ಮಂಚನಬೆಲೆ ಜಲಾಶಯಕ್ಕೆ ರೋಪ್ವೇ ನಿರ್ಮಾಣಕ್ಕೆ ಚಿಂತನೆ
ಮಾಗಡಿ, ಸೆಪ್ಟೆಂಬರ್ 14: ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸಿ ತಾಣ ಮಂಚನಬೆಲೆಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಇಂಜಿನಿಯರ್ ಗಳಿಗೆ ಸರ್ವೆ ಮಾಡಲು ತಿಳಿಸಿರುವುದಾಗಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ.
ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ 53 ಅಡಿಗೆ ಏರಿಕೆ
ಮಂಚನಬೆಲೆ ಕೆರೆ ತುಂಬಿದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಂಚನಬೆಲೆ ಜಲಾಶಯಕ್ಕೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಹೀಗಾಗಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕಮಸ್ಕಲ್ ಮತ್ತು ದೊಡ್ಡಮಸ್ಕಲ್ಗೆ ಸೇರುವ ರಸ್ತೆ ಬಳಿ ಮಂಚನಬೆಲೆ ಜಲಾಶಯದ ಮೇಲೆ ಹೋಗಲು ಅನುಕೂಲ ಮಾಡಿಕೊಡುವಂತೆ ಚಿಂತನೆ ನಡೆಸಲಾಗಿದೆ," ಎಂದು ಹೇಳಿದ್ದಾರೆ.
ಜಲಾಶಯದ ಮೇಲೇರಲು ರೋಪ್ ವೇ
ಮಂಚನಬೆಲೆ ಜಲಾಶಯದ ಮೇಲೇರಲು ರೋಪ್ ವೇ ಅಳವಡಿಸಲು ಇಂಜಿನಿಯರ್ ಗಳಿಗೆ ಸರ್ವೆ ನಡೆಸಲು ಸೂಚಿಸಿದ್ದೆ. ಈ ಮೂಲಕ ಪ್ರವಾಸಿಗರನ್ನು ಹೆಚ್ಚಿನದ್ದಾಗಿ ಆಕರ್ಷಿಸುವಂತೆ ನಿರ್ದೇಶಿಸಿದ್ದೆ. ಆದರೆ ಇದಕ್ಕೆ ಸರಿಯಾದ ಆರ್ಕಿಟೆಕ್ಚರ್ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಆದರೂ ಈ ಬಗ್ಗೆ ಇರುವ ಅಡೆ ತಡೆಗಳನ್ನು ಸರಿಪಡಿಸಿಕೊಂಡು ಶೀಘ್ರದಲ್ಲೆ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.
ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ
ಮಂಚನಬೆಲೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹೋಗುವ ದಬ್ಬಗುಳಿ ರಸ್ತೆಗೆ 7.5 ಕಟಿ ಹಣ ಮಂಜೂರಾಗಿದೆ. ಶೀಘ್ರವೇ ಟೆಂಡರ್ ಕರೆದು ರಸ್ತೆ ಕಾಮಗಾರಿ ನಡೆಸಿ ಪ್ರವಾಸಿಗರಿಗೆ ಅನುಕೂಲತೆ ಮಾಡಿಕೊಡಲಾಗುತ್ತದೆ ಎಂದು ಶಾಸಕ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.
ಪ್ರವಾಸಿ ತಾಣವಾಗಿ ಅಭಿವೃದ್ಧಿ
ಇದರ ಜತೆಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಡುವ ನಿಟ್ಟಿನಲ್ಲಿ ಮಂಚನಬೆಲೆ ಜಲಾಶಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸಲಾಗುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಜಲಾಶಯಕ್ಕೆ ಹಾನಿಯಾಗದಂತೆ ಅಭಿವೃದ್ದಿ
ಮಂಚನಬೆಲೆ ಜಲಾಶಯದ ಸುತ್ತ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯಲು ಅವಕಾಶ ಇರುವುದಿಲ್ಲ. ಪ್ರವಾಸಿಗರು ಜಲಾಶಯ ಮಾತ್ರ ವೀಕ್ಷಣೆ ಮಾಡಬಹುದೇ ಹೊರೆತು ಕಲುಷಿತ ನೀರು ಜಲಾಶಯಕ್ಕೆ ಬರಲು ಅವಕಾಶ ಕೊಡುವುದಿಲ್ಲ. ಜಲಾಶಯಕ್ಕೆ ಹಾನಿಯಾಗದಂತೆ ಅಭಿವೃದ್ದಿ ಪಡಿಸಲಾಗುತ್ತದೆಂದು ಇದೇ ವೇಳೆ ಅವರು ತಿಳಿಸಿದರು.