ಬೋಗಸ್ BPL ಕಾರ್ಡ್ ಹಿಂದಿರುಗಿಸದೇ ಇದ್ದರೆ ಕಾದಿದೆ ಜೈಲು ಶಿಕ್ಷೆ!
ಬೆಂಗಳೂರು, ಫೆ. 26: ಬಡವರಿಗೆ ಅಂತಾ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಬಲಾಢ್ಯರು ದುರುಪಯೋಗ ಪಡಿಸಿಕೊಳ್ಳುವುದು ಹೊಸದೇನಲ್ಲ. ಬಡತನ ರೇಖೆಗಿಂತ ಕೆಳಗಿರುವವರ ಹಸಿವು ನೀಗಿಸಲು ಜಾರಿಗೆ ತಂದಿರುವ ಬಿಪಿಎಲ್ ಪಡಿತರ ಚೀಟಿಗಳು ಶ್ರೀಮಂತರು ಪಾಲಾಗಿವೆ. ಅಂತಹ ಭೋಗಸ್ ಕಾರ್ಡ್ಗಳನ್ನು ಹೊಂದಿರುವವರು ತತಕ್ಷಣ ಇಲಾಖೆಗೆ ಕಾರ್ಡ್ ಹಿಂದಿರುಗಿಸಲು ಕೊನೆಯ ಎಚ್ಚರಿಕೆಯನ್ನು ಆಹಾರ ಇಲಾಖೆ ಕೊಟ್ಟಿದೆ.
ಬೋಗಸ್ ಬಿಪಿಎಲ್ ಕಾರ್ಡ್ ಹಿಂದಿರುವವರಿಗೆ ಕನಿಷ್ಠ 3 ತಿಂಗಳು ಜೈಲುವಾಸ ಶಿಕ್ಷೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಶವಿದೆ. ಸುಪ್ರೀಂಕೋರ್ಟ್ ಆದೇಶದಂತೆ ಇದೀಗ ಪಡಿತರ ಚೀಟಿಯೊಂದಿಗೆ ಆಧಾರ್ ಜೋಡಣೆ ನಡೆಯುತ್ತಿದೆ, ಹೀಗಾಗಿ ಬೋಗಸ್ ಕಾರ್ಡ್ ಹೊಂದಿದವರಿಗೆ ಆತಂಕ ಶುರುವಾಗಿದೆ.
ಈ ಹಿಂದಿನಿಂದಲೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೋಗಸ್ ಕಾರ್ಡ್ ಹಿಂದಿರುಗಿಸುವಂತೆ ಮನವಿ ಮಾಡುತ್ತಲೇ ಬಂದಿದೆ. ಆದರೂ ಸರ್ಕಾರಿ ನೌಕರರು ಸೇರಿದಂತೆ ಆರ್ಥಿಕವಾಗಿ ಸಬಲರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ. ಇದೀಗ ಆಧಾರ್ ಲಿಂಕ್ ಮಾಡಲು ಆಹಾರ ಇಲಾಖೆ ಮುಂದಾಗಿದ್ದು, ಆರ್ಥಿಕವಾಗಿ ಸಬಲರು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಅಂಥವರಿಗೆ ಇಲಾಖೆ ನೋಟಿಸು ಕೊಟ್ಟಿದೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನು ಕೊಡಲಾಗಿದೆ.
ಬೋಗಸ್ BPL ಕಾರ್ಡ್ ಹಿಂದಿರುಗಿಸಲು 2 ತಿಂಗಳ ಗಡುವು
ಬೋಗಸ್ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಎರಡು ತಿಂಗಳಲ್ಲಿ ಕಾರ್ಡ್ ಹಿಂದಿರುಗಿಸುವಂತೆ ಸರ್ಕಾರ ಸೂಚನೆ ಕೊಟ್ಟಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ. ಗೋಪಾಲಯ್ಯ ಅವರೇ ಕೊನೆಯ ಎಚ್ಚರಿಕೆಯನ್ನು ಕೊಟ್ಟಿದ್ದು, ಮುಂದಿನ ಎರಡು ತಿಂಗಳಲ್ಲಿ ಕಾರ್ಡ್ ಹಿಂದಿರುಗಿಸದೇ ಇದ್ದರೆ ಕ್ರಮಿನಲ್ ಮೊಕದ್ದಮೆ ಹಾಕವುದಾಗಿ ಹೇಳಿದ್ದಾರೆ.
ಆಹಾರ ಇಲಾಖೆ ಈಗಾಗಲೇ ಅನರ್ಹ ಫಲಾನುಭವಿಗಳಿಂದ 1 ಲಕ್ಷಕ್ಕೂ ಹೆಚ್ಚು ಬೋಗಸ್ ಕಾರ್ಡ್ಗಳನ್ನು ಮುಟ್ಟುಗೋಲು ಹಾಕಿಕೊಂಡು ರದ್ದು ಮಾಡಿದೆ. ಬಿಪಿಎಲ್ ಸೇರಿದಂತೆ ಪಡಿತರ ಕಾರ್ಡ್ಗಳನ್ನು ಆಧಾರ್ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಬೋಗಸ್ ಕಾರ್ಡ್ಗಳ ಫಲಾನುಭವಿಗಳು ಸಿಕ್ಕಿಬೀಳಲಿದ್ದಾರೆ. ಅದಕ್ಕೂ ಮೊದಲು ಸ್ವಯಂಪ್ರೇರಿತರಾಗಿ ಬೋಗಸ್ ಕಾರ್ಡ್ಗಳನ್ನು ಹಿಂದಿರುಗಿಸಲು ಇಲಾಖೆ ಸೂಚಿಸಿದೆ. ಇಲ್ಲದಿದ್ದರೆ ಇಲ್ಲಿಯವರೆಗೆ ಪಡೆದುಕೊಂಡಿರುವ ಪಡಿತರಕ್ಕೆ ದಂಡ ಹಾಕಿ ವಸೂಲಿ ಮಾಡಲು ಕ್ರಿಮಿನಲ್ ಮೊಕದ್ದಮೆಗೆ ಜಿಲ್ಲಾಧಿಕಾರಗಳಿಗೆ ಸೂಚಿಸಿದೆ.
ಬೋಗಸ್ ಕಾರ್ಡ್ ಹೊಂದಿರುವವರ ಮೇಲೆ ಕ್ರಮಿನಲ್ ಮೊಕದ್ದಮೆ!
ಬೋಗಸ್ ಕಾರ್ಡ್ ಸಹಾಯದಿಂದ ಪಡಿತರ ಸೇರಿದಂತೆ ಸರ್ಕಾರದ ಬೇರೆ ಬೇರೆ ಯೋಜನೆಗಳನ್ನು ಪಡೆದುಕೊಂಡಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಈಗಾಗಲೇ ಬೋಗಸ್ ಕಾರ್ಡ್ನಿಂದ ಸರ್ಕಾರದ ಸೌಲಭ್ಯ ಪಡೆದಿರುವವರು ಅದನ್ನು ಹಿಂದಿರುಗಿಸುವಂತೆ ಇಲಾಖೆ ಸೂಚಿಸಿದೆ.
ಸರ್ಕಾರದ ನಿಯಮ ಮೀರಿ ಬೋಗಸ್ ಬಿಪಿಎಲ್ ಕಾರ್ಡ್ ಹೊಂದಿರುವವರ ಮೇಲೆ ಐಪಿಸಿ ಸೆಕ್ಷನ್, ಜೀವನಾವಶ್ಯಕ ವಸ್ತುಗಳ ಕಾಯ್ದೆ 1955ರಂತೆ ಕ್ರಮಿನಲ್ ಮೊಕದ್ದಮೆ ಹೂಡಲು ಆವಕಾಶವಿದೆ. ಜೊತೆಗೆ ಇಲ್ಲಿವರೆಗೆ ಪಡೆಯಲಾದ ಪ್ರತಿ ಕೆಜಿ ಆಹಾರ ಧಾನ್ಯಕ್ಕೆ 38 ರೂ. ಗಳಂತೆ ವಸೂಲಿ ಮಾಡಲಾಗುವುದು. ಅನಧೀಕೃತವಾಗಿ ಪಡಿತರ ಚೀಟಿ ಹೊಂದುವುದರ 1977 ಪ್ರಕಾರ ಕನಿಷ್ಠ 3 ತಿಂಗಳು ಜೈಲುವಾಸ ಶಿಕ್ಷೆಯೂ ಆಗುವ ಸಾಧ್ಯತೆಗಳಿರುತ್ತವೆ. ಬೇರೆ ಯೋಜನೆಗಳನ್ನು ಕೂಡ ದಂಡ ಸಹಿತ ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ.
7 ದಿನಗಳಲ್ಲಿ ಉತ್ತರಿಸುವಂತೆ ಇಲಾಖೆಯಿಂದ ನೋಟಿಸ್ ಜಾರಿ
ಬೋಗಸ್ ಕಾರ್ಡ್ ಹೊಂದಿದವರಿಂದ ಈಗಾಗಲೇ 96 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಬೋಗಸ್ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡುತ್ತಿದೆ. ಜೀವನಾವಶ್ಯಕ ಕಾಯ್ದೆಯಡಿ ನಿಮ್ಮ ವಿರುದ್ಧ ಯಾಕೇ ಕ್ರಮಿನಲ್ ಮೊಕದ್ದಮೆ ಹೂಡಬಾರದು? ಇಲ್ಲಿಯವರೆಗೆ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಮಡಿದ್ದರ ಬಾಬತ್ತನ್ನು ನೋಟಿಸು ಮುಟ್ಟಿದ 7 ದಿನಗಳ ಒಳಗೆ ಸರ್ಕಾರದ ಲೆಕ್ಕ ಶೀರ್ಷಿಕೆ ಭರಣ ಮಾಡಿ ಮೂಲಕ ಚಲನ್ ಪ್ರತಿಯೊಂದಿಗೆ ನಿಮ್ಮ ವಿವರಣೆ ಸಲ್ಲಿಸಲು ಸೂಚಿಸಲಾಗಿದೆ ಎಂದು ನೋಟಿಸ್ ಕೊಡಲಾಗುತ್ತಿದೆ.
ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಪಡಿತರ ಚೀಟಿಯೊಂದಿಗೆ ಖುದ್ದಾಗಿ ಕಚೇರಿಗೆ ದಾಖಲೆಗಳೊಂದಿಗೆ ಹಾಜರಾಗಿ ನಿಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ನಿಮ್ಮ ವಿರುದ್ಧ ಸರ್ಕಾರದ ಆದೇಶದಂತೆ ಕಾನೂನು ಕ್ರಮ ಜರುಗಿಸಲಾಗುವುದು.
ಬಿಪಿಎಲ್ ಕಾರ್ಡ್ ರದ್ದಿನಿಂದ ಕಡಿಮೆಯಾಗುತ್ತಿದೆ ಆರ್ಥಿಕ ಹೊರೆ
ರಾಜ್ಯದಲ್ಲಿ 10,94,160 ಅಂತ್ಯೋದಯ ಪಡಿತರ ಚೀಟಿಗಳು., 1,15,98,234 ಆದ್ಯತಾ ಪಡಿತರ ಚೀಟಿ ಗಳು, ಹಾಗೂ 20,28,417 ಆದ್ಯತೇತರ ಪಡಿತರ ಚೀಟಿಗಳು ಇವೆ. 30 ಜಿಲ್ಲೆಗಳಲ್ಲಿಯೂ ಬೋಗಸ್ ಬಿಪಿಎಲ್ ಕಾರ್ಡ್ ಪತ್ತೆ ಕಾರ್ಯ ನಡೆದಿದೆ. ಕಳೆದ ಒಂದು ವರ್ಷದಲ್ಲಿ ಒಂದು ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ನಾನಾ ಕಾರಣಗಳಿಂದ ರದ್ದು ಮಾಡಲಾಗಿದೆ. ಬಿಪಿಎಲ್ ಕಾರ್ಡ್ ರದ್ದುಗೊಂಡಿದ್ದರಿಂದ ಇಲಾಖೆಗೆ ಆರ್ಥಿಕ ಹೊರೆ ಕಡಿಮೆ ಆಗಿದೆ. ಬಿಪಿಎಲ್ ಕಾರ್ಡ್ ಪಡೆದಿರುವ ಅನರ್ಹರಿಗೆ ವಾಪಸ್ ಮಾಡಲು ಕಾಲಾವಕಾಶ ನೀಡಲಾಗಿದೆ. ಎರಡು ತಿಂಗಳು ಕಾಲಾವಕಾಶ ನೀಡಲಾಗುತ್ತೆ. ಎರಡು ತಿಂಗಳಲ್ಲಿ ವಾಪಸ್ ಮಾಡದೇ ಹೋದರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಎಂದು ಆಹಾರ ಸಚಿವ ಕೆ. ಗೋಪಾಲಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.