ವಿಧಾನಸೌಧದಲ್ಲಿ ಕಾಂಗ್ರೆಸ್ ಮುಖಂಡರ ಶೇಮ್..ಶೇಮ್ ವರ್ತನೆ
ವಿಧಾನಸೌಧದಲ್ಲಿ ಬುಧವಾರ (ಜುಲೈ 10) ನಡೆಯುತ್ತಿರುವ ಹೈಡ್ರಾಮಾ, ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆತಗ್ಗಿಸುವಂತದ್ದು. ಕರ್ನಾಟಕ ರಾಜಕೀಯ ಟ್ರೆಂಡ್ ಆಗಿರುವಂತಹ ಈ ಸಂದರ್ಭದಲ್ಲಿ, ರಾಜ್ಯದೆಲ್ಲಡೆ ಜನ ಇದನ್ನೆಲ್ಲಾ ವೀಕ್ಷಿಸುತ್ತಿರುತ್ತಾರೆ ಎನ್ನುವ ಕನಿಷ್ಠ ತಿಳುವಳಿಕೆ ಇಲ್ಲದಂತೆ, ಜನಪ್ರತಿನಿಧಿಗಳು ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದಾರೆ.
ಇಲ್ಲಿ ಕಾಂಗ್ರೆಸ್ ನವರು ಮಾಡುತ್ತಿರುವುದು ಸರಿಯೋ, ಬಿಜೆಪಿಯವರದ್ದು ತಪ್ಪೋ ಎನ್ನುವದಕ್ಕಿಂತ, ಸಮ್ಮಿಶ್ರ ಸರಕಾರದ ಶಾಸಕರ ರಾಜೀನಾಮೆಯ ಸರಣಿಯನ್ನು ತಡೆಯುವಲ್ಲಿ ದೋಸ್ತಿ ಸರಕಾರ ವಿಫಲವಾಗಿದೆ. ಇಂದು ಮತ್ತೆ ಇಬ್ಬರು ಶಾಸಕರು (ಎಂಟಿಬಿ ನಾಗರಾಜ್, ಡಾ.ಸುಧಾಕರ್) ರಾಜೀನಾಮೆ ನೀಡಿದ್ದಾರೆ.
ದುಡ್ಡು ಮತ್ತು ಅಧಿಕಾರದ ಆಸೆಗೆ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ, ಮೋದಿ ಮತ್ತು ಅಮಿತ್ ಶಾ ಕುತಂತ್ರಿಗಳು ಎಂದು ಏನು ಸಿದ್ದರಾಮಯ್ಯ ಆರೋಪಿಸುತ್ತಿದ್ದರೋ, ರಾಜೀನಾಮೆ ನೀಡಿದವರ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಆಪ್ತರ ಪಟ್ಟಿಯೇನೂ ಕಮ್ಮಿಯಿಲ್ಲ ಎನ್ನುವುದನ್ನು ಸಮನ್ವಯ ಸಮಿತಿಯ ಅಧ್ಯಕ್ಷರು ಒಪ್ಪಿಕೊಳ್ಳುತ್ತಾರೋ, ಇಲ್ಲವೋ?

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಮತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ರಾಜೀನಾಮೆ ನೀಡಿ ಹೊರಗೆ ಬಂದ ನಂತರ, ಕಾಂಗ್ರೆಸ್ ಪಕ್ಷದ ಸಚಿವರುಗಳೇ ಅವರನ್ನು ಎಳೆದಾಡಿ ಇನ್ನೊಬ್ಬರು ಸಚಿವರಾದ ಜಾರ್ಜ್ ಕೊಠಡಿಗೆ ಕರೆತಂದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಎನ್ನುವುದು ಕ್ಯಾಬಿನೆಟ್ ದರ್ಜೆಯಷ್ಟೇ ಪ್ರಾಮುಖ್ಯಯತೆಯನ್ನು ಹೊಂದಿರುವಂತದ್ದು. ಹೀಗಿರುವಾಗ, ಎಲ್ಲರ ಸಮ್ಮುಖದಲ್ಲಿ ಅವರನ್ನು ಎಳೆದಾಡಿದ್ದು, ನಮ್ಮ ರಾಜಕೀಯ ವ್ಯವಸ್ಥೆ ಈ ಅಧೋಗತಿಗೆ ಇಳಿಯಿತೇ ಎಂದು ಬೇಸರ ಪಡುವಂತಾಗಿದೆ. ಎಲ್ಲಾ ವಿದ್ಯಮಾನಗಳನ್ನು ಗಮನಿಸುತ್ತಿರುವ ರಾಜಭವನ, ಹತ್ತೇ ಹತ್ತು ನಿಮಿಷದಲ್ಲಿ ಸುಧಾಕರ್ ಅವರನ್ನು ಇಲ್ಲಿಗೆ ಕರೆದುಕೊಂಡು ಬನ್ನಿ ಎಂದು ರಾಜ್ಯಪಾಲರು ಆದೇಶ ನೀಡಿದ್ದಾರೆ.
ಇಷ್ಟಲ್ಲದೇ, ಬಿಜೆಪಿ ಶಾಸಕ ರೇಣುಕಾಚಾರ್ಯ ಮತ್ತು ಇನ್ನೊಬ್ಬ ಸಚಿವರಾದ ಯು ಟಿ ಖಾದರ್, ಸಾರ್ವಜನಿಕವಾಗಿಯೇ ಬೈಯ್ದಾಡಿಕೊಂಡಿದ್ದಾರೆ. ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದಿದೆ.
ಇದುವರೆಗೆ ಸ್ಪೀಕರ್ ಕಚೇರಿ ತಲುಪಿರುವ ರಾಜೀನಾಮೆ ಕ್ರಮಬದ್ದವಾಗಿದೆಯೋ ಇಲ್ಲವೋ ಅದು ಆನಂತರದ ಮಾತು. ಆದರೆ, ಅವರುಗಳೆಲ್ಲಾ ರಾಜೀನಾಮೆ ನೀಡಿದ್ದಂತೂ ನಿಜ. ಸ್ಪೀಕರ್ ರಾಜೀನಾಮೆ ಆಂಗೀಕರಿಸುತ್ತಾರೋ, ಇಲ್ಲವೋ.. ಆಫ್ ದಿ ರೆಕಾರ್ಡ್ ಹೇಳಬೇಕಾದರೆ, ಕುಮಾರಸ್ವಾಮಿ ಸರಕಾರ ಸರಳ ಬಹುಮತದಿಂದ ಹಿಂದಿದೆ.
ಸದ್ಯದ ಮಟ್ಟಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್. ಬೆಂಗಳೂರು ನಗರ ಆಯುಕ್ತ ಅಲೋಕ್ ಕುಮಾರ್ ಮತ್ತು ನೂರಾರು ಪೊಲೀಸರ ರಂಗ ಪ್ರವೇಶವಾಗಿದೆ. ಮುಂದೇನಾಗುತ್ತೋ ನೋಡೋಣ...












Click it and Unblock the Notifications