ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡ ಸಂತರಿಗೆ ಶರಣುಶರಣು ಅನ್ನಬಹುದೇ?
ಬೆಂಗಳೂರು, ನ 8: ಪರಮ'ಶಿವ'ನನ್ನೇ ಆರಾಧಿಸುವ ಸ್ವಾಮೀಜಿಯೊಬ್ಬರು, ಶಿವಲಿಂಗದ ಮೇಲೆ ಕಾಲಿಟ್ಟುಕೊಂಡು ತಮ್ಮ ಶಿಷ್ಯರು ಮತ್ತು ಭಕ್ತರಿಂದ ಪೂಜೆ ಮಾಡಿಸಿಕೊಂಡಿದ್ದಾರೆ.
ಕಳೆದ ಭಾನುವಾರ (ನ 5), ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮಹಿಮೆ ರಂಗನಬೆಟ್ಟದ ಬಳಿಯ ಜಡೆ ಶಾಂತಲಿಂಗೇಶ್ವರರ ಶಾಖಾ ಮಠದಲ್ಲಿ ನಡೆದ ಸದ್ಭಾವನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವರ್ಷದ ಚಾಂದ್ರಮಾನ ಯುಗಾದಿಯಂದು ಮಾತ್ರ ಭಕ್ತರು ಮತ್ತು ಶಿಷ್ಯರಲ್ಲಿ ಮಾತನಾಡುವ ಈ ಸ್ವಾಮೀಜಿ ವರ್ಷದ ಇತರ ಎಲ್ಲಾ ದಿನಗಳಲ್ಲಿ ಮೌನವೃತದಲ್ಲಿರುತ್ತಾರೆ.
ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಳ್ಳುವ ಪದ್ದತಿ ಹಿಂದಿನಿಂದಲೂ ಇದೆ ಎಂದು ಭಕ್ತರು ಮತ್ತು ಶಿಷ್ಯವೃಂದ ಮಠದ ಈ ಅಪರೂಪದ ಪದ್ದತಿಯನ್ನು ಸಮರ್ಥಿಸಿಕೊಳ್ಳುತ್ತಾರೆ.
ಮನುಷ್ಯನಿಗೆ ಏಕನಿಷ್ಠೆ ಮತ್ತು ಪೂರ್ಣಶ್ರದ್ದೆಯಿದ್ದರೆ, ಅಸಾಧ್ಯವಾದದ್ದು ಯಾವುದೂ ಇರುವುದಿಲ್ಲ ಎನ್ನುವ ಈ ಸ್ವಾಮೀಜಿ, ಯುಗಾದಿಯ ದಿನದಂದು ಮಾತ್ರ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಾರೆ.
ಭಕ್ತರು ಆಯೋಜಿಸುವ ಈ ಕಾರ್ಯಕ್ರಮದ ವೇಳೆ, ಮಠದ ಇತರ ಸ್ವಾಮೀಜಿಗಳು ಮತ್ತು ಶಿಷ್ಯರ ಸಮ್ಮುಖದಲ್ಲೇ, ಶಿವಲಿಂಗದ ಮೇಲೆ ಸ್ವಾಮೀಜಿಯ ಕಾಲನ್ನು ಇತರ ಸ್ವಾಮೀಜಿಗಳೇ ಇಡುತ್ತಾರೆ.
ಶಾಂತಲಿಂಗೇಶ್ವರರ ಶಾಖಾ ಮಠ ಅಸಂಖ್ಯಾತ ಭಕ್ತವೃಂದವನ್ನು ಹೊಂದಿದ್ದು, ಭಾನುವಾರದ ಸದ್ಭಾವನಾ ಕಾರ್ಯಕ್ರಮಕ್ಕೆ ರಾಜಕಾರಣಿಗಳು ಸೇರಿದಂತೆ, ಭಕ್ತರ ದಂಡೇ ಹರಿದುಬಂದಿತ್ತು. (ಮಾಹಿತಿ, ಚಿತ್ರ: ಪಬ್ಲಿಕ್ ಟಿವಿ)