ಕಾರ್ಕಳದಲ್ಲಿ ವಿಶ್ವ ಜಿ.ಎಸ್.ಬಿ ಸಂಗಮದ ಸುಧಾ ಸೇವಾ ಸಮ್ಮೇಳನ
ಕಾಶೀ ಮಠ ಸಂಸ್ಥಾನದ ವೃಂದಾವನಸ್ಥ ಸುಧೀಂದ್ರ ತೀರ್ಥ ಸ್ವಾಮೀಜಿಯವರ 91ನೇ ಜಯಂತಿ, ನವತಿ ಪೂರ್ತಿ ಸಂದರ್ಭದಲ್ಲಿ ಶ್ರೀಗಳವರ ಜನ್ಮ ನಕ್ಷತ್ರ ಸ್ವಾತಿ ನಕ್ಷತ್ರದ ಶುಭ ದಿನದಂದು 'ಸುಧಾ ಸೇವಾ ಸಮ್ಮೇಳನ' ಎಂಬ ವಿಶ್ವ ಜಿ.ಎಸ್.ಬಿ. ಸಮ್ಮೇಳನವು ಇದೇ ಬರುವ ಏಪ್ರಿಲ್ 22 ಮತ್ತು 23ರಂದು ಪಡು ತಿರುಪತಿ ಖ್ಯಾತಿಯ ಉಡುಪಿ ಜಿಲ್ಲೆ, ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದ ಶೇಷತೀರ್ಥ ಕೆರೆಯ ಬಳಿಯ ಸುಧೀಂದ್ರ ನಗರದಲ್ಲಿ ನಡೆಯಲಿದೆ.
ಶ್ರೇಷ್ಠ ಪಾರಂಪರಿಕ ಹಿನ್ನೆಲೆ ಮತ್ತು ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಜನತೆ ಸಂಘಟಿತರಾಗಿ, ಸ್ವಾವಲಂಬಿಗಳಾಗಿ, ಸಮಾಜದಲ್ಲಿ ಶ್ರೇಷ್ಠ ಸಾಧನೆಯಿಂದ ಗುರುತಿಸಿಕೊಳ್ಳುವಂತಾಗಬೇಕು ಎನ್ನುವುದು ಕಾಶೀಮಠ ಸಂಸ್ಥಾನದ ಸುಧೀಂಧ್ರ ತೀರ್ಥ ಸ್ವಾಮೀಜಿಯವರ ಆಶಯವಾಗಿತ್ತು. (ಪ್ರಾರಬ್ಧ ಅನುಭವಿಸಲು ಜನ್ಮ ದೊರೆತಿದೆ ಅನ್ನಬೇಡಿ)
ಈ ನಿಟ್ಟಿನಲ್ಲಿ ಅವರ ಆಶೀರ್ವಾದದ ಬಲದಲ್ಲಿ ಮುನ್ನಡೆದ ಸಮಾಜವನ್ನು ಸಂಘಟಿಸಿ ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂಬಂತೆ ಶ್ರೀಗಳವರ ಉತ್ತರಾಧಿಕಾರಿಯಾಗಿರುವ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸುಧಾ ಸೇವಾ ಪ್ರತಿಷ್ಠಾನ ರೂಪಿಸಲಾಗಿತ್ತು.
ಇದೀಗ ಸುಧಾ ಸೇವಾ ಸಮ್ಮೇಳ ಎನ್ನುವ ವಿಶ್ವ ಜಿ.ಎಸ್.ಬಿ ಸಮ್ಮೇಳನದ ಮೂಲಕ ಸಮಾಜದಲ್ಲಿ ಜಾಗತಿಕ ಮಟ್ಟದಲ್ಲಿ ಹಂಚಿ ಹೋಗಿರುವ ಜಿ.ಎಸ್.ಬಿ ಸಮಾಜ ಬಾಂಧವರು ಮತ್ತು ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಸಂಘಟಿತರಾಗಿ ಮುನ್ನಡೆಯಲು ಅವಕಾಶ ಕಲ್ಪಿಸಲಾಗಿದೆ. ಸುಧೀಂಧ್ರ ತೀರ್ಥ ಶ್ರೀಗಳ ಆಶಯವನ್ನು ನನಸಾಗಿಸಬೇಕೆಂಬ ಸಂಕಲ್ಪದಿಂದ ಅವರ ನವತಿ ಪೂರ್ಣ ಜಯಂತಿಯ ಸದವಸರದಲ್ಲೇ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಮಸ್ತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಹೃದಯ ಮತ್ತು ಮನಸ್ಸುಗಳ ಸಂಗಮದ ಆಶಯದೊಂದಿಗೆ ನಡೆಯುವ ಸುಧಾ ಸೇವಾ ವಿಶ್ವ ಸಮ್ಮೇಳನವನ್ನು ಇನ್ಫೋಸಿಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಯು.ರಾಮದಾಸ್ ಕಾಮತ್ ಏ. 22ರಂದು ಸಂಜೆ 4ಗಂಟೆಗೆ ಉದ್ಘಾಟಿಸಲಿದ್ದಾರೆ.
ಮುಂಬೈ ಜ್ಯೋತಿ ಲ್ಯಾಬೋರೇಟರೀಸ್ನ ಜೆ.ಎಂ.ಡಿ ಉಲ್ಲಾಸ್ ಕಾಮತ್ ಅವರು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಕಾರ್ಕಳ ವೆಂಕಟರಮಣ ದೇವಸ್ಥಾನದ ಒಂದನೇ ಮೊಕ್ತೇಸರ ಜಯರಾಮ ಪ್ರಭು ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಂಧ್ಯಾ ಪೈ ಪಾಲ್ಗೊಳ್ಳಲಿದ್ದಾರೆ. (ಕಾಶೀ ಮಠದ ನೂತನ ಪೀಠಾಧಿಪತಿ)
ಅಂದು ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏ.23ರಂದು ಸಮ್ಮೇಳನದ ಪ್ರಧಾನ ಪರಿಕಲ್ಪನೆಗಳ ಕುರಿತು ವಿವಿಧ ಆಯಾಮಗಳಲ್ಲಿ ಚಿಂತನ, ವಿಚಾರ ಗೋಷ್ಠಿ, ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 23ರಂದು ಸಂಜೆ 6ರಿಂದ ನಡೆಯಲಿರುವ ಸಮಾರೋಪ ಸಮಾಂಭದಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಮಾಜ ಬಾಂಧವರಿಗಾಗಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಪಡು ತಿರುಪತಿಯೆಂದು ಖ್ಯಾತಿವೆತ್ತ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ ಎರಡು ದಿನಗಳ ವಿಶ್ವ ಜಿ.ಎಸ್.ಬಿ ಸಮ್ಮೇಳನ ಸುಧಾ ಸೇವಾ ಸಮ್ಮೇಳನದ ಸಂಭ್ರಮ ಎದ್ದು ಕಾಣುತ್ತಿದೆ. ಸಮ್ಮೇಳನದ ಯಶಸ್ಸಿಗೆ ಭರದ ಸಿದ್ಧತೆ ನಡೆದಿದೆ.
ಇಲ್ಲಿನ ದೇವಾಲಯವು ಸಂಪೂರ್ಣ ನವೀಕರಣಗೊಂಡಿದ್ದು ಮೇ1ರಂದು ಪುನಃಪ್ರತಿಷ್ಠಾ ಮಹೋತ್ಸವ ಸಂಬಂಧೀ ಕಾರ್ಯ ಚಟುವಟಿಕೆಗಳೂ ಇಲ್ಲಿ ನಡೆದಿವೆ. ಇಲ್ಲಿನ ಕಾಶೀ ಮಠವನ್ನು ಆಕರ್ಷಕವಾಗಿ ನವೀಕರಣಗೊಳಿಸಲಾಗಿದ್ದು ಕಾಶೀ ಮಠಾಧೀಶರಾಗಿ ಪೀಠಾರೋಹಣಗೈದಿರುವ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ವಸಂತೋತ್ಸವ ಮೊಕ್ಕಾಂ ಕೂಡಾ ಕಾರ್ಕಳ ಕಾಶೀ ಮಠದಲ್ಲಿ ನಡೆದಿದೆ.
ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಶಿಲಾಮಯ ವೃಂದಾವನ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಸಮಾಧಿಯ ಮೇಲ್ಭಾಗದಲ್ಲಿ ಪೂಜೆಗೊಳ್ಳಲಿರುವ ಮುಖ್ಯಪ್ರಾಣ ದೇವರ ವಿಗ್ರಹವನ್ನು ಕಾರ್ಕಳದಲ್ಲಿ ಕೆತ್ತಲಾಗುತ್ತಿದೆ.