ಅಳಿವಿನಂಚಿನಲ್ಲಿರುವ ಜೆಡಿಎಸ್ ಪಕ್ಷ ಚುನಾವಣೆ ಬಳಿಕ ನಿರ್ನಾಮವಾಗಲಿದೆ: ಸಂಸದ ತೇಜಸ್ವಿ ಸೂರ್ಯ
ಅಹಮದಾಬಾದ್, ಡಿಸೆಂಬರ್ 02: ಕರ್ನಾಟಕ ವಿಧಾನಸಭೆ ಚುನಾವಣೆ ನಂತರ ಜೆಡಿಎಸ್ ಪಕ್ಷವು ಕರ್ನಾಟಕದಿಂದ ನಿರ್ನಾಮವಾಗಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಗುಜರಾತ್ನ ಅಹಮದಾಬಾದ್ನಲ್ಲಿ ಮಾತನಾಡಿದ ಅವರು, 'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಬಂಧಿಸಿದಂತ ಎಚ್.ಡಿ.ಕುಮಾರಸ್ವಾಮಿ ಅವರು ಬಳಸಿರುವ ಅಸಂಸದೀಯ ಪದ ಅವರ ರಾಜಕೀಯ ಹತಾಶೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದ್ದಾರೆ.
'ಜೆಡಿಎಸ್ ಪಕ್ಷ ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷವಾಗಿ ಮಾರ್ಪಟ್ಟಿದೆ. ಚುನಾವಣೆ ನಂತರ ಜೆಡಿಎಸ್ ಕರ್ನಾಟಕದಿಂದ ನಿರ್ನಾಮವಾಗಲಿದೆ' ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಶನಿವಾರ ಮಂಡ್ಯ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಡಿಎಸ್ ಪಕ್ಷವನ್ನು ಟೀಕಿದ್ದರು.
'ಜೆಡಿಎಸ್ ಒಂದು ಕೌಟುಂಬಿಕ ಪಕ್ಷ. ಅದು ಒಂದು ವೇಳೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ, ಮಂಡ್ಯ ಜಿಲ್ಲೆಯು ಆ ಪಕ್ಷದ ಎಟಿಎಂ ಆಗಲಿದೆ' ಎಂದು ಮೂದಲಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ ಅಮಿತ್ ಶಾ ಅವರನ್ನು ಗೋಬೆಲ್ಸ್ಗೆ ಹೋಲಿಸಿದ್ದರು.
'ಅಮಿತ್ ಶಾ ಅವರೇ ನೀವು ಜರ್ಮನಿ ಸರ್ವಾಧಿಕಾರಿ ಹಿಟ್ಲರ್ ಸರ್ಕಾರದಲ್ಲಿದ್ದ ಪ್ರೊಪೆಗೆಂಟ್ ಮಿನಿಸ್ಟರ್ ಗೋಬೆಲ್ಸ್ ಅವರ ಪ್ರತಿರೂಪ. ನೀವು ಸುಳ್ಳು ಹೇಳುತ್ತೀರಿ. ಅದರಿಂದಲೇ ಪ್ರಚಾರ ಗಿಟ್ಟಿಸಿಕೊಳ್ಳುತ್ತೀರಿ. ಇಂತಹ ಅಧೋಗತಿ ನಿಮಗೆಕೆ ಬಂದಿದೆಯೊ ತಿಳಿಯದು' ಎಂದು ಎಚ್ಡಿಕೆ ಹೇಳಿದ್ದರು.
'ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಂಡ್ಯ ಜಿಲ್ಲೆಯೇ ಅದರ ಎಟಿಎಂ ಆಗಲಿದೆ ಎಂದು ಅಪಪ್ರಚಾರ ಮಾಡಿದ್ದೀರಿ. ನಾವು ಅಧಿಕಾರಕ್ಕೆ ಬಂದರೆ, ಜನರಿಗೆ ಎಟಿಎಂ ಆಗಲಿದ್ದೇವೆ. ಕೋಟ್ಯಂತರ ಕನ್ನಡಿಗರ ಎಟಿಎಂ ಆಗಲಿದ್ದೇವೆ. ಕೂಲಿ ಕಾರ್ಮಿಕರ, ರೈತರ, ಬಡವರ, ವಿಕಲಚೇತನರಿಗೆ ಎಟಿಎಂ ಆಗಲಿದ್ದೇವೆ' ಎಂದು ತಿಳಿಸಿದ್ದರು.

ನಮ್ಮ ಪ್ರಕಾರ, ಎಟಿಎಂ ಎಂದರೆ ಎನಿ ಟೈಮ್ ಮನುಷ್ಯತ್ವ, ನಿಮ್ಮ ಪ್ರಕಾರ ಎಟಿಎಂ ಎಂದರೆ ಎನಿ ಟೈಮ್ ಮೋಸವೆಂದೂ ಕುಮಾರಸ್ವಾಮಿ ಹರಿಹಾಯ್ದಿದ್ದರು.
ಕರ್ನಾಟಕದ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಬಿಜೆಪಿ ಶತಾಯುಗತಾಯ ಗೆಲ್ಲಲೇಬೇಕೆಂದು ಯೋಜನೆ ರೂಪಿಸುತ್ತಿದೆ. ಅಧಿಕಾರ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ. ಕುಮಾರಸ್ವಾಮಿ ಅವರು ಹಳೇ ಮೈಸೂರು ಭಾಗದಲ್ಲಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಅಮಿತ್ ಶಾ ಅವರು ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಈ ವರೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಪೈಪೋಟಿ ನಡೆಸಿವೆ. ಈ ಜಿಲ್ಲೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.












Click it and Unblock the Notifications