ಗಾಲಿ ರೆಡ್ಡಿ ಪರಮ ಶತ್ರು ಟಪಾಲ್ ಗಣೇಶ್ ಚುನಾವಣಾ ಕಣಕ್ಕೆ?
ಬಳ್ಳಾರಿ, ಜನವರಿ 29: ಗಣಿ ರೆಡ್ಡಿಗಳ ವಿರುದ್ಧ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದ, ಆರ್ಟಿಐ ಕಾರ್ಯಕರ್ತ, ಗಣಿ ಉದ್ಯಮಿ ಟಪಾಲ್ ಗಣೇಶ್ ಚುನಾವಣಾ ಕಣಕ್ಕೆ ಇಳಿಯುವ ಮೂಲಕ ಬಳ್ಳಾರಿಯ ರಾಜಕಾರಣಕ್ಕೆ ಹೊಸ ಭಾಷ್ಯವನ್ನು ಬರೆಯಲಿದ್ದಾರೆಯೇ? ಎಂಬ ಪ್ರಶ್ನೆ ಬಳ್ಳಾರಿಯಲ್ಲಿ ಓಡಾಡುತ್ತಿದೆ.
'ಫೆಬ್ರವರಿ 19 ರ ಸೋಮವಾರ ನನ್ನ ಹುಟ್ಟುಹಬ್ಬ. ಅಂದು ನನ್ನ ಆಪ್ತರು - ಅಭಿಮಾನಿಗಳ ಸಮ್ಮುಖದಲ್ಲಿ ನನ್ನ ಭವಿಷ್ಯದ ರಾಜಕೀಯ ನಡೆಯನ್ನು ಘೋಷಣೆ ಮಾಡುವೆ' ಎಂದು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಈ ಕುತೂಹಲದ ಪ್ರಶ್ನೆ, ಟಪಾಲ್ ಗಣೇಶ್ ಆಪ್ತರಲ್ಲಿ ತೀವ್ರವಾಗಿ ಕಾಡುತ್ತಿದೆ. ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳ ಜೊತೆ ಅಧಿಕೃತವಾಗಿ ಗುರುತಿಸಿಕೊಂಡು, ಸ್ವಾಭಿಮಾನಕ್ಕೆ ಧಕ್ಕೆ ಬಂದ ತಕ್ಷಣವೇ ಆ ಪಕ್ಷಗಳನ್ನು ಬಿಟ್ಟಿದ್ದಾರೆ.
ತನ್ನದೇ ಆದ ರೀತಿಯಲ್ಲಿ ಬಿಜೆಪಿಯನ್ನು, ರೆಡ್ಡಿ ಸಹೋದರರನ್ನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದೇ ಪದೇ ಟೀಕಿಸುತ್ತ, ಕೆಣಕುತ್ತಿರುವ ಟಪಾಲ್ ಗಣೇಶ್, ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿ ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.

ಜೆಡಿ(ಯು) ಮತ್ತು ಎಎಪಿ ಪಕ್ಷದ ಜೊತೆ
ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಟಪಾಲ್ ಗಣೇಶ್ ಅವರು, ಜೆಡಿ(ಯು) ಮತ್ತು ಎಎಪಿ ಪಕ್ಷದ ಜೊತೆಯಲ್ಲಿ ನಿರಂತರ ಮಾತುಕತೆಗಳನ್ನು ನಡೆಸುತ್ತಿದ್ದು, ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಜೆಡಿ(ಯು)ಗೆ ಅಥವಾ ಎಎಪಿಗೆ ನೇತಾರರಾಗಿ ಹೊರಹೊಮ್ಮಲಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಗಣಿ ಅಕ್ರಮಗಳೆ ಪ್ರಮುಖ ಅಸ್ತ್ರವಾಗಲಿದೆ
ಟಪಾಲ್ ಗಣೇಶ್ ಚುನಾವಣೆಯಲ್ಲಿ ಸ್ಪರ್ಧಿಸಿದಲ್ಲಿ, ಗಣಿ ಅಕ್ರಮ, ಸಿದ್ದರಾಮಯ್ಯ ಅವರ ಪಾದಯಾತ್ರೆ ಮತ್ತು ಕರ್ನಾಟಕ ಸರ್ಕಾರದ ವೈಫಲ್ಯಗಳೇ' ಪ್ರಮುಖ ಪ್ರಚಾರದ ವಿಷಯ ವಸ್ತುಗಳಾಗಲಿವೆ. ಅಲ್ಲದೆ, ಅವರ ಬಳಿ ಇರುವ ಗಣಿ ಅಕ್ರಮ ದಾಖಲೆಗಳು ಜನ ಜಾಗೃತಿಗೆ ಬಳಕೆಯಾಗುವ ಲಕ್ಷಣಗಳಿವೆ.

ಸತ್ಯನಾರಾಯಣಪೇಟೆಯಲ್ಲಿ ಆಪ್ತರ ಜತೆ ಸಭೆ
ತಮ್ಮ ಆಪ್ತರು, ಅಭಿಮಾನಿಗಳ ಸಭೆಗಳನ್ನು ನಡೆಸಲು ಸತ್ಯನಾರಾಯಣಪೇಟೆಯಲ್ಲಿ ಇರುವ ತಮ್ಮ ಸ್ವಂತದ ಸ್ಥಳದಲ್ಲಿ ಫಂಕ್ಷನ್ಹಾಲ್ ಕಟ್ಟಿಸಿದ್ದು, ಪ್ರಚಾರ ರಹಿತವಾಗಿ ಆಗಾಗ್ಗೆ ರಾಜಕೀಯ ಸಭೆಗಳನ್ನು ತೆರೆಮರೆಯಲ್ಲಿ ನಡೆಸುತ್ತಲೇ ಇದ್ದಾರೆ. ತಮ್ಮದೇ ಆದ ಸ್ವಂತಿಕೆಯಲ್ಲಿ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಟಪಾಲ್ ಗಣೇಶ್, ಸ್ಪರ್ಧಿಸಿದಲ್ಲಿ, ಗೆಲ್ಲುವ ಅಭ್ಯರ್ಥಿಗೆ ಅಡ್ಡಗಾಲು' ಹಾಕುತ್ತಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಭ್ರಷ್ಟಾಚಾರ ಮುಕ್ತ' ರಾಜಕೀಯ
ಟಪಾಲ್ ಗಣೇಶ್ ಅವರು, ಭ್ರಷ್ಟಾಚಾರ ಮುಕ್ತ' ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಇಷ್ಟು ವರ್ಷಗಳ ಕಾಲದ ಸುದೀರ್ಘ ಹೋರಾಟವನ್ನು ಅನೇಕರು ಮೆಚ್ಚಿದ್ದಾರೆ.
ನನ್ನ ಹೋರಾಟವನ್ನು ಅನೇಕರು ಒಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವೆ. ಫೆಬ್ರವರಿ 19 ರ ಸೋಮವಾರ ನನ್ನ ಹುಟ್ಟುಹಬ್ಬ. ಅಂದು ನನ್ನ ಆಪ್ತರು - ಅಭಿಮಾನಿಗಳ ಸಮ್ಮುಖದಲ್ಲಿ ನನ್ನ ಭವಿಷ್ಯದ ರಾಜಕೀಯ ನಡೆಯನ್ನು ಘೋಷಣೆ ಮಾಡುವೆ' ಎಂದು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.












Click it and Unblock the Notifications