ತನ್ನ ಮಗಳನ್ನೇ ಗರ್ಭಿಣಿ ಮಾಡಿದ್ದ ಅಪ್ಪನ ಬಂಧನ
ಬೆಂಗಳೂರು, ಜ.17: ಜನ್ಮಕೊಟ್ಟ ಮಗಳ ಮೇಲೆಯೇ ತಂದೆಯೊಬ್ಬ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯಾಗಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಕಳೆದ ಎರಡೂವರೆ ತಿಂಗಳ ಹಿಂದೆಯೇ ಕುಂಬಗಳಗೂಡು ಬಳಿ ಜರುಗಿದ್ದು, ಗುರುವಾರ ಬಯಲಾಗಿತ್ತು. 17 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯಾಗಿಸಿದ 55 ವರ್ಷದ ತಂದೆ ಮುತ್ತುರಾಜ್ ನನ್ನು ಕುಂಬಳಗೋಡು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪ್ರಥಮ ಪಿಯುಸಿ ಓದುತ್ತಿರುವ ಮಗಳಿಗೆ ಮೊನ್ನೆ ಜ್ವರ ಬಂದಿದ್ದು, ವಾಂತಿ ಮಾಡಿಕೊಂಡಿದ್ದಳು. ಆಸ್ಪತ್ರೆಗೆ ಪರೀಕ್ಷೆ ಕರೆದುಕೊಂಡು ಹೋದಾಗ ಮಗಳು ಗರ್ಭಿಣಿ ಎಂದು ತಿಳಿದು ತಾಯಿ ಕಂಗಾಲಾದರು. ವಿದ್ಯಾರ್ಥಿನಿಯ ತಾಯಿ ಗಾರ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದು, ಅಣ್ಣ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ತಮ್ಮ ವ್ಯಾಸಂಗ ಮಾಡುತ್ತಿದ್ದಾನೆ. ಈ ನೀಚ ಕೃತ್ಯ ಎಸಗಿದ್ದು ತಂದೆಯೇ ಎಂದು ಮಗಳು ಹೇಳಿದಾಗ ತಾಯಿಗೆ ದಿಗ್ಭ್ರಮೆಯಾಗಿದೆ.
ವಿಚಾರವನ್ನು ತಾಯಿ ಹಾಗೂ ಅಣ್ಣನಿಗೆ ತಿಳಿಸಿದರೆ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ವಿದ್ಯಾರ್ಥಿನಿ ತಂದೆಯ ಕೃತ್ಯವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ನಂತರದ ದಿನಗಳಲ್ಲೂ ಒಬ್ಬಳೇ ಮನೆಯಲ್ಲಿ ಇರುವ ಸಮಯಕ್ಕೆ ಕುಡಿದು ಬರುತ್ತಿದ್ದ ತಂದೆ ಅತ್ಯಾಚಾರ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಬಾಲಕಿಯ ತಾಯಿಯೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಸದ್ಯ ಆರೋಪಿ ಮುತ್ತುರಾಜ್'ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮೋಟಾರ್ ಸೈಕಲ್ ಕಳುವು ಪ್ರಕರಣ
ಕಡೂರು ಪೊಲೀಸ್ ಠಾಣೆ ಮೊ.ಸಂ.13/2014 - ಕಲಂ: 379 ಐಪಿಸಿ - ದಿನಾಂಕ ಪಿರ್ಯಾದುದಾರರು ಸುರೇಶ್ ಮತ್ತು ಅವರ ಇತರೆ ಸ್ನೇಹಿತರು ಕಡೂರು ನಲ್ಲಿ ನಡೆಯುತ್ತಿದ್ದ ಶ್ರೀ.ಗುರುಸಿದ್ದರಾಮೇಶ್ವರ ಸ್ವಾಮಿಯ ಜಯಂತೋತ್ಸವವನ್ನು ನೋಡಲೆಂದು ತಮ್ಮ ಊರಿನಿಂದ ನಂ ಕೆಎ-46-ಹೆಚ್-1964 ಬಜಾಜ್ ಡಿಸ್ಕವರ್ ಬೈಕ್ ನಲ್ಲಿ ಕಡೂರಿಗೆ ಬಂದು ಬೈಕ್ ನ್ನು ಎ.ಪಿ.ಎಂ.ಸಿ. ಯಾರ್ಡ್ನ ಎರಡನೇ ಗೇಟ್ ಹತ್ತಿರ ನಿಲ್ಲಿಸಿ, ಜಯಂತೋತ್ಸವವನ್ನು ನೋಡಿ, ಊಟ ಮಾಡಿಕೊಂಡು ವಾಪಸ್ ಊರಿಗೆ ಹೋಗಲೆಂದು ಮಧ್ಯಾಹ್ನ ಬಂದು ನೋಡಲಾಗಿ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇರಲಿಲ್ಲ. ಸದರಿ ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ
ಪೊಲೀಸರ ಮೇಲೆ ಹಲ್ಲೆ
ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಳುಕು, ಹರಿಪುರಗೇಟ್ ಬಳಿ ಸಂಭವಿಸಿರುತ್ತದೆ.
ಮಾಲೂರು -ಟೇಕಲ್ ರಸ್ತೆಯಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನಕ್ಕೆ ಅಪಘಾತವಾಗಿದ್ದು. ಈ ಅಪಘಾತದ ಹಿನ್ನೆಲೆಯಲ್ಲಿ ಹರಿಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸುಮಾರು 6-20 ಜನರು ಅಕ್ರಮ ಗುಂಪುಕಟ್ಟಿಕೊಂಡು ರಸ್ತೆ ನಡೆಸುತ್ತಿದ್ದು. ಈ ವಿಷಯವನ್ನು ತಿಳಿದ ಮಾಲೂರು ಸಿ.ಪಿ.ಐ ಶಿವಕುಮಾರ್ ಮತ್ತು ಸಿಬ್ಬಂದಿಯವರು ಭೇಟಿ ನೀಡಿ, ರಸ್ತೆ ಮಾರ್ಗದ ತಡೆಯನ್ನು ತೆರವುಗೊಳಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು. ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಸವಾರರ ಮೇಲೆ ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ.
ಶಿಕಾರಿಪುರ ಗ್ರಾಮಾಂತರ ಠಾಣೆ
ರಸ್ತೆ ಅಪಘಾತ ಸಾವು ಪ್ರಕರಣ: ತೋಟಪ್ಪ ಬಿನ್ ರುದ್ರಪ್ಪಗೌಡ ಇವರು ಕೆಎ 15 ಇ-2859ರ ಬೈಕ್ನಲ್ಲಿ ಕಲ್ಮನೆ-ಚೌಡಿಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿರುವಾಗ ಎದುರಗಡೆಯಿಂದ ಬಂದ ಕೆಎ 15 ಕ್ಯೂ-3995ರ ಬೈಕ್ ಚಾಲಕ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಡಿಕ್ಕಿ ಹೊಡೆಸಿ, ಅಪಘಾತಪಡಿಸಿದ್ದು, ಸ್ಥಳದಲ್ಲಿಯೇ ತೋಟಪ್ಪ ಇವರು ಮೃತಪಟ್ಟಿರುತ್ತಾರೆ.
ಕಾರ್ಕಳ: ಕಳವು ಪ್ರಕರಣ
ನಿತೇಶ್ ಆರಿಗ (35) ತಂದೆ ತ್ಯಾಗರಾಜ ಆರಿಗ ವಾಸ ಹಿನಪಾಡಿ ಮನೆ, ಬೋರ್ಕಟ್ಟೆ ಪೋಸ್ಟ್, ಮಿಯಾರು ಗ್ರಾಮ, ಕಾರ್ಕಳ ತಾಲೂಕು ಎಂಬವರು ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ನಲ್ಲೂರು ಕ್ರಾಸ್ ಬಳಿ ನೂತನ ಮನೆಯನ್ನು ನಿರ್ಮಾಣ ಮಾಡಿಸುತ್ತಿದ್ದು ಈ ಬಗ್ಗೆ ಕಾಮಗಾರಿ ನಡೆಸುವರೇ ಕಬ್ಬಿಣ, ಸಿಮೆಂಟ್ ಇತ್ಯಾದಿಗಳನ್ನು ಸದ್ರಿ ಕಂಪೌಂಡ್ ಒಳಗಡೆ ಶೇಖರಿಸಿಟ್ಟಿದ್ದು, ದಿನಾಂಕ 16/01/2014 ರಂದು ಸಂಜೆ 18:00 ಗಂಟೆಗೆ ನೋಡಿದಾಗ ನಿರ್ಮಾಣ ಹಂತದಲ್ಲಿರುವ ಮನೆಯ ಕಂಪೌಂಡ್ ಒಳಗಡೆ ಇಟ್ಟಿದ್ದ ಸುಮಾರು 600 ಕೆ.ಜಿ ಕಬ್ಬಿಣದ ರಾಡ್ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದ್ರಿ ಕಬ್ಬಿಣದ ರಾಡ್ಗಳ ಮೌಲ್ಯ ಸುಮಾರು 28,800/- ಆಗಿರುತ್ತದೆ ಎಂಬುದಾಗಿ ನಿತೇಶ್ ಆರಿಗರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2014 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.