ಉಮೇಶ್ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗಿ
ಕುಣಿಗಲ್, ಸೆಪ್ಟೆಂಬರ್ 13: ಕಾವೇರಿ ತೀರ್ಪಿನ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಯುವಕ ಉಮೇಶ್ ಅಂತ್ಯಕ್ರಿಯೆಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಸಿಂಗೋನಹಳ್ಳಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದೇವತೆ ಮಾರಮ್ಮನ ದೇವಸ್ಥಾನದ ಎದುರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಿದ್ದಯ್ಯ, ತೋಪಮ್ಮ ದಂಪತಿ ಮಗನಾದ ಉಮೇಶ್ ಐದಾರು ವರ್ಷದ ಹಿಂದೆ ಬೆಂಗಳೂರಿಗೆ ದುಡಿಯುವ ಸಲುವಾಗಿ ಬಂದು, ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಸೇರಿದ್ದ. ಪ್ರತಿ ತಿಂಗಳು ಮನೆಗೆ ಹತ್ತು ಸಾವಿರ ರುಪಾಯಿ ಕಳಿಸುತ್ತಿದ್ದ ಎಂದು ಆತನ ಪೋಷಕರು ತಿಳಿಸಿದ್ದಾರೆ. ಉಮೇಶ್ ತಂದೆಗೆ ಕಿಡ್ನಿ ಫೇಲ್ಯೂರ್ ಆಗಿದ್ದೆ. ಇತ್ತೀಚೆಗೆ ತೋಪಮ್ಮ ಅವರಿಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಆಗಿತ್ತು ಎಂದು ಮೂಲಗಳು ತಿಳಿಸಿವೆ.[ಉಮೇಶ್ ಕುಟುಂಬಕ್ಕೆ ಪರಿಹಾರ 10 ಲಕ್ಷ ರು.ಗೆ ಏರಿಕೆ]
ಸಿಂಗೋನಹಳ್ಳಿಗೆ ಮಂಗಳವಾರ ಭೇಟಿ ನೀಡಿದ್ದ ಶಾಸಕ ಜಮೀರ್ ಅಹಮದ್, ಉಮೇಶ್ ಕುಟುಂಬಕ್ಕೆ ಸಾಂತ್ವನ ಹೇಳಿ, ಐದು ಲಕ್ಷ ಕೊಟ್ಟಿದ್ದಾರೆ. ಅಂತಿಮ ದರ್ಶನದ ಸಂದರ್ಭದಲ್ಲಿ ಸಾವಿರಾರು ಮಂದಿ ಸೇರಿದ್ದರು. ನೂರಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ, ಮುಖಂಡರಾದ ಕೃಷ್ಣಕುಮಾರ್, ಡಾ.ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.