ಬ್ರಾಹ್ಮಣರ ಅವಹೇಳನ ಪಠ್ಯ ತೆಗೆದು ಹಾಕಲು ಸುರೇಶ್ ಕುಮಾರ್ ಸೂಚನೆ!
ಬೆಂಗಳೂರು, ಡಿ. 17: ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಬಹುದಾದ ಪಠ್ಯಭಾಗವನ್ನು ತಕ್ಷಣದಿಂದಲೇ ಕೈಬಿಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಾಠ-7ರ ಅಂಶಗಳನ್ನು ಉಲ್ಲೇಖಿಸಿ ಈ ಪಠ್ಯಭಾಗ ಬ್ರಾಹ್ಮಣ ಜನಾಂಗದ ಭಾವನೆಗಳನ್ನುಂಟು ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗುರುವಾರವೇ ಈ ಸಂಕೀರ್ಣ ಪಠ್ಯಭಾಗವನ್ನು ತಕ್ಷಣದಿಂದಲೇ ಕೈಬಿಡುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಇಂದೇ ಅಗತ್ಯ ಸುತ್ತೋಲೆ ಹೊರಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಯುಕ್ತರಿಗೆ ಸೂಚಿಸಿ ಟಿಪ್ಪಣಿ ನೀಡಲಾಗಿದೆ.
ಬ್ರಾಹ್ಮಣರು ಭಯ ಹುಟ್ಟಿಸುವವರು, ಕಟುಕರು, ಹಂತಕರು!
ಪರಿಶೀಲನಾ ಸಮಿತಿ
ಶಿಕ್ಷಣ ಇಲಾಖೆಯ 1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ, ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಇಂತಹ ಯಾವುದೇ ಸಂಕೀರ್ಣ ವಿಷಯಗಳ ಕುರಿತು ಪರಿಶೀಲನೆ ನಡೆಸಲು ಸಮಿತಿ ರಚಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೂಚಿಸಿದ್ದಾರೆ.
15 ದಿನಗಳಲ್ಲಿ ವರದಿ
ಶಿಕ್ಷಕರು ಮತ್ತು ವಿಷಯ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಅವರಿಂದ ವರದಿ ಪಡೆದು 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ವರದಿ ಪಡೆದ ನಂತರ ವರದಿಯಲ್ಲಿ ಅಂತಹ ಪಠ್ಯ ಭಾಗಗಳಿದ್ದರೆ ಅದರ ಪರಾಮರ್ಶೆಗೆ ತಜ್ಞ ಸಮಿತಿ ನೇಮಕ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ವಿವರಿಸಿದ್ದಾರೆ.
ಸ್ವಾಮೀಜಿ ದೂರವಾಣಿ ಕರೆ
ಸ್ವತಃ ಮಂತ್ರಾಲಯ ಶ್ರೀಕ್ಷೇತ್ರದ ಸ್ವಾಮೀಜಿ ಅವರು ನನಗೆ ದೂರವಾಣಿ ಕರೆ ಮಾಡಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯಾವುದೇ ಪಠ್ಯಪುಸ್ತಕಗಳ ಪರಿಷ್ಕರಣೆಯಾಗಿಲ್ಲ ಇಲ್ಲವೇ ಹೊಸ ಪಾಠಭಾಗಗಳನ್ನು ಸೇರ್ಪಡೆ ಮಾಡಿಲ್ಲ. ಈ ಹಿಂದೆಯೇ ಆಗಿರುವ ಹಾಗೂ ಪ್ರಸ್ತುತ ಬೆಳಕಿಗೆ ಬಂದಿರುವ ಈ ಪ್ರಮಾದ ಸರಿಪಡಿಸಲು ಇಂದೇ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಸಮಗ್ರ ಪಠ್ಯ ಅವಲೋಕನಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
Recommended Video
ಏನಿದು ಪ್ರಕರಣ?
ಶಿಕ್ಷಣ ಇಲಾಖೆಯ 6ನೇ ತರಗತಿಯ ಸಮಾಜ ವಿಜ್ಞಾನ ವಿಭಾಗ-1ರ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಕುರಿತು ಅವಹೇಳನಕಾರಿ ಅಂಶಗಳನ್ನು ಮುದ್ರಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆರೋಪಿಸಿತ್ತು. ಪುರೋಹಿತರು ಬಡವರನ್ನು ಸುಲಿಗೆ ಮಾಡುವವರು, ಜನರಲ್ಲಿ ಭಯ ಹುಟ್ಟಿಸುವವರು, ಹಂತಕರು ಮತ್ತು ಕಟುಕರು ಎಂಬಂತೆ ಪಠ್ಯ ಪುಸ್ತಕದಲ್ಲಿ ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು.