ಸಮಾಜದ ಸಮಸ್ಯೆ ಅರ್ಥೈಸಿಕೊಂಡರೆ ಅಪಾರ ಅವಕಾಶ: ಅಶ್ವತ್ಥನಾರಾಯಣ
ಬೆಂಗಳೂರು,ಜನವರಿ 14: ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಮಾಜದ ಮುಂದಿರುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಮನೋ ಧೋರಣೆಯನ್ನು ಬೆಳೆಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.
ಈ ಕುರಿತು ಶನಿವಾರ ಅಲಯನ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಶಿಕ್ಷಣ ಸಂಸ್ಥೆಗಳ ಮೂಲಕವೇ ನಾವು ಸದೃಢ ರಾಷ್ಟ್ರವನ್ನು ಕಟ್ಟಬೇಕಾಗಿದೆ. ಇದು ಕೇವಲ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ವೃಂದದಿಂದ ಸಾಧ್ಯವಿಲ್ಲ. ಉದ್ಯಮ ವಲಯ, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಸಮಾಜದ ಎಲ್ಲಾ ರಂಗಗಳು ಇದರಲ್ಲಿ ಭಾಗಿಯಾಗಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ಅಭಿಪ್ರಾಯ ಪಟ್ಟರು.
ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ: ಅಶ್ವತ್ಥ ನಾರಾಯಣ
ಇನ್ನೂ ಉದ್ದಿಮೆಗಳು ಕೇವಲ ನೇಮಕಾತಿ ಸಮಯದಲ್ಲಿ ಮಾತ್ರ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡಬಾರದು. ಅವು ಶಿಕ್ಷಣ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಹೊಂದಬೇಕು. ವಿದ್ಯಾರ್ಥಿಗಳ ಇಂಟರ್ನ್ಶಿಪ್ ಗೆ ಯೋಜಿತ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿ ಹಂತ ಮುಗಿದ ಮೇಲೆ ಅಪಾರ ಅವಕಾಶಗಳಿವೆ. ಆದರೆ, ಇವನ್ನು ಕಂಡುಕೊಳ್ಳಲು ನಾಲ್ಕು ಗೋಡೆಗಳಿಂದ ಆಚೆಗೆ ನೋಡುವ ದೃಷ್ಟಿಕೋನ ಅಗತ್ಯ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ವಿದ್ಯಾರ್ಥಿ ಹಂತದಲ್ಲೇ ಉತ್ತಮ ಮೌಲ್ಯಗಳನ್ನು ಹಾಗೂ ಕೌಶಲಗಳನ್ನು ಬೆಳೆಸಲು ಒತ್ತುಕೊಡಲಾಗುತ್ತದೆ. ಕೌಶಲಾಭಿವೃದ್ಧಿ ಇಲಾಖೆಯಿಂದ 'ಸ್ಕಿಲ್ ಕನೆಕ್ಟ್' ಪೋರ್ಟಲ್ ನಿರ್ವಹಿಸಲಾಗುತ್ತಿದೆ. ಯುವಜನರಿಗಾಗಿ ಹಲವಾರು ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಕ ಸುಧಾರಣೆ ಆಗುತ್ತಿದೆ. ಇದರ ಫಲವಾಗಿ ಸರಕಾರಿ ಕಾಲೇಜುಗಳಲ್ಲಿ ಇಂದು ಕೈಗೆಟುಕುವ ವೆಚ್ಚದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇಡೀ ದೇಶವು ಎಲ್ಲರನ್ನೂ ಒಳಗೊಂಡು ವಿಕಾಸವಾಗಬೇಕು ಎನ್ನುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರ ಅನುಷ್ಠಾನದಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ ಎಂದರು.
ಕಲಿಕೆಯು ಯಾವಾಗಲೂ ಪ್ರಸ್ತುತವಾಗಿರಬೇಕು. ಇದನ್ನು ಪರಿಗಣಿಸಿ ಪಠ್ಯ ಕ್ರಮಕ್ಕೆ ಸಮಕಾಲೀನ ಸ್ಪರ್ಶ ಕೊಡಲಾಗಿದೆ. ಜತೆಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕೂಡ ಎನ್ಇಪಿ ಜಾರಿಗೆ ಬರುತ್ತಿದೆ ಪದವಿಪೂರ್ವ, ಪದವಿ, ಐಟಿಐ, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಜಿಟಿಟಿಸಿ ಶಿಕ್ಷಣ ಕ್ರಮಗಳಲ್ಲಿ ವ್ಯಾಪಕ ಸುಧಾರಣೆ ತರಲಾಗಿದೆ. ಕಲಿಕೆಯ ಜತೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಶೈಕ್ಷಣಿಕ ಪರಿಸರ ಅತ್ತುತ್ತಮವಾಗಿದೆ. ಸರಕಾರವು ಯುವಜನರಿಗೆ ಕೌಶಲಗಳನ್ನು ಕಲಿಸುವ ಮೂಲಕ ಎಲ್ಲರನ್ನೂ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುತ್ತಿದೆ. ಒಟ್ಟಿನಲ್ಲಿ ನುರಿತ ಮಾನವ ಸಂಪನ್ಮೂಲ ಮತ್ತು ಉತ್ತಮ ಅವಕಾಶ ಎರಡೂ ನಮ್ಮಲ್ಲಿ ಇದೆ ಎಂದು ಅವರು ತಿಳಿಸಿದರು.