ಉಪ ಚುನಾವಣೆ: ಜೆಡಿಎಸ್ ಜೊತೆ ಮೈತ್ರಿಯ ಕುರಿತು ಡಿಕೆಶಿ ಮಹತ್ವದ ಹೇಳಿಕೆ!
ಬೆಂಗಳೂರು, ಸೆ. 30: ಇಡೀ ಜಗತ್ತು ಇವತ್ತು ಬಾಬ್ರಿ ಪ್ರಕರಣದ ತೀರ್ಪಿನ ಬಗ್ಗೆ ಮಾತನಾಡುತ್ತಿದೆ. ಬಿಜೆಪಿ ನಾಯಕರಂತೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತ್ರ ನೋ ಕಮೆಂಟ್ಸ್ ಎಂದಿದ್ದಾರೆ. ಈ ಬಗ್ಗೆ ಬೆಂಗಳೂರಿನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿಗೆ ನಮ್ಮ ನಾಯಕರು ಹಾಗೂ ವಕ್ತಾರರು ಪ್ರತಿಕ್ರಿಯೆ ನೀಡುತ್ತಾರೆ ಎಂದು ಮಾತು ಮುಗಿಸಿದ್ದಾರೆ.
ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಬೇಕಾಗಿರುವ ಎರಡು ಉಪಚುನಾವಣೆಯ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಅಳೆದು ತೂಗಿ ಮಾತನಾಡುತ್ತಿದ್ದಾರೆ. ಇದರೊಂದಿಗೆ ಶಿರಾ ಹಾಗೂ ಆರ್ಆರ್ ನಗರ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ತಯಾರಿ ಆರಂಭಿಸಿದೆ. ಡಿ.ಕೆ. ಶಿವಕುಮಾರ್ ಅವರೂ ಕೂಡ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದು ಅವರ ಮಾತಿನಿಂದಲೇ ಗೊತ್ತಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಅವರು, ಎಲ್ಲ ಚುನಾವಣೆಗಳು ಕೂಡ ಎಲ್ಲ ಪಕ್ಷಗಳಿಗೆ ಪ್ರತಿಷ್ಠೆಯಾಗಿರುತ್ತದೆ. ಯಾವುದೇ ಒಂದು ಕ್ಷೇತ್ರದ ಚುನಾವಣೆ ಮಾತ್ರ ಪ್ರತಿಷ್ಠೆಯಾಗುವುದಿಲ್ಲ ಎಂದಿದ್ದಾರೆ. ಬುಧವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿರುವ ಅವರು, ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಮೈತ್ರಿ ಕುರಿತು ಮಹತ್ವದ ಮಾತನ್ನಾಡಿದ್ದಾರೆ.

ಪ್ರತಿಷ್ಠೆಯ ಉಪ ಚುನಾವಣೆ
ಪ್ರಮುಖ ಚುನಾವಣೆ ಆಗಲಿ ಉಪ ಚುನಾವಣೆ ಆಗಲಿ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯೇ. ಈ ಹಿಂದೆ ಹೇಗೆ ಚುನಾವಣೆಗಳನ್ನು ನಡೆಸಿದ್ದೇವೋ ಅದೇ ರೀತಿ ಈ ಚುನಾವಣೆಯನ್ನು ನಡೆಸುತ್ತೇವೆ. ನಾನು ಅಧ್ಯಕ್ಷನಾದರೂ ಪಕ್ಷದ ಕಾರ್ಯಕರ್ತ. ಕೇವಲ ಶಿರಾ ಕ್ಷೇತ್ರವಾಗಲಿ, ರಾಜರಾಜೇಶ್ವರಿ ನಗರ ವಾಗಲಿ ಮಾತ್ರ ಪ್ರತಿಷ್ಠೆ ಆಗುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೋರಿ ಅರ್ಜಿಗಳು ಬಂದಿವೆ. ನಾವು ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಡಿಕೆಶಿಗೆ ಪ್ರತಿಷ್ಠೆಯ ಚುನಾವಣೆ
ಡಿ.ಕೆ. ಶಿವಕುಮಾರ್ ಅವರು ಕಳೆದ ಮಾರ್ಚ್ ತಿಂಗಳಿನಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಮೊದಲ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಡಿಕೆಶಿ ಅವರ ಮೇಲೆ ಬಹಳಷ್ಟು ಭರವಸೆ ಇಟ್ಟಿದ್ದಾರೆ.
ಹೀಗಾಗಿ ಉಪ ಚುನಾವಣೆಯಲ್ಲಿ ಕನಿಷ್ಠ ಒಂದು ಸೀಟ್ ಗೆಲ್ಲುವ ಲೆಕ್ಕಾಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರಿದ್ದಾರೆ. ಹೀಗಾಗಿ ಜೆಡಿಎಸ್ ಪಕ್ಷದೊಂದಿಗೆ ಈ ಉಪ ಚುನಾವಣೆಯಲ್ಲಿ ಹೊಂದಾಣಿಕೆ ಕುರಿತು ಚರ್ಚೆ ಶುರುವಾರುವಾಗಿದೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೊಂದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಿಲ್ಲಬಹುದಾ ಎಂಬ ಚರ್ಚೆ ಶುರುವಾಗಿದೆ. ಈ ಎಲ್ಲದಕ್ಕೂ ಡಿಕೆಶಿ ತಮ್ಮ ಪತ್ರಕ್ರಿಯೆ ಕೊಟ್ಟಿದ್ದಾರೆ.

ಜೆಡಿಎಸ್ ಜೊತೆ ಕೈ ಮೈತ್ರಿ?
ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗಿನ ಮೈತ್ರಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ಜೆಡಿಎಸ್ ಒಂದು ಪಕ್ಷವಾಗಿದ್ದು, ಅವರು ಅವರ ರಾಜಕಾರಣ ಮಾಡುತ್ತಾರೆ. ನಾವು ನಮ್ಮ ರಾಜಕಾರಣ ಮಾಡುತ್ತೇವೆ. ಅದೇರೀತಿ ಅವರ ಚುನಾವಣೆ ಅವರು ಮಾಡುತ್ತಾರೆ, ನಮ್ಮ ಚುನಾವಣೆ ನಾವು ಮಾಡುತ್ತೇವೆ ಎಂದು ಉಪ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದ್ದಾರೆ.

ಲೂಟಿ ಹೊಡೆದಿರೋದು ಮಂತ್ರಿಗಳು
ಕೊರೋನಾ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳು ಲೂಟಿ ಮಾಡಿದ್ದಾರೆ ಎಂದು ನಾವು ಹೇಳಿಲ್ಲ. ಸರ್ಕಾರ ಹಾಗೂ ಮಂತ್ರಿಗಳು ಲೂಟಿ ಮಾಡಿದ್ದಾರೆ. ನಿಮಗೆ ಕೇವಲ ಅಧಿಕಾರಿಗಳು ಕಾಣಿಸುತ್ತಿದ್ದಾರಾ? ನಾವು ಸದನದಲ್ಲೂ ಇದನ್ನೇ ಹೇಳಿದ್ದೇವೆ. ಪಿಪಿಇ ಕಿಟ್ ನಿಂದ ಚಿಕಿತ್ಸಾ ಸಲಕರಣೆಗಳ ಖರೀದಿವರೆಗೂ, ಹಾಸಿಗೆಯಿಂದ ಕಾರ್ಮಿಕರ ಊಟದ ಬಿಲ್ ವರೆಗೂ, ಆಂಬುಲೆನ್ಸ್ ನಿಂದ ಆಹಾರ ಕಿಟ್ ವರೆಗೂ ಹೀಗೆ ಪ್ರತಿ ವಿಚಾರದಲ್ಲಿ ಸರ್ಕಾರ ಲೂಟಿ ಹೊಡೆದಿದೆ. ಇದು ಎಲ್ಲರಿಗೂ ತಿಳಿದಿರುವ ಸತ್ಯ ಎಂದಿದ್ದಾರೆ.












Click it and Unblock the Notifications