ಸಿ.ಎಂ ಸಿದ್ದರಾಮಯ್ಯಗೆ ತಿರುಗುಬಾಣವಾದ ಆ ಒಂದು ಹಳೆಯ ವಿಡಿಯೋ, ಏನದು
ಮುಡಾದಿಂದ ಬದಲಿ ನಿವೇಶನ ಪಡೆದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಡಿಯೋವೊಂದು ತಿರುಗುಬಾಣವಾಗಿದೆ. ಈ ಹಿಂದೆ ವಿರೋಧ ಪಕ್ಷದಲ್ಲಿ ಇದ್ದಾಗಿನ ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ. ಸಿದ್ದರಾಮಯ್ಯ ಅವರ ಹಳೆಯ ವಿಡಿಯೋವನ್ನು ಇಟ್ಟುಕೊಂಡು ಬಿಜೆಪಿ ಇದೀಗ ಸಿದ್ದರಾಮಯ್ಯ ಅವರತ್ತ ತಿರುಗುಬಾಣ ತಿರುಗಿಸಿದೆ. ಆಗ ಒಂದು ಈಗ ಒಂದು. ಆಡಳಿತ ಪಕ್ಷದಲ್ಲೊಂದು ವಿರೋಧ ಪಕ್ಷದಲ್ಲೊಂದು ಎಂದು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದೆ ಬಿಜೆಪಿ.
ಮುಡಾ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನ ಮೇಲೆ ಮುಗಿ ಬೀಳುವುದು ಮುಂದುವರಿದಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋವೊಂದನ್ನು ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಡೋಂಗಿರಾಮಯ್ಯನ ಇಡೀ ಜೀವನವೇ ಒಂದು ದೊಡ್ಡ ಡೋಂಗಿ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರ ಹಳೆಯ ವಿಡಿಯೋದಲ್ಲಿ ಏನಿದೆ. ಅಶೋಕ್ ಹೇಳಿದ್ದು ಏನು ಎನ್ನುವ ವಿವರ ಇಲ್ಲಿದೆ.

ಆರ್. ಅಶೋಕ್ ಹೇಳಿದ್ದೇನು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಆಗ್ರಹಿಸುತ್ತಲ್ಲೇ ಇದೆ. ಇದೀಗ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಆರ್. ಅಶೋಕ್ ಅವರು, ಬುರುಡೆ ರಾಮಯ್ಯನ ಬದುಕೆಲ್ಲ ಬರೀ ಬುರುಡೆಯೇ ಆಗಿದೆ. ಕಾಲಕ್ಕೆ ತಕ್ಕಂತೆ ತಮ್ಮ ಮೂಗಿನ ನೇರಕ್ಕೆ ಬಣ್ಣ ಬದಲಾಯಿಸುವ ಊಸರವಳ್ಳಿ ರಾಮಯ್ಯನ ಬೂಟಾಟಿಕೆ ಬಗ್ಗೆ ದೊಡ್ಡ ಪುಸ್ತಕವನ್ನೇ ಬರೆಯಬಹುದು ಎಂದು ವ್ಯಂಗ್ಯವಾಡಿದ್ದಾರೆ.
2011ರಲ್ಲಿ ರಾಜ್ಯಪಾಲರ ಅಧಿಕಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನುಡಿದಿರುವ ನುಡಿಮುತ್ತುಗಳನ್ನು ಒಮ್ಮೆ ಕೇಳಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಅವರು 2011ರಲ್ಲಿ ಮಾತನಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಎರಡೆರಡು ನ್ಯಾಯಾಲಯಗಳು ಛೀಮಾರಿ ಹಾಕಿ, ಲೋಕಾಯುಕ್ತ ಪೊಲೀಸರು ಎಫ್ಐಆರ್ ಹಾಕಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲಾಗದಂತಹ ನಿಮ್ಮಂತಹ ದುರ್ಬಲ ಕೆಪಿಸಿಸಿ ಅಧ್ಯಕ್ಷರು ಬಹುಶಃ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಇರಲಿಲ್ಲ. ಇಂತಹ ನಾಮಕಾವಸ್ತೆ ಅಧ್ಯಕ್ಷಗಿರಿ ಇಟ್ಟುಕೊಂಡು ಏನು ಮಾಡುತ್ತೀರಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
'ಮನೇಲಿ ಇಲಿ ಬೀದೀಲಿ ಹುಲಿ' ಎಂಬಂತೆ ನಿಮ್ಮ ಪೌರುಷ, ಅಬ್ಬರ ಮಾಧ್ಯಮಗಳ ಮುಂದೆ ಮಾತ್ರವೇ ಇಲ್ಲ ಸಿದ್ದರಾಮಯ್ಯರನ್ನು ಇಳಿಸಿದರೆ ಅವರು ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸಿ ಬಿಡುತ್ತಾರೆ ಎಂಬ ಭಯವೇ ಎಂದು ಕೇಳಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದೇನು: ಆರ್. ಅಶೋಕ್ ಅವರು ಸಿದ್ದರಾಮಯ್ಯ ಅವರು 2011ರಲ್ಲಿ ನೀಡಿದ್ದ ಹೇಳಿಕೆ ಇರುವ ವಿಡಿಯೋವನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಆ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು, ರಾಷ್ಟ್ರಪತಿ ಅವರು ದೇಶದ ಸಂವಿಧಾನದ ಮುಖ್ಯಸ್ಥರು, ಅವರ ಪ್ರತಿನಿಧಿಯಾಗಿ ರಾಜ್ಯಪಾಲರು ಪ್ರತಿ ರಾಜ್ಯದಲ್ಲೂ ಕೆಲಸ ಮಾಡುತ್ತಾರೆ.
ಸರ್ಕಾರ ಸಂವಿಧಾನದ ಚೌಕಟ್ಟಿನ ಒಳಗೆ ಕೆಲಸ ಮಾಡುತ್ತಿದೆಯೋ ಇಲ್ಲವೋ ಎನ್ನುವುದನ್ನು ನೋಡುವ ಉಸ್ತುವಾರಿ ರಾಜ್ಯಪಾಲರಿಗೆ ಇರುತ್ತಿದೆ. ಸರ್ಕಾರ ತಪ್ಪು ಮಾಡಿದರೆ, ಆ ಸರ್ಕಾರವನ್ನು ಎಚ್ಚರಿಸುವ, ಬುದ್ಧಿ ಹೇಳುವಂತಹ ಹಾಗೂ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ. ರಾಜ್ಯಪಾಲರು ಅಧಿಕರವನ್ನು ಚಲಾಯಿಸಿದಾಗ, ಇದು ರಾಜಕೀಯ ಪ್ರೇರಿತ, ದುರುದ್ದೇಶ ಹಾಗೂ ಪ್ರಿಪ್ಲಾನ್ಡ್, ವಿರೋಧ ಪಕ್ಷದವರು ಮಾಡಿಸುತ್ತಿದ್ದಾರೆ ಎಂದರೆ ಜನ ನಂಬುವುದಿಲ್ಲ ಎಂದು ಹೇಳಿರುವುದು ಅದರಲ್ಲಿ ದಾಖಲಾಗಿದೆ.












Click it and Unblock the Notifications