ಕರ್ನಾಟಕ ; ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಮೂವರ ಬಂಧನ
ಬೆಂಗಳೂರು, ಮಾರ್ಚ್ 15 : ಕರ್ನಾಟಕದಲ್ಲಿ ಕೊರೊನಾದಿಂದ ಆತಂಕ ಎದುರಾಗಿದೆ. ಸೋಂಕಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ ಆರೋಪದ ಮೇಲೆ ರಾಜ್ಯದ ವಿವಿಧ ಭಾಗಗಳಲ್ಲಿ ಮೂವರನ್ನು ಬಂಧಿಸಲಾಗಿದೆ.
ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಶನಿವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಯೊಬ್ಬ ಪಟ್ಟಣದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ.
ಕೊನೆಯ ವರ್ಷದ ಪದವಿ ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಬಂದಿದೆ ಎಂದು ಆತನ ಫೋಟೋವನ್ನು ಸಾಮಾಜಿ ಜಾಲತಾಣದಲ್ಲಿ ಹಾಕಲಾಗಿತ್ತು. ಈ ಕುರಿತು ಮಾಹಿತಿ ತಿಳಿದ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಕಾಲೇಜಿಗೆ ಧಾವಿಸಿದರು.

ಅಂತಿಮ ವರ್ಷದ ವಿದ್ಯಾರ್ಥಿಯನ್ನು ಪರೀಕ್ಷೆ ನಡೆಸಿದರು. ಈ ಬಗ್ಗೆ ಏನೂ ತಿಳಿದಿರದ ಕಾಲೇಜಿನ ಆಡಳಿತ ಮಂಡಳಿ ಗೊಂದಲಕ್ಕೆ ಸಿಲುಕಿತು. ಪರೀಕ್ಷೆ ಬಳಿಕ ಇದು ಸುಳ್ಳು ಸುದ್ದಿ ಎಂಬುದು ಸಾಬೀತಾಯಿತು.
ಪೊಲೀಸರಿಗೆ ಅಂತಿಮ ವರ್ಷದ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಸುಳ್ಳು ಸುದ್ದಿ ಹಬ್ಬಿಸಿದ ಕಾರಣಕ್ಕೆ ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ಕೊರೊನಾ ಸೋಂಕು ಇದೆ ಎಂಬ ವಿಷಯ ಕಾಲೇಜಿನಲ್ಲಿ ಆತಂಕ ಹುಟ್ಟು ಹಾಕಿತ್ತು.
ಶುಕ್ರವಾರ ಚಾಮರಾಜನಗರದಲ್ಲಿ ನಾಗೇಂದ್ರ ಮತ್ತು ಲೋಕೇಶ್ ಎಂಬುವವರನ್ನು ಬಂಧಿಸಲಾಗಿದೆ. ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರುವ ಮಾದರಿಯಲ್ಲಿ ಇಬ್ಬರು ವ್ಯಕ್ತಿಗಳ ಫೋಟೋಗಳನ್ನು ಬಳಸಿಕೊಂಡು ಪೋಸ್ಟ್ ಹಾಕಿದ್ದರು.
ಇಬ್ಬರ ಮೇಲೆ ಇದ್ದ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಅವರ ಫೋಟೋಗಳನ್ನು ಬಳಕೆ ಮಾಡಿಕೊಂಡು ಕೊರೊನಾ ಸೋಂಕು ತಗುಲಿದೆ ಎಂದು ಸುದ್ದಿಯನ್ನು ಹಬ್ಬಿಸಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲೂ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications