'ನಿತ್ಯಾನಂದ ಪುರುಷತ್ವ ಪರೀಕ್ಷೆ ತಪ್ಪಿಸಿಕೊಳ್ಳುವಂತಿಲ್ಲ'
ನವದೆಹಲಿ. ಸೆ.3: ಸ್ವಯಂಘೋಷಿತ ದೇವಮಾನ ನಿತ್ಯಾನಂದನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯಬೇಕಿದ್ದ ಪುರುಷತ್ವ ಪರೀಕ್ಷೆಗೆ ಇದ್ದ ಅಡ್ಡಿ ಆತಂಕ ನಿವಾರಣೆಯಾಗಿದೆ. ಪುರುಷತ್ವ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ನಿತ್ಯಾನಂದ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ. ಹೈಕೋರ್ಟ್ ಆದೇಶದಂತೆ ನಿತ್ಯಾನಂದ ಸ್ವಾಮೀಜಿ ಪುರುಷತ್ವ ಪರೀಕ್ಷೆಗೆ ಒಳಪಡಲೇಬೇಕು ಎಂದು ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ರಂಜನ್ ಪ್ರಕಾಶ್ ದೇಸಾಯಿ ಮತ್ತು ರಮಣ್ ಅವರನ್ನೊಳಗೊಂಡ ಪೀಠ ಇಂದು ಆದೇಶ ನೀಡಿದ್ದು, ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಹೈಕೋರ್ಟ್ ನೀಡಿರುವ ಪುರುಷತ್ವ ಪರೀಕ್ಷೆ ಆದೇಶವನ್ನು ವಜಾಗೊಳಿಸಬೇಕು ಎಂದು ನಿತ್ಯಾನಂದ ಪರ ವಕೀಲರು ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿದ್ದರು. ಈ ಕುರಿತಂತೆ ಒಂದು ವಾರದೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಸರ್ಕಾರ ಪ್ರಮಾಣ ಪತ್ರ ಸಲ್ಲಿಸಲು ವಿಫಲವಾಗಿತ್ತು. ಅದರೆ, ಕೊನೆಗೂ ಪ್ರಮಾಣ ಪತ್ರ ಪರಿಗಣಿಸಿ, ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. [ನಿತ್ಯಾನಂದ ಪುರುಷತ್ವ ಪರೀಕ್ಷೆ ನಡೆಯುವುದೇ]

ಆ.6ರಂದು ನಡೆಯಬೇಕಿದ್ದ ಪುರುಷತ್ವ ಪರೀಕ್ಷೆಗೆ ಸುಪ್ರೀಂಕೋರ್ಟ್ ಈ ಹಿಂದೆ ತಡೆಯಾಜ್ಞೆ ನೀಡಿತ್ತು. ಆದರೆ, ರಾಮನಗರ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಆಗಸ್ಟ್ 18ರಂದು ರಾಮನಗರ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ನಿತ್ಯಾನಂದ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅದರಂತೆ ನಿತ್ಯಾನಂದ ವಿಚಾರಣೆಗೆ ಹಾಜರಾಗಿದ್ದರು.
ನಿತ್ಯಾನಂದ ಆಶ್ರಮವಾಸಿಯಾಗಿದ್ದ ಆರತಿ ಹಾಗೂ ಇನ್ನಿತರು ನೀಡಿದ್ದ ದೂರನ್ನು ಆಧಾರವಾಗಿಟ್ಟುಕೊಂಡು ಸಿಐಡಿ ಪೊಲೀಸರು ಸಿಆರ್ ಪಿಸಿ 53(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಹೈಕೋರ್ಟ್ ನ್ಯಾ. ವಿ ಜಗನ್ನಾಥನ್ ಅವರಿರುವ ನ್ಯಾಯಪೀಠ ನೀಡಿರುವ ಆದೇಶದ ಪ್ರಕಾರ ಸಿಐಡಿ ಪೊಲೀಸರು ಈ ಕೂಡಲೇ ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬಹುದಾಗಿದೆ.












Click it and Unblock the Notifications