ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವು ಬದಲಾವಣೆ: ಕೆಲವೆಡೆ ಚುನಾವಣೆ ಇಲ್ಲ
ಬೆಂಗಳೂರು, ಡಿಸೆಂಬರ್ 5: ರಾಜ್ಯದ ಒಟ್ಟು ಗ್ರಾಮ ಪಂಚಾಯಿತಿಗಳ ಪೈಕಿ ಕೆಲವೊಂದನ್ನು ಹೊರತುಪಡಿಸಿ 5,762 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆ ಮಾಡಿದ್ದ ಚುನಾವಣಾ ಆಯೋಗ, ಈಗ ಮತ್ತಷ್ಟು ಗ್ರಾಮ ಪಂಚಾಯಿತಿಗಳನ್ನು ಚುನಾವಣಾ ಪ್ರಕ್ರಿಯೆಯಿಂದ ಕೈಬಿಟ್ಟಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಶನಿವಾರ ಹೊಸ ಆದೇಶ ಹೊರಡಿಸಿದೆ.
ರಾಜ್ಯದ 5,976 ಗ್ರಾಮ ಪಂಚಾಯಿತಿಗಳ ಪೈಕಿ 5,762 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆ ಮಾಡಲಾಗಿತ್ತು. ಡಿಸೆಂಬರ್ 22 ಮತ್ತು ಡಿಸೆಂಬರ್ 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಈಗ ಹೊಸ ಸೂಚನೆಯಲ್ಲಿ ಚುನಾವಣಾ ಆಯೋಗ ವಿವಿಧ ಜಿಲ್ಲೆಗಳ 27 ಗ್ರಾಮ ಪಂಚಾಯಿತಿಗಳನ್ನು ಚುನಾವಣಾ ಪ್ರಕ್ರಿಯೆಗಳಿಂದ ಕೈಬಿಟ್ಟಿದೆ.
ಪ್ರಸ್ತುತ ಚುನಾವಣೆ ನಡೆಸಲಾಗುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ಕೆಲವು ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಲು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಹೀಗಾಗಿ 26 ಗ್ರಾಮ ಪಂಚಾಯಿತಿಗಳನ್ನು ಚುನಾವಣೆಯಿಂದ ಕೈಬಿಡಲಾಗಿದೆ.
ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ಹೊಸಾಡು ಗ್ರಾಮ ಪಂಚಾಯಿತಿಗೆ ಸೇವಾಪುರ ಗ್ರಾಮವನ್ನು ಸೇರ್ಪಡೆಗೊಳಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಅದು ವಿಚಾರಣೆ ಹಂತದಲ್ಲಿರುವುದರಿಂದ ಹೊಸಾಡುದಲ್ಲಿ ಕೂಡ ಚುನಾವಣೆ ನಡೆಯುತ್ತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಮುಂದೆ ಓದಿ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ
ಬೆಂಗಳೂರು ನಗರ: ಸೋಮಶೆಟ್ಟಿಹಳ್ಳಿ, ಚಿಕ್ಕಬಾಣಾವರ, ಕಗ್ಗಲೀಪುರ, ಹುಣಸಮಾರನಹಳ್ಳಿ, ಸೊಣ್ಣಪ್ಪನಹಳ್ಳಿ ಗ್ರಾಮಗಳು ಭಾಗಶಃ ಅಥವಾ ಪೂರ್ಣ ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಯಾಗುತ್ತಿವೆ.
ಬೆಂಗಳೂರು ಗ್ರಾಮಾಂತರ: ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ (ದೊಡ್ಡಬಳ್ಳಾಪುರ ತಾಲ್ಲೂಕು).

ಬೆಳಗಾವಿ, ರಾಯಚೂರು, ದಕ್ಷಿಣ ಕನ್ನಡ
ಬೆಳಗಾವಿ: ಯರಗಟ್ಟಿ, ಕಾಗವಾಡ, ಮಚ್ಚೆ, ಪೀರವನಾಡಿ.
ರಾಯಚೂರು: ಜಾಲಹಳ್ಳಿ, ಚಿಂಚೋಡಿ, ಕರಡಿಗುಡ್ಡ,
ದಕ್ಷಿಣ ಕನ್ನಡ: ಕಿನ್ನಗೋಳಿ, ಮನ್ನಬೆಟ್ಟು, ಕಟೀಲು (ಕೊಂಡೆಮೂಲ)

ದಾವಣಗೆರೆ, ಉ.ಕ., ಕೋಲಾರ, ಉಡುಪಿ
ದಾವಣಗೆರೆ: ಎಚ್. ಕಡದಕಟ್ಟೆ, ಗುತ್ತೂರು.
ಉತ್ತರ ಕನ್ನಡ: ಮಂಕಿ (ಗುಳದಕೇರಿ), ಮಂಕಿ-ಎ (ಹಳೆಮರ), ಮಂಕಿ-ಬಿ (ಅನಂತರವಾಡಿ), ಮಂಕಿ-ಸಿ (ಚಿತ್ತಾರ).
ಕೋಲಾರ: ವೇಮಗಲ್, ಕುರುಗಲ್, ಶೆಟ್ಟಿಹಳ್ಳಿ, ಚೌಡದೇವನಹಳ್ಳಿ.
ಉಡುಪಿ: ಹೊಸಾಡು.

ಚಿಕ್ಕಮಗಳೂರಲ್ಲಿ ಒಂದೇ ಹಂತ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಚುನಾವಣಾ ಆಯೋಗ ಆದೇಶಿಸಿದೆ. ಡಿಸೆಂಬರ್ 22 ರಂದೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 27 ರಿಂದ 29 ರವರೆಗೆ ದತ್ತಜಯಂತಿ ನಡೆಯಲಿದೆ. ಹೀಗಾಗಿ ಡಿ. 27ರಂದು ನಡೆಯುವ ಚುನಾವಣೆಗೆ ಭದ್ರತೆ ನೀಡಲು ಕಷ್ಟವಾಗುತ್ತದೆ ಎಂದು ಜಿಲ್ಲಾಧಿಕಾರಿ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಒಂದೇ ಹಂತದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಅಯೋಗದ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತಾ ಆದೇಶ ಹೊರಡಿಸಿದ್ದಾರೆ.












Click it and Unblock the Notifications