ಮೋದಿಯವರ ಕುರ್ಚಿ ಅಲ್ಲಾಡುತ್ತಿದೆ; ಲೋಕಸಭೆ ಚುನಾವಣೆಯಲ್ಲಿ ಶೇ 100 ಕ್ಕೆ 100 ರಷ್ಟು ಸೋಲು: ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 14: ಬಿಜೆಪಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಸೋಲುತ್ತೇವೆ ಎನ್ನುವ ಭಯ ಶುರುವಾಗಿದೆ. ನರೇಂದ್ರ ಮೋದಿಯವರ ಕುರ್ಚಿ ಅಲ್ಲಾಡಲು ಶುರುವಾಗಿದೆ. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಶೇ ನೂರಕ್ಕೆ ನೂರು ಸೋಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಕೆಪಿಸಿಸಿ ಕಚೇರಿಯ ಇಂದಿರಾಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ, ಇವರು ದೇಶಕ್ಕೆ ಮಾಡಿದ ದ್ರೋಹ ಇದ್ಯಲ್ಲ ಬೇರೆ ಯಾರು ಮಾಡಿಲ್ಲ. ಬಿಜೆಪಿಯವರು ಆರ್ಥಿಕ ದಿವಾಳಿ ಮಾಡಿದ್ದಾರೆ ಎಂದು ಹೇಳಿದರು.

ಮನ್ ಕಿ ಬಾತ್ ಬರೀ ಮನ್ ಕಿ ಬಾತ್. ಮೊನ್ನೆ ನಾನು ಕುತೂಹಲದಿಂದ ಮನ್ ಕಿ ಬಾತ್ ನೋಡಿದೆ. ಮನ್ ಕಿ ಬೂತ್ ನಲ್ಲಿ ಮಣಿಪುರದ ಬಗ್ಗೆ ಮಾತೇ ಆಡಿಲ್ಲ. ಅಲ್ಲಿ ಏಕೆ ಗಲಭೆ ಶುರುವಾಯ್ತು, ಎಂಬ ಬಗ್ಗೆ ಮಾತೇ ಆಡಿಲ್ಲ ಎಂದು ಮೋದಿ ವಿರುದ್ದ ಕಿಡಿಕಾರಿದರು.
ವಿಧಾನಸಭೆ ಚುನಾವಣೆ ಮುಗಿದ ಮೇಲೆ ನಮ್ಮ ಕಾರ್ಯಕರ್ತರು ವಿಶ್ರಾಂತಿ ಪಡೆಯುತ್ತಿದ್ದಾರೆ ಅನ್ಸುತ್ತೆ. ಹೌದಾ.. ಇಲ್ವಾ.. ಹಾಗಾದ್ರೆ ವಿಧಾನಸಭೆಯ ಚುನಾವಣೆಯಂತೆ ಲೋಕಸಭೆಯಲ್ಲೂ ಕೆಲಸ ಮಾಡಿ ಅದಕ್ಕಿಂತ ದೊಡ್ಡ ಫಲಿತಾಂಶ ತರುವಂತೆ ಮಾಡಿ ಎಂದು ಕಾರ್ಯಕರ್ತರನ್ನ ಹುರಿದುಂಬಿಸಿದರು. 25 ಸ್ಥಾನ ಪಡೆದಿದ್ದ ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದ್ರೆ ನೀವೆ ಅರ್ಥಮಾಡಿಕೊಳ್ಳಿ, ಅವರು ಯಾವ ಸ್ಥಿತಿಗೆ ಹೋಗಿದ್ದಾರೆ ಎಂದು. ಅವರಿಗೆ ಭಯ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಮನುಷ್ಯತ್ವ ಇಲ್ಲದವರು!
ನಾನು ಹೈಕಮಾಂಡ್ ಗೆ 20 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೇನೆ. ಈ ಜೆಡಿಎಸ್ನವರು ಕಳೆದ ಬಾರಿ 1 ಸ್ಥಾನ ಗೆದ್ದಿದ್ರು, ಈ ಬಾರಿ ಅದನ್ನ ಗೆಲ್ಲಲ್ಲ. ಹೀಗಾಗಿ ಕಾರ್ಯಕರ್ತರೆಲ್ಲ ಚೆನ್ನಾಗಿ ಕೆಲಸ ಮಾಡಬೇಕು. ನಮಗೆ ಅಕ್ಕಿ ಕೊಡಲು ಆಗಿಲ್ಲ, ಕೇಂದ್ರದವರು ರಾಜಕೀಯ ಮಾಡಿದರು. ಅಕ್ಕಿ ಈಗ ಮುಗ್ಗಲಾಗಿ ಹುಳ ಬಂದ್ಬಿಟಿದೆ. ಹರಾಜು ಹಾಕಿದ್ರು, ಯಾರು ಖರೀದಿ ಮಾಡಲಿಲ್ಲ, ನಾವು ಹಣ ಕೊಡ್ತೀವಿ ಅಂದ್ರು ಅವರು ಕೊಡಲಿಲ್ಲ. ಬಿಜೆಪಿಯವರು ಮನುಷ್ಯತ್ವ ಇಲ್ಲದವರು ಎಂದು ತೀವ್ರ ವಾಗ್ದಾಳಿ ನಡೆಸಿದರು.

ಜನರಿಗೆ ನಾವು ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ. ಜನ ಖುಷಿಯಾಗಿದ್ದಾರೆ, ಆದರೆ ಬಿಜೆಪಿಯವರಿಗೆ ಖುಷಿಯಾಗಿಲ್ಲ. ಅವರು ಕೈ ಕೈ ಹೀಚುಕಿಕೊಳ್ತಿದಾರೆ. ಹೀಗಾಗಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಈ ಕುಮಾರಸ್ವಾಮಿ ಬಿಜೆಪಿ ವಕ್ತಾರರ ರೀತಿ ಆಡ್ತಿದಾರೆ. ಆ ಕುಮಾರಸ್ವಾಮಿ ಪೆನ್ ಡ್ರೈವ್ ತೋರಿಸ್ತಾರೆ. ಸುಮ್ಮನೆ ಜೋಬಲ್ಲಿ ಇಟ್ಟುಕೊಳ್ಳುತ್ತಾರೆ. ಕುಮಾರಸ್ವಾಮಿ ಯಾವಾಗಲೂ ಇಟ್ ಅಂಡ್ ರನ್ ಅಸಾಮಿ ಎಂದು ಕಿಡಿಕಾರಿದರು.
ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಬಿಜೆಪಿಯವರಿಗೆ ಒಂದೇ ಒಂದು ಆಶಾಭಾವನೆ ನರೇಂದ್ರ ಮೋದಿ, ಅವರನ್ನ ಕರೆದು ಪ್ರಚಾರ ಮಾಡಿದ್ರೆ ಬಿಜೆಪಿಯ ಎಲ್ಲ ತಪ್ಪು ಮುಚ್ಚಿ ಹೋಗುತ್ತೆ ಎಂದು ಭಾವಿಸಿದ್ರು, ಆದರೆ ನಾಡಿನ ಜನತೆ ಅದನ್ನೆಲ್ಲ ತಲೆಕೆಳಗೆ ಮಾಡಿದ್ದಾರೆ. ಯಾವ ಪ್ರಧಾನಿಯೂ ಒಂದು ಚುನಾವಣೆಗೆ ಇಷ್ಟು ಬಾರಿ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲೆಲ್ಲಿ ರ್ಯಾಲಿ, ಸಮಾವೇಶ ಮಾಡಿದ್ರೊ ಅಲ್ಲೆಲ್ಲ ಬಿಜೆಪಿ ಸೋತಿದೆ.
ರಾಹುಲ್ ಗಾಂಧಿಯವರು ಎಲ್ಲೆಲ್ಲಿ ಭಾರತ್ ಜೋಡೊ ಯಾತ್ರೆ ಮಾಡಿದ್ರೊ ಅಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಮತ್ತು ನರೇಂದ್ರ ಮೋದಿಯವರ ಅವನತಿ ಕರ್ನಾಟಕದಿಂದಲೇ ಆರಂಭ ಆಗಿದೆ. ಈ ಚುನಾವಣೆ ಗೆದ್ದ ಮೇಲೆ ದೇಶದಲ್ಲಿ ಹೊಸ ಚಲನೆ ಉಂಟಾಗಿದೆ. ಅನೇಕ ರಾಜ್ಯದ ನಾಯಕರು ನನ್ನ ಜೊತೆ ಮಾತನಾಡಿ ನಮಗೂ ಉತ್ಸಾಹ ಬಂದಿದೆ ಎಂದು ಹೇಳಿದ್ದಾರೆ. ಇದು ನಮ್ಮ ಚುನಾವಣೆ ಫಲಿತಾಂಶದ ಎಫೆಕ್ಟ್. ಮುಂದೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವೈಬ್ರೇಷನ್ ಶುರುವಾಗಿದೆ. ಇದು ನಮ್ಮ ಜಯವಲ್ಲ, ಕಾರ್ಯಕರ್ತರ ಜಯ ಎಂದು ಹೇಳಿದರು.
ಪ್ರಜಾಪ್ರಭುತ್ವ, ಮತ್ತು ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಬಿಜೆಪಿ ಮಾಡಿದೆ. ಆರ್ ಎಸ್ ಎಸ್ ಅಜೆಂಡಾವನ್ನ ಎಲ್ಲ ಕಡೆ ತರಲು ಪ್ರಯತ್ನಿಸಿದ್ರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ಹೊರಟಿದ್ರು, ಈ ನೀತಿ ಆರ್ ಎಸ್ ಎಸ್ ಕಚೇರಿಯಲ್ಲಿ ತಯಾರಾಗಿತ್ತು. ಈ ಬಾರಿ ಸ್ವಲ್ಪ ತಡವಾಯ್ತು, ಮುಂದಿನ ಬಾರಿ ಈ ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದುಹಾಕಿ ಹೊಸ ನೀತಿಯನ್ನ ತರ್ತೀವಿ ಎಂದು ಹೇಳಿದರು.












Click it and Unblock the Notifications