ವಿದ್ಯಾರ್ಥಿನಿಯರ ಓಡಾಟಕ್ಕೆ ನಿರ್ಬಂಧ; ಸಚಿವ ಡಾ. ಅಶ್ವಥ್ ನಾರಾಯಣ ಸ್ಪಷ್ಟನೆ!
ಬೆಂಗಳೂರು, ಆ. 30: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ವಿದ್ಯಾರ್ಥಿಗಳು ಕೆಲವೆಡೆ ವಿರೋಧಿಸಿದ್ದಾರೆ ಎಂಬ ಮಾಹಿತಿ ಬಂದಿದೆ.ನೂತನ ಶಿಕ್ಷಣ ನೀತಿಯ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರು, ಸಾಹಿತಿಗಳೊಂದಿಗೆ ಸಂವಾದ ಮಾಡಿ ನೂತನ ಶಿಕ್ಷಣ ನೀತಿಯ ಕುರಿತು ವಿವರಿಸುತ್ತಿದ್ದಾರೆ.
ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಮಂಗಳೂರಿನಲ್ಲಿ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ ಎಂಬ ಮಾಹಿತಿ ಬಂದಿದೆ.
ವಿದ್ಯಾರ್ಥಿಗಳಲ್ಲಿನ ಗೊಂದಲ ನಿವಾರಿಸಲು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಮಾತನಾಡಿದ್ದಾರೆ. ಜೊತೆಗೆ "ದೂರದೃಷ್ಟಿ ಮತ್ತು ವೈಜ್ಞಾನಿಕವಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾರಕವಾಗುವ ಒಂದೇ ಒಂದು ಅಂಶವೂ ಇಲ್ಲ. ಒಂದು ವೇಳೆ ಯಾರಿಗಾದರೂ ಗೊತ್ತಿದ್ದರೆ ನನಗೆ ಬಂದು ಹೇಳಲಿ" ಎಂದು ಸವಾಲು ಹಾಕಿದ್ದಾರೆ.

ರಾಜಕೀಯಕ್ಕಾಗಿ ಶಿಕ್ಷಣ ನೀತಿ ವಿರೋಧ!
ಮಂಗಳೂರಿನಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, "ಕೇವಲ ರಾಜಕೀಯ ಕಾರಣಕ್ಕಾಗಿ ಶಿಕ್ಷಣ ನೀತಿಯನ್ನು ವಿರೋಧ ಮಾಡಲಾಗುತ್ತಿದೆ. ಐದೂವರೆ ವರ್ಷಗಳ ನಿರಂತರ ಅಧ್ಯಯನ, ಸಮಾಲೋಚನೆ ಹಾಗೂ ಸುಮಾರು ಮೂರೂವರೆ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳ ಬಗ್ಗೆ ಮಂಥನ ಮಾಡಿದ ನಂತರ ಶಿಕ್ಷಣ ನೀತಿ ರೂಪಿತಗೊಂಡಿದೆ" ಎಂದಿದ್ದಾರೆ.
ವಿದ್ಯಾರ್ಥಿಗಳಿಗೆ ವಿರುದ್ಧವಾಗಿ ಕನಿಷ್ಟ ಒಂದು ಅಂಶವನ್ನಾದರೂ ಟೀಕಾಕಾರರು ತೋರಿಸಲು ಪ್ರಯತ್ನಿಸಲಿ ಎಂದ ಸಚಿವರು, ಕೇವಲ ಬಿಜೆಪಿ ಸರಕಾರ ಜಾರಿ ಮಾಡುತ್ತಿದೆ ಎನ್ನುವ ಕಾರಣಕ್ಕೆ 'ಶಿಕ್ಷಣದ ಕೇಸರಿಕರಣ' ಮಾಡಲಾಗುತ್ತಿದೆ ಎಂದು ಹುಯಿಲೆಬ್ಬಿಸುವುದು ಬಿಟ್ಟು ನೇರವಾಗಿ ಚರ್ಚೆ ಬರಲಿ ಎಂದಿದ್ದಾರೆ ಡಾ. ಅಶ್ವಥ್ ನಾರಾಯಣ.

ಆತುರಾತುರವಾಗಿ ಶಿಕ್ಷಣ ನೀತಿ ಜಾರಿ?
ಕೇಂದ್ರ ಸರಕಾರವು ಶಿಕ್ಷಣ ನೀತಿಯನ್ನು ರಾಜ್ಯಗಳ ಮೇಲೆ ಹೇರುತ್ತಿಲ್ಲ. ನೀತಿಯ ಎಲ್ಲ ಹಂತಗಳ ಅಧಿಕಾರವೂ ರಾಜ್ಯದ ಬಳಿಯೇ ಇರುತ್ತದೆ. ಅದೇ ರೀತಿ, ಆತುರಾತುರವಾಗಿ ಈ ನೀತಿಯನ್ನು ಜಾರಿ ಮಾಡಲಾಗುತ್ತಿದೆ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ. ಇದೂ ಸರಿಯಲ್ಲ ಎಂದ ಸಚಿವರು, ನೀತಿಯ ಜಾರಿಗೆ ಮುನ್ನ ಸಾಕಷ್ಟು ಪೂರ್ವ ತಯಾರಿ, ಚರ್ಚೆ, ಚಿಂತನ-ಮಂಥನ, ಕಾರ್ಯಪಡೆ ರಚನೆ, ವರದಿ ಪಡೆಯುವುದು, ಅಸೆಂಬ್ಲಿಯಲ್ಲಿ ಚರ್ಚೆ, ವಿಷಯವಾರು ಸಮಿತಿಗಳ ರಚನೆ ಇತ್ಯಾದಿ ಕ್ರಮ ವಹಿಸಲಾಗಿದೆ. ಈ ಬಗ್ಗೆ ಗೊತ್ತಿಲ್ಲದೆ ಮಾತನಾಡುವವರು ವಿಷಯವನ್ನು ಅರಿತು ಮಾತನಾಡಿದರೆ ಉತ್ತಮ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯರ ಸಂಚಾರಕ್ಕೆ ನಿರ್ಬಂಧ?
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಪಸ್ಗಳಲ್ಲಿ ಸಂಚರಿಸಲು ವಿದ್ಯಾರ್ಥಿನಿಯರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಎಲ್ಲ ಕ್ಯಾಂಪಸ್ಗಳನ್ನು ಸುರಕ್ಷತವಾಗಿರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕುಲಪತಿಗಳಿಗೆ ಸೂಚಿಸಲಾಗಿದ. ಮೈಸೂರು ವಿವಿ ಕುಲಸಚಿವರು ಹೊರಡಿಸಿದ್ದ ಸುತ್ತೋಲೆಯನ್ನು ಈಗಾಗಲೇ ವಾಪಸ್ ಪಡೆಯಲಾಗಿದೆ. ಎಲ್ಲ ವಿವಿಗಳ ಕ್ಯಾಂಪಸ್ಗಳಲ್ಲಿ ನಿಗಾ, ಪಹರೆ, ಸಿಸಿ ಕ್ಯಾಮೆರಾಗಳ ಅಳವಡಿಕೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸಾಮಾನ್ಯವಾಗಿ ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳು ಬಹಳ ದೊಡ್ಡದಾಗಿರುತ್ತವೆ. ಹೀಗಾಗಿ ಭದ್ರತೆ, ಸುರಕ್ಷತೆ ದೃಷ್ಟಿಯಲ್ಲಿ ಬಿಗಿ ಕ್ರಮ ಕೈಗೊಳ್ಳುವುದು ಅಗತ್ಯ. ಆದ್ದರಿಂದ ಅಗತ್ಯ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರ ಜತೆಗೆ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ನಿಗಾ ಇರಿಸಬೇಕು.
Recommended Video

ಲಸಿಕೆ ಪಡೆಯದವರಿಗೆ ಪ್ರವೇಶವಿಲ್ಲ!
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದವರು ಭೌತಿಕ ತರಗತಿಗೆ ಹಾಜರಾಗಲು ಅವಕಾಶ ಇದೆ. ಲಸಿಕೆ ಪಡೆಯದವರು ಆನ್ಲೈನ್ ತರಗತಿಯ ಮೂಲಕ ಕಲಿಕೆ ಮುಂದುವರಿಸಬಹುದು. ಅವರೂ ಕೂಡ ವ್ಯಾಕ್ಸಿನ್ ಪಡೆದು ನೇರ ತರಗತಿಗೆ ಹಾಜರಾಗಲು ಅಡ್ಡಿ ಇಲ್ಲ ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಇನ್ನು, ಲಸಿಕೆ ಪಡೆಯದ ಬೋಧಕರು, ಬೋಧಕೇತರ ಸಿಬ್ಬಂದಿಗೂ ಕಾಲೇಜ್ಗೆ ಪ್ರವೇಶ ಇರುವುದಿಲ್ಲ. ಅವರು ಕರ್ತವ್ಯಕ್ಕೆ ಹಾಜರಾಗಬೇಕಾದರೆ ಲಸಿಕೆ ಪಡೆದೇ ಬರಬೇಕು ಎಂದು ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ












Click it and Unblock the Notifications