ಕೆರೆ ಸಮ್ಮೇಳನದ ಮೂರು ದಿನಗಳ ವಿವರಗಳು
ಕೆರೆ ಸಮ್ಮೇಳನದ ಭಾಗವಾಗಿ 2014ರ ಮಾರ್ಚ್ 15ರಿಂದ ಸೋಂದಾದಿಂದ ಆರಂಭವಾದ ಕೆರೆ ಸಮ್ಮೇಳನ ಸಂರಕ್ಷಣೆ ಕುರಿತ ಜಾಗೃತಿ ಅಭಿಯಾನ ಹಳ್ಳಿ - ಪಟ್ಟಣಗಳಲ್ಲಿ ನಡೆಯುತ್ತಿದೆ. ವರದಾ ಮೂಲದಿಂದ ಧರ್ಮಾಮೂಲದವರೆಗೆ ಕಪ್ಪತಗುಡ್ಡದಿಂದ ಶೀಗೆಹಳ್ಳಿವರೆಗೆ ಕೆರೆ - ನದಿ ಮೂಲ ಅಧ್ಯಯನ, ವಿದ್ಯಾರ್ಥಿಗಳಿಂದ ಸಮೀಕ್ಷೆ ನಡೆದಿವೆ. ಬೆಂಗಳೂರಿನಲ್ಲಿ ಉ.ಕ, ಶಿವಮೊಗ್ಗ ಜಿಲ್ಲೆಗಳಲ್ಲಿ 110 ಹೈಸ್ಕೂಲ್ಗಳು ಅಭಿಯಾನದಲ್ಲಿ ಪಾಲ್ಗೊಂಡಿವೆ. ಬೆಂಗಳೂರಿನಲ್ಲಿ ಸಮ್ಮೇಳನ ಪೂರ್ವ ಕೆರೆ ಉಳಿಸಿ ವಿಚಾರ ಸಂಕಿರಣ ನಡೆದಿದೆ.
ಕೆರೆ ಸಮ್ಮೇಳನದ ವಿವರ : ಗುರುವಾರ ನ. 13ರಂದು ಬೆಳಿಗ್ಗೆ 1.30ಕ್ಕೆ ಉ.ಕ ಜಿಲ್ಲೆ, ಶಿರಸಿ ತಾಲೂಕಿನಲ್ಲಿರುವ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಸುಧರ್ಮಸಭಾ ಮಂಟಪದಲ್ಲಿ ಕೆರೆ ಸಮ್ಮೇಳನ ಉದ್ಘಾಟನೆ ಆಗಲಿದೆ. ರೈತರು, ಸಂಸ್ಥೆಗಳು, ಜನಪ್ರತಿನಿಧಗಳು, ಗ್ರಾಮಅರಣ್ಯ ಸಮಿತಿಗಳು, ಸ್ವ ಸಹಾಯ ಸಂಘಗಳು ಕೆರೆ ಅಭಿವೃದ್ಧಿ ಸಂಘಗಳು, ನೀತಿ ನಿರೂಪಕರು, ವಿಜ್ಞಾನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೆರೆ ಪುನರುಜ್ಜೀವನಗೊಳಿಸಿದ ಸಾಧಕರಿಗೆ ಸಮ್ಮಾನ, ಕೆರೆ ಯಶೋಗಾಥೆ ವರದಿ ಬಿಡುಗಡೆ, ಉ.ಕ ಪರಿಸರದ ಸಮಗ್ರ ಅಧ್ಯಯನ ವರದಿ ಉದ್ಘಾಟನಾ ಸಮಾರಂಭದ ಭಾಗವಾಗಿ ಇರುತ್ತದೆ. ಕೇಂದ್ರ, ರಾಜ್ಯ ಸರ್ಕಾರದ ಸಚಿವರನ್ನು ಆಹ್ವಾನಿಸಲಾಗಿದ್ದು, ಹಸಿರು ಸ್ವಾಮೀಜಿ ಎಂದು ಖ್ಯಾತರಾದ ಶ್ರೀ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ನೀಡಲಿದ್ದಾರೆ.
ಮೊದಲ ದಿನದ ಗೋಷ್ಠಿಗಳಲ್ಲಿ ಕೆರೆ ಪುನರುಜ್ಜೀವನ ಸಾಧಕರ ಅನುಭವ ಮಂಡನೆ; ರೈತರು ನೀತಿ ನಿರೂಪಕರು, ಸಂಶೋಧಕರು, ಅರಣ್ಯ ಜಲ ಸಂವರ್ಧನೆ ಅಧಿಕಾರಿಗಳ ಜೊತೆ ಸಂವಾದ ನಡೆಯಲಿದೆ. ದೇವಸ್ಥಾನಗಳ ಮುಖ್ಯಸ್ಥರ ಜೊತೆ ಪುಷ್ಕರಣಿ, ಪವಿತ್ರ ತೀರ್ಥ ನಿರ್ವಹಣೆ ಕುರಿತು ಸಮಾಲೋಚನೆ ನಡೆಯಲಿದೆ.
ಕೆರೆ ಸಮ್ಮೇಳನದ 2ನೇ ದಿನ : ಶುಕ್ರವಾರ ನ.14ರಂದು ಬೆಳಿಗ್ಗೆ 9.30ಕ್ಕೆ ಶಿರಸಿಯ ಲಯನ್ಸ್ ಸ್ಕೂಲ್ನಲ್ಲಿ 2ನೇ ದಿನದ ಗೋಷ್ಠಿ ಮಕ್ಕಳ ದಿನಾಚರಣೆಯ ಜೊತೆ ಆರಂಭವಾಗಲಿದೆ. ತಾಂತ್ರಿಕ ಗೋಷ್ಠಿಗಳು ಹಾಗೂ ವಿವಿಧ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಕೆರೆ ಅಭ್ಯಾಸ ಮಂಡನೆ ನಡೆಯಲಿದೆ.
ರಾಜ್ಯ ಹಾಗೂ ಅಕ್ಕಪಕ್ಕದ ರಾಜ್ಯಗಳ ವಿಶ್ವವಿದ್ಯಾಲಯಗಳು ಸಂಶೋಧನಾ ಸಂಸ್ಥೆಗಳಿಂದ ಪಶ್ಚಿಮಘಟ್ಟ ಜೌಗು ಭೂಮಿ ಪರಿಸ್ಥಿತಿ ಕುರಿತು ಹಲವು ಪ್ರಬಂಧಗಳು ಮಂಡನೆ ಆಗಲಿವೆ: ಪಶ್ಚಿಮಘಟ್ಟದ ಜೀವವೈವಿಧ್ಯತೆ, ನದಿ - ಕೆರೆ, ಜಡ್ಡಿಗಳು, ಧಾರಣ ಸಾಮರ್ಥ್ಯ, ಪಾರಿಸಾರಿಕ ಸೇವೆಗಳು, ದೇವರಕಾಡು, ಭೂ ಕವಚ, - ಭೂ ಬಳಕೆಯಲ್ಲಿನ ಬದಲಾವಣೆ ಪರಿಸ್ಥಿತಿ, ಜಲಮಾಲಿನ್ಯ, ಸುಸ್ಥಿರ ಕೃಷಿ, ಜೌಗು ಭೂಮಿ, ಪರಿಸರ ಶಿಕ್ಷಣ ಇತ್ಯಾದಿ.
ಕೆರೆ ಸಮ್ಮೇಳನ 3ನೇ ದಿನ : ಶಿರಸಿ ತಾಲೂಕ ಭೈರುಂಬೆಯ ಶ್ರೀ ಶಾರದಾಂಬಾ ಹೈಸ್ಕೂಲ್ ಆವಾರದಲ್ಲಿ ಶನಿವಾರ, ನ.15ರ ಬೆಳಿಗ್ಗೆ 9.30ಕ್ಕೆ ಕೆರೆ ಸಮ್ಮೇಳನದ 3ನೇ ದಿನದ ಗೋಷ್ಠಿಗಳು ಹಾಗೂ ಸಮಾರೋಪ ನಡೆಯಲಿವೆ. ವಿದ್ಯಾರ್ಥಿಗಳಿಂದ ಅಂತಿಮ ಸುತ್ತಿನ ಕೆರೆ ಅಧ್ಯಯನ ವಿಷಯ ಮಂಡನೆ, ಸಮಾರೋಪ ಪೂರ್ವ ಮುಕ್ತ ಸಂವಾದ.
ಗೋಷ್ಠಿಯಲ್ಲಿ ರಾಜ್ಯ ಅರಣ್ಯ ಪರಿಸರ ಸಚಿವಾಲಯದ ಪ್ರಮುಖರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥರು ಭಾಗವಹಿಸುತ್ತಾರೆ. ನಿರ್ಣಯ ಗೋಷ್ಠಿಯಲ್ಲಿ ವನವಾಸಿ ಮುಖಂಡರು, ವಿಜ್ಞಾನಿಗಳು ಪರಿಸರ ಕಾರ್ಯಕರ್ತರು ಮುಂದಿನ ಕ್ರಿಯಾಸೂಚಿ ಮಂಡಿಸಲಿದ್ದಾರೆ.
ಸಮಾರೋಪ ಸಮಾರಂಭ : ಸಮಾರೋಪ ಸಮಾರಂಭ 15ರ ಮಧ್ಯಾಹ್ನ 4 ಗಂಟೆಗೆ ಆರಂಭವಾಗಲಿದೆ. ಕ್ರಿಯಾ ಯೋಜನೆಗಳು, ಶಿಫಾರಸು, ನಿರ್ಣಯಗಳ ಮಂಡನೆ, ಯುವ ವಿಜ್ಞಾನಿ ಪ್ರಶಸ್ತಿ ನೀಡಿಕೆ, ವೃಕ್ಷಲಕ್ಷ್ಯ ಪ್ರಶಸ್ತಿ ನೀಡಿಕೆ ಇವು ಸಮಾರೋಪ ಸಮಾರಂಭದ ವಿಶೇಷ.
ಹಳ್ಳಿಗಳಲ್ಲಿ ಪ್ರತಿನಿಧಿಗಳ ವಸತಿ : ಕೆರೆ ಸಮ್ಮೇಳನದ ಆರಂಭದಿಂದ ಮುಕ್ತಾಯದವರೆಗೆ, ಕೆರೆ, ಪರಿಸರ ಸಂಬಂಧಿ ಹಾಡು, ರೂಪಕ, ಯಕ್ಷಗಾನ, ಬೀದಿ ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ನಡೆಯಲಿವೆ. ಕೆರೆ ಸಮ್ಮೇಳನ ಪ್ರತಿನಿಧಿಗಳು ಹಳ್ಳಿಗಳಲ್ಲಿ ವಸತಿ ಮಾಡಲಿದ್ದಾರೆ.
ಸಂಘಟನಾ ಸಮಿತಿ : ಕೆರೆ ಸಮ್ಮೇಳನದ ಗೌರವ ಅಧ್ಯಕ್ಷರಾಗಿ ಸಮ್ಮೇಳನದ ನೇತೃತ್ವ ವಹಿಸಿರುವ ಪರಮ ಪೂಜ್ಯಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ|| ಟಿ.ವಿ. ರಾಮಚಂದ್ರ ಅಧ್ಯಕ್ಷ. ಅನಂತ ಹೆಗಡೆ ಅಶೀಸರ ಸಮ್ಮೇಳನ ಕಾರ್ಯಾಧ್ಯಕ್ಷ. ವಿಜ್ಞಾನಿ ಡಾ|| ಸುಭಾಸ್ ಚಂದ್ರನ್ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಶ್ರೀ ನಾರಾಯಣ ಗಡೀಕೈ ಲಯನ್ಸ್ ಶಾಲೆಯ ಎಮ್.ಎಮ್. ಭಟ್, ವಿಶ್ವನಾಥ ಶೀಗೆಹಳ್ಳಿ, ಗಣಪತಿ ಕೆ. ಬಿಸ್ಲಕೊಪ್ಪ ಡಾ|| ಪ್ರಕಾಶ ಮೇಸ್ತ ಇವರುಗಳು ಸಮ್ಮೇಳನದ ಸಂಚಾಲಕರು.












Click it and Unblock the Notifications