಸಿರುವುದು ನಿಜಕ್ಕೂ ಸ್ತುತ್ಯರ್ಹ. ಇಂಥದೊಂದು ಸಮ್ಮೇಳನವನ್ನು ತುರ್ತಾಗಿ ಬೆಂಗಳೂರಿನಂಥ ನಗರಗಳಲ್ಲಿಯೂ ನಡೆಸಬೇಕಾದ ಅಗತ್ಯವಿದೆ.
ಪಶ್ಚಿಮಘಟ್ಟಗಳಲ್ಲಿ ಕೆರೆಗಳು ಬರಿದಾಗುತ್ತಿವೆ, ನದಿಗಳು ಮಲಿನವಾಗುತ್ತಿವೆ, ಪುಷ್ಕರಣಿಗಳು ನಿಂತ ನೀರನ್ನೇ ತುಂಬಿಕೊಳ್ಳುತ್ತಿವೆ. ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡದ ಕೊಲ್ಲೂರಿನಲ್ಲಿರುವ ಸೌಪರ್ಣಿಕಾ ನದಿಯನ್ನು ಉಳಿಸಲು ಕೇಮಾರು ಶ್ರೀಗಳ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು.
ಕೆರೆ ಸಮ್ಮೇಳನ 2014ರ ಹಿನ್ನೆಲೆ : ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಶಕ್ತಿ ಮತ್ತು ಜೌಗು ಭೂಮಿ ಸಂಶೋಧನಾ ವಿಭಾಗದವರು 2000ರಿಂದ ಕೆರೆ ಸಮ್ಮೇಳನವನ್ನು ದೇಶದ ವಿವಿಧ ರಾಜ್ಯಗಳಲ್ಲಿ, ವಿವಿಧ ಸಂಸ್ಥೆಗಳ ಜೊತೆ ಸೇರಿ ನಡೆಸುತ್ತಾ ಬಂದಿದ್ದಾರೆ. ಈ ವರ್ಷ ಶಿರಸಿಗೆ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದೆ.
ಸಮ್ಮೇಳನದ ಆಯೋಜಕರು : ಈ ಸಮ್ಮೇಳನ ಶಕ್ತಿ ಮತ್ತು ಜೌಗು ಭೂಮಿ ಸಂಶೋಧನಾ ವಿಭಾಗ, ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ, ವೃಕ್ಷಲಕ್ಷ ಆಂದೋಲನ ಇವುಗಳ ಆಶ್ರಯದಲ್ಲಿ ಶ್ರೀ ಶಾರದಾಂಬಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಭೈರುಂಬೆ, ಲಯನ್ಸ ಸ್ಕೂಲ್ ಶಿರಸಿ, ಗ್ರಾಮ ಅರಣ್ಯ ಸಮಿತಿ ಶೀಗೇಹಳ್ಳಿ ಇವರ ಸಹಯೋಗದಲ್ಲಿ ನಡೆಯಲಿದೆ. [ಕಳವೆಯಲ್ಲಿ ಯಕ್ಷಗಾನ ಕಾರ್ಯಾಗಾರ]
ಕೆರೆ ಸಮ್ಮೇಳನದ ವಿಷಯ : ಪಶ್ಚಿಮಘಟ್ಟದ ಕೆರೆಗಳು, ಜಲಮೂಲಗಳು ಇವುಗಳ ನಿರ್ವಹಣೆ, ಸಂರಕ್ಷಣೆ ವಿಷಯ ಕುರಿತು ಸಮ್ಮೇಳನ ಒತ್ತು ನೀಡುತ್ತಿದೆ. ಮಲೆನಾಡಿನ ಕೆರೆಗಳ ಜೊತೆ ಹಳ್ಳ, ತೊರೆ, ರಾಂಪತ್ರೆ ಜಡ್ಡಿ ಮುಂತಾದ ಜೌಗು ಪ್ರದೇಶಗಳು ಇಂದು ಆಪತ್ತಿಗೆ ಸಿಲುಕಿವೆ. ಜಾಗತಿಕ ಹವಾಮಾನ ಬದಲಾವಣೆ ಕಾರಣದಿಂದ ಪಶ್ಚಿಮಘಟ್ಟದ ಜೀವ - ಸಸ್ಯ, ಜಲಮೂಲಗಳ ಮೇಲೆ ಗಂಭೀರ ಪರಿಣಾಮಗಳಾಗಲಿವೆ. ಜಲ ಹರಿವಿನಲ್ಲಾಗುವ ಪರಿಣಾಮಗಳು ಜಲ ಚರಗಳ ಸಂತಾನೋತ್ಪತ್ತಿ ಪ್ರದೇಶ ನಾಶ, ಜೀವವೈವಿಧ್ಯತೆಗಳ ನಾಶದಿಂದ ಮಲೆನಾಡು ಬರದ ನಾಡಾಗದಂತೆ ಪ್ರಜ್ಞಾವಂತರು ಎಚ್ಚರಿಕೆ ವಹಿಸಲೇ ಬೇಕಾದ ಸಂದರ್ಭ ಇದೆ.
ಸಮ್ಮೇಳನದ ಮೂಲ ಆಶಯ : ಕೆರೆ ಸಮ್ಮೇಳನದ ಮೂಲ ಆಶಯ ಎಂದರೆ ಪರಿಸರ ಸಂರಕ್ಷಣೆ, ಪುನರುಜ್ಜೀವನ, ಜಲವಿಜ್ಞಾನ, ಭೂ ವಿಜ್ಞಾನದ ಬಗ್ಗೆ ತಿಳಿವಳಿಕೆ ಹೆಚ್ಚಿಸುವದು ಹಾಗೂ ಜನ ಸಹಭಾಗಿತ್ವ, ನೀತಿ ನಿರೂಪಕರ ಮೇಲೆ ರಚನಾತ್ಮಕ ಒತ್ತಡ ನಿರ್ಮಾಣ, ವಿದ್ಯಾರ್ಥಿ-ಶಿಕ್ಷಕರ ಸಮುದಾಯದಲ್ಲೂ ಕೆರೆ-ಜಲಮೂಲಗಳ ಬಗ್ಗೆ ಜಾಗೃತಿ ಮಾಡಿಸುವುದು. ನಾಡಿನ ವಿದ್ಯಾರ್ಥಿ ಸಮುದಾಯವನ್ನು ನೇರ ಕೆರೆ ಅಭ್ಯಾಸದಲ್ಲಿ ತೊಡಗಿಸುವ ಉದ್ದೇಶ ಈ ಸಮ್ಮೇಳನದ್ದಾಗಿದೆ.