ಕನ್ನಡಿಗರ ವಿರುದ್ಧ ತೊಡೆ ತಟ್ಟಿದ ತಮಿಳುನಾಡು ಸಿಎಂ ವಿಜಯ್; ಮೇಕೆದಾಟು ಯೋಜನೆ ನಿಲ್ಲಿಸುವಂತೆ ಪ್ರಧಾನಿ ಮೋದಿಗೆ ಪತ್ರ
ಕರ್ನಾಟಕದ ಬಹುಕಾಲದ ಕನಸಾದ ಹಾಗೂ ಕನ್ನಡಿಗರ ಕುಡಿಯುವ ನೀರಿನ ಹಕ್ಕಿನ ಮೇಕೆದಾಟು ಯೋಜನೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ, ನಟ ದಳಪತಿ ವಿಜಯ್ ಮತ್ತೆ ಕಂಟಕವಾಗಲು ಹೊರಟಿದ್ದಾರೆ. ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸಿಎಂ ವಿಜಯ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ನೆಪವೊಡ್ಡಿದ ವಿಜಯ್
ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಮೇಕೆದಾಟು ಯೋಜನೆಗೆ ಮರುಜೀವ ನೀಡಲು ಮುಂದಾದ ಬೆನ್ನಲ್ಲೇ, ತಮಿಳುನಾಡು ಸರ್ಕಾರ ಟಕ್ಕರ್ ನೀಡಿದೆ. ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಕರ್ನಾಟಕದ ವಿರುದ್ಧ ವಾದ ಮಂಡಿಸಿರುವ ಸಿಎಂ ವಿಜಯ್, "ಮೇಕೆದಾಟು ಅಣೆಕಟ್ಟು ನಿರ್ಮಾಣ ಪ್ರಸ್ತಾವನೆಯು ಸುಪ್ರೀಂಕೋರ್ಟ್ನ ಈ ಹಿಂದಿನ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ದೂರಿದ್ದಾರೆ. ಅಷ್ಟೇ ಅಲ್ಲದೆ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ನೀಡಿದ್ದ ಹೇಳಿಕೆಗಳ ಬಗ್ಗೆಯೂ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ರಾತ್ರೋರಾತ್ರಿ ಹಿರಿಯ ಅಧಿಕಾರಿಗಳ ಸಭೆ
ಪ್ರಧಾನಿಗೆ ಪತ್ರ ಬರೆಯುವ ಮುನ್ನ, ಸಿಎಂ ವಿಜಯ್ ಅವರು ಚೆನ್ನೈನಲ್ಲಿ ತಮಿಳುನಾಡಿನ ಹಿರಿಯ ಸಚಿವರು ಹಾಗೂ ಕಾನೂನು ತಜ್ಞರೊಂದಿಗೆ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. "ರಾಜ್ಯದ ಹಕ್ಕುಗಳನ್ನು ರಕ್ಷಿಸುವುದು ಮತ್ತು ತಮಿಳುನಾಡು ರೈತರ ಹಿತ ಕಾಯುವುದು" ಎಂಬ ನೆಪವೊಡ್ಡಿ ನಡೆದ ಈ ಸಭೆಯಲ್ಲಿ, ಕರ್ನಾಟಕದ ವಿರುದ್ಧ ತಕ್ಷಣವೇ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ವಿಜಯ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ 2018 ಮತ್ತು 2022ರಲ್ಲಿಯೂ ತಮಿಳುನಾಡು ಸರ್ಕಾರ ಮೇಕೆದಾಟು ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಕಾವೇರಿ ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ತೀರ್ಮಾನದ ಹೊರತಾಗಿ ಯೋಜನೆಗೆ ಅನುಮತಿ ಸಿಗುವುದಿಲ್ಲ ಎಂದು ತಮಿಳುನಾಡು ನಾಯಕರು ವಾದಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಮಿಳುನಾಡು ನಡುಕ
ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು, ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಬೇರೆ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು. "ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕ ತಕ್ಷಣವೇ ಮೇಕೆದಾಟು ಯೋಜನೆಗೆ ಭೂಮಿ ಪೂಜೆ ನೆರವೇರಿಸಲಿದ್ದೇವೆ" ಎಂದು ಡಿಕೆಶಿ ಹೇಳಿದ್ದರು. ಕರ್ನಾಟಕದ ಈ ದೃಢ ನಿರ್ಧಾರದಿಂದ ಆತಂಕಗೊಂಡಿರುವ ತಮಿಳುನಾಡು ಸಿಎಂ ವಿಜಯ್, ಕೇಂದ್ರದ ಮೂಲಕ ಯೋಜನೆಗೆ ಬ್ರೇಕ್ ಹಾಕಿಸಲು ಈಗ ಹೊಸ ಆಟ ಆರಂಭಿಸಿದ್ದಾರೆ.
ಕಾವೇರಿ ಜಲವಿವಾದವು ದಶಕಗಳಿಂದಲೂ ಕರ್ನಾಟಕ ಮತ್ತು ತಮಿಳುನಾಡು ನಡುವೆ ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯವಾಗಿದೆ. ಈಗ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿರುವ ನಟ ವಿಜಯ್, ಕನ್ನಡಿಗರ ಕುಡಿಯುವ ನೀರಿನ ಯೋಜನೆಗೆ ರಾಜಕೀಯ ಲಾಭಕ್ಕಾಗಿ ಅಡ್ಡಿಪಡಿಸುತ್ತಿರುವುದು ರಾಜ್ಯದ ಜನರಲ್ಲಿ ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.













Click it and Unblock the Notifications