ಭಗವದ್ಗೀತೆ ಬಗ್ಗೆ ಭಾನುವಾರ ಮೈಸೂರಿನಲ್ಲಿ ಬಹಿರಂಗ ಚರ್ಚೆ
ಗದಗ, ಜೂ 25 : ಹಿಂದೂ ಧರ್ಮ ಮತ್ತು ನಂಬಿಕೆಗಳ ಬಗ್ಗೆ ಮನಬಂದಂತೆ ಮಾತನಾಡಿ, ಭಗವದ್ಗೀತೆಯನ್ನು ಸುಡಲೆತ್ನಿಸಿದ ಪ್ರೊ. ಕೆ ಎಸ್ ಭಗವಾನ್ ಮತ್ತು ಉಡುಪಿ ಪೇಜಾವರ ಶ್ರೀಗಳ ನಡುವಿನ ಬಹಿರಂಗ ಚರ್ಚೆಗೆ ಆಖಾಡ ಸಿದ್ದವಾಗಿದೆ.
ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಕುರಿತು ಭಗವಾನ್ ಅವರ ಜೊತೆ ಇದೇ ಭಾನುವಾರ (ಜೂ 28) ಬೆಳಗ್ಗೆ ಹನ್ನೊಂದು ಗಂಟೆಗೆ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಭವನದಲ್ಲಿ ಬಹಿರಂಗ ಚರ್ಚೆ ನಡೆಸಲಾಗುವುದು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ತಿಳಿಸಿದ್ದಾರೆ.
ಭಗವದ್ಗೀತೆ ಮತ್ತು ರಾಮಾಯಣದ ಪರವಾಗಿ ಪೇಜಾವರ ಶ್ರೀಗಳು, ಮೈಸೂರು ಸಂಸದ ಪ್ರತಾಪ್ ಸಿಂಹ, ಪ್ರಹ್ಲಾದಾಚಾರ್ಯ, ಎಂಎಲ್ಸಿ ಗೋ ಮಧುಸೂದನ್, ಹರಿದಾಸ ಭಟ್, ಚಕ್ರವರ್ತಿ ಸೂಲಿಬೆಲೆ, ಆನಂದ ತೀರ್ಥ ಮಾತನಾಡಲಿದ್ದಾರೆ.
ಹಾಗೆಯೇ, ಗಿತೆಯ ವಿರುದ್ಧವಾಗಿ ಪ್ರೊ. ಕೆ.ಎಸ್. ಭಗವಾನ್, ಪ್ರೊ. ಅರವಿಂದ ಮಾಲಗತ್ತಿ, ಡಾ.ಬಂಜಗೆರೆ ಜಯಪ್ರಕಾಶ್, ಡಾ. ಹಿ.ಶಿ.ರಾಮಚಂದ್ರೇಗೌಡ, ಬಿ.ಟಿ. ಲಲಿತಾನಾಯಕ್, ಇಂದೂಧರ ಹೊನ್ನಾಪುರ ತಮ್ಮ ನಿಲುವನ್ನು ಪ್ರತಿಪಾದಿಸಲಿದ್ದಾರೆ.
ನಗರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶ್ರೀಗಳು, ಭಗವಾನ್ ಅವರು ಹಿಂದೂ ದೇವಾನು ದೇವತೆಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಹಾಗಾಗಿ, ಮೈಸೂರಿನಲ್ಲಿ ಚರ್ಚೆ ನಡೆಯಲಿದ್ದು, ಹಲವು ವಿಚಾರವಾದಿಗಳು ಇದರಲ್ಲಿ ಭಾಗವಹಿಸಲಿದ್ದಾರೆಂದು ಶ್ರೀಗಳು ಹೇಳಿದ್ದಾರೆ. (ಬುದ್ದಿಜೀವಿಗಳಿಗೆ ಪೇಜಾವರ ಶ್ರೀಗಳ ಚಾಲೆಂಜ್)
ಈ ಹಿಂದೆ ಮೈಸೂರಿನ ಮಾನಸ ಗಂಗೋತ್ರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ. ಭಗವಾನ್ ಭಗವದ್ಗೀತೆಯನ್ನು ಟೀಕಿಸಿ ಪುಸ್ತಕವನ್ನು ಸುಡಲು ಯತ್ನಿಸಿದ್ದರು.
ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತ ಎದುರಿಸಿದ್ದ ಭಗವಾನ್ ಅವರಿಗೆ, ಧೈರ್ಯವಿದ್ದರೆ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಪೇಜಾವರ ಶ್ರೀಗಳು ಸವಾಲೆಸೆದಿದ್ದರು.
ಉಡುಪಿ ಶ್ರೀಕೃಷ್ಣ ಮಠದಿಂದ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶ್ರೀಗಳು ಹೇಳಿದ್ದಾರೆ.