ಚಿಕ್ಕಬಳ್ಳಾಪುರ: ಪೊಲೀಸ್ ವಿಚಾರಣೆ ವೇಳೆ ರೈತ ಸಾವು
ಚಿಕ್ಕಬಳ್ಳಾಪುರ, ಜುಲೈ, 18: ಪೊಲೀಸರ ವಿಚಾರಣೆ ವೇಳೆ ರೈತರೊಬ್ಬರು ಕುಸಿದು ಬಿದ್ದು ಮೃತಪಟ್ಟ ಪರಿಣಾಮ ಚಿಕ್ಕಬಳ್ಳಾಪುರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ರೈತ ರೂಪೇಶ್ ಸಾವಿಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರೆ ಕಾರಣ. ಇನ್ಸ್ ಪೆಕ್ಟರ್ ಮಂಜುನಾಥ್ ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ರೂಪೇಶ್ ಸಂಬಂಧಿಕರು ಸೋಮವಾರ ಮುಂಜಾನೆ ಪ್ರತಿಭಟನೆ ನಡೆಸಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಬೇಕಾಗಿ ಬಂತು.[ರಸಗೊಬ್ಬರ ದರ ಗಣನೀಯ ಇಳಿಕೆ: ಕೇಂದ್ರಕ್ಕೆ ಧನ್ಯವಾದ]
ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿ ಪೊಲೀಸರು ಹೊಸ ಹುಡ್ಯ ಗ್ರಾಮದ ರೈತ ರೂಪೇಶ್ ಎಂಬುವರನ್ನು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದ ರೈತರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೂಪೇಶ್ ಸಾವನ್ನಪ್ಪಿದ್ದರು.[ಮಳೆಗಾಲದ ಕಲ್ಪವೃಕ್ಷ, ರೈತರಿಗೆ ವರದಾನ ಪಣಂಪುಳಿ]
ನನ್ನ ಗಂಡನ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಶವ ಸಂಸ್ಕಾರವನ್ನು ಮಾಡದೇ ಪ್ರತಿಭಟನೆ ನಡೆಸುತ್ತೇವೆ ಎಂದು ಮೃತ ರೂಪೇಶ್ ಪತ್ನಿ ಪುಷ್ಪಾ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ವಲಯ ಐಜಿಪಿ ಸೀಮಂತ್ ಕುಮಾರ್ ಬಿಗಿ ಪೊಲೀಸ್ ಬಂದೋಬಸ್ತ್ ಗೆ ಸೂಚನೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಮತ್ತು ಹೊಸ ಹುಡ್ಯ ಗ್ರಾಮದಲ್ಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು ಚಿಕ್ಕಬಳ್ಳಾಪುರ ಎಸ್ ಪಿ ಚೈತ್ರಾ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿದ್ದಾರೆ.
ಏನಿದು ವಿವಾದ: ಮೃತ ರೈತನ ಬಳಿ 33 ಗುಂಟೆ ಜಮೀನು ಇತ್ತು ಎಂದು ಹೇಳಲಾಗಿದ್ದು ಪ್ರಭಾವಿ ವ್ಯಕ್ತಿಯೊಬ್ಬರು ಜಾಗದ ಮೇಲೆ ಕಣ್ಣಿಟ್ಟಿದ್ದರು. ಪೊಲೀಸರ ಮೂಲಕ ರೈತನಿಗೆ ಬೆದರಿಕೆ ಹಾಕಿಸಿ ಜಮೀನು ನೀಡಲು ಹೇಳಿದ್ದರು ಎಂದು ಪ್ರತಿಭಟನಾ ನಿರತರು ಆರೋಪಿಸಿದರು.