ಮೋದಿ ಹೊಗಳಿದ ಕೊಪ್ಪಳದ ಮಲ್ಲಮ್ಮ ಯಾರು?
ಕೊಪ್ಪಳ, ಜುಲೈ 28 : ಶೌಚಾಲಯಕ್ಕಾಗಿ ಉಪವಾಸ ಮಾಡಿ ರಾಜ್ಯದ ಗಮನ ಸೆಳೆದಿದ್ದ ಮಲ್ಲಮ್ಮಳ ಸತ್ಯಾಗ್ರಹಕ್ಕೆ ಫಲ ಸಿಕ್ಕಿದೆ. ಮಲ್ಲಮ್ಮ ಬೇಡಿಕೆಯಂತೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಗಂಗಾವತಿ ತಾಲೂಕಿನ ಡಣಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಓ ಆರ್. ರಾಮಚಂದ್ರನ್ ಅವರು, 10 ನೇ ತರಗತಿ ವಿದ್ಯಾರ್ಥಿನಿ ಮಲ್ಲಮ್ಮಳ ಮನೆಗೆ ಭೇಟಿ ನೀಡಿ, ಪೂರ್ಣಗೊಂಡ ಶೌಚಾಲಯವನ್ನು ವೀಕ್ಷಿಸಿದರು.[ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕಾಲಿಗೆ ಬಿದ್ದ ಗ್ರಾ.ಪಂ ಅಧ್ಯಕ್ಷ]
'ಸತ್ಯಕ್ಕಾಗಿ ಹೋರಾಡುವವರು ಸತ್ಯಾಗ್ರಹಿ. ಸ್ವಚ್ಛತೆಗಾಗಿ ಹೋರಾಡುವವರು ಸ್ವಚ್ಛಾಗ್ರಹಿ. ಈ ದಿಸೆಯಲ್ಲಿ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ನಿಜಕ್ಕೂ ಸ್ವಚ್ಛಾಗ್ರಹಿ' ಎಂಬುದಾಗಿ ಮಲ್ಲಮ್ಮಳನ್ನು ಪ್ರಶಂಸಿದರು. 'ಪ್ರತಿ ಗ್ರಾಮದಲ್ಲೂ ಮಲ್ಲಮ್ಮನಂತೆ ಎಲ್ಲರೂ ತಮ್ಮ ಪಾಲಕರಿಗೆ ಶೌಚಾಲಯಕ್ಕಾಗಿ ಒತ್ತಾಯಿಸುವಂತಾಗಬೇಕು' ಎಂದು ಹೇಳಿದರು.[ಶೌಚಾಲಯಕ್ಕಾಗಿ ಉಪವಾಸ ಕುಳಿತ ವಿದ್ಯಾರ್ಥಿನಿ ಮಲ್ಲಮ್ಮ!]
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಮಲ್ಲಮ್ಮಳ ಮನೆಗೆ ಭೇಟಿ ನೀಡಿದ್ದರು....[ಮೈಸೂರಲ್ಲಿ ಶತಾಯುಷಿ ಬೋರಜ್ಜಿಯ ಶೌಚಾಲಯ ಅಭಿಯಾನ]
ಉಪವಾಸ ಕೂತಿದ್ದ ಮಲ್ಲಮ್ಮ
ಮನೆಯಲ್ಲಿ ಶೌಚಾಲಯ ಕಟ್ಟಿಸಲು ನಿರಾಕರಿಸಿದ್ದಕ್ಕೆ ಮಲ್ಲಮ್ಮ ಉಪವಾಸ ಕುಳಿತಿದ್ದಳು. ಜುಲೈ 14ರಂದು ಮಲ್ಲಮ್ಮ ಭೇಟಿ ಮಾಡಿದ್ದ ಜಿಲ್ಲಾಪಂಚಾಯಿತಿ ಸಿಇಓ ಅವರು ಒಂದು ವಾರದೊಳಗಾಗಿ ಮನೆಯಲ್ಲಿ ಶೌಚಾಲಯ ನಿರ್ಮಿಸಲು ನೆರವು ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಬಡತನ ಅಡ್ಡಿಯಾಗಿತ್ತು
ಮಲ್ಲಮ್ಮ ಅವರ ತಾಯಿ ಸಣ್ಣನಿಂಗಮ್ಮ ಅವರಿಗೆ ಮನೆಯಲ್ಲಿ ಶೌಚಾಲಯ ನಿರ್ಮಿಸಲು ಬಡತನ ಅಡ್ಡಿಯಾಗಿತ್ತು. ಸ್ಥಳದ ಅಭಾವವೂ ಕಾರಣವಾಗಿತ್ತು. ಆದರೆ, ಮಲ್ಲಮ್ಮ ಶೌಚಾಲಯ ಕಟ್ಟಿಸಲು ಒಪ್ಪುವವರೆಗೂ ಉಪವಾಸ ಮಾಡುವುದಾಗಿ ತಾಯಿಗೆ ಹೇಳಿದ್ದಳು.
ನೆರವು ನೀಡುವ ಭರವಸೆ ಕೊಟ್ಟಿದ್ದರು
ಜಿಲ್ಲಾ ಪಂಚಾಯಿತಿ ಸಿಇಓ ಆರ್. ರಾಮಚಂದ್ರನ್ ಅವರು, ಮಲ್ಲಮ್ಮಳನ್ನು ಭೇಟಿಯಾಗಿ ಮಾತನಾಡಿದ್ದರು. ಸ್ಥಳದ ಅಭಾವಕ್ಕೂ ಕೂಡ ಅಲ್ಲಿಯೇ ಪರಿಹಾರವನ್ನು ಸೂಚಿಸಿ, ಒಂದು ವಾರದೊಳಗಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಪ್ರೋತ್ಸಾಹ ಧನ ದೊರೆಯುತ್ತದೆ
ಶೌಚಾಲಯ ಕಟ್ಟಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರ 15 ಸಾವಿರ ರೂ.ಗಳ ಪ್ರೋತ್ಸಾಹಧನ ದೊರೆಯಲಿದೆ. ಡಣಾಪುರ ಗ್ರಾಮ ಪಂಚಾಯತಿಯಲ್ಲಿ ಒಟ್ಟು 1,497 ಕುಟುಂಬಗಳಿವೆ. ಈವರೆಗೂ 759 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದು, ಅದನ್ನು ಬಳಕೆ ಮಾಡುತ್ತಿದ್ದಾರೆ. ಉಳಿದ 738 ಕುಟುಂಬಗಳು ಶೀಘ್ರ ನಿರ್ಮಿಸಿಕೊಳ್ಳುವುದಾಗಿ ಹೇಳಿವೆ.
ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ
ಕೊಪ್ಪಳ ಜಿಲ್ಲೆಯನ್ನು ಈ ವರ್ಷಾಂತ್ಯದೊಳಗೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸುವ ಗುರಿ ಇದೆ. ಆದ್ದರಿಂದ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ಕರಟೂರಿ ಅವರು ಬಯಲು ಬಹಿರ್ದೆಸೆಗೆ ಹೋಗುವ ಸಾರ್ವಜನಿಕರನ್ನು ನಿಲ್ಲಿಸಿ, ಅವರ ಕಾಲಿಗೆ ನಮಸ್ಕರಿಸಿ, ದಯವಿಟ್ಟು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡು, ಅದನ್ನು ಬಳಕೆ ಮಾಡುವಂತೆ ಜಾಗೃತಿ ಮೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ.