ಎಸ್ಟಿ ಮೀಸಲಾತಿ ಹೆಚ್ಚಳ ; ಸಮಿತಿ ರಚಿಸಿದ ಸರ್ಕಾರ
ಬೆಂಗಳೂರು, ಜುಲೈ 22 : ಪರಿಶಿಷ್ಟ ಪಂಗಡದವರಿಗೆ ಪ್ರಸ್ತುತ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ವರದಿ ನೀಡಲು ಸಮಿತಿ ರಚನೆ ಮಾಡಲಾಗಿದೆ. ಎರಡು ತಿಂಗಳಿನಲ್ಲಿ ವರದಿ ಕೊಡಲು ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರ ಸೋಮವಾರ ವಿಚಾರಣಾ ಆಯೋಗ ಕಾಯ್ದೆ 1952ರ ಅನ್ವಯ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್. ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ.
ಪರಿಶಿಷ್ಟ ಜಾತಿಗಳಿಗೆ ಈಗಿರುವ ಶೇ.15ರ ಮೀಸಲಾತಿ ಅವರ ಜನಸಂಖ್ಯೆಗೆ ಹೋಲಿಸಿದರೆ ಪ್ರತಿಶತ ಎರಡರಷ್ಟು ಕಡಿಮೆ ಇರುತ್ತದೆ. ಅದೇ ರೀತಿ ಪರಿಶಿಷ್ಟ ಪಂಗಡದವರಿಗೆ ಈಗಿರುವ 3 ಪ್ರತಿಶತ ಮೀಸಲಾತಿ ಅವರ ಜನಸಂಖ್ಯೆಗೆ ಹೋಲಿಸಿದರೆ ಪ್ರತಿಶತ 4ರಷ್ಟು ಕಡಿಮೆ ಇರುತ್ತದೆ.

ಆದ್ದರಿಂದ ಪ.ಜಾತಿ ಮತ್ತು ಪಂಗಡದವರು ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು. ಆದ್ದರಿಂದ, ಈ ಕುರಿತು ವರದಿ ನೀಡಲು ಸಮಿತಿಯನ್ನು ರಚನೆ ಮಾಡಲಾಗಿದೆ.
ಪರಿಶಿಷ್ಟ ಪಂಗಡದಲ್ಲಿರುವ ನಾಯಕ ಸಮುದಾಯದ ಜನಪ್ರತಿನಿಧಿಗಳು ಮತ್ತು ಕರ್ನಾಟಕ ನಾಯಕ ಸ್ಟೂಡೆಂಟ್ ಫೆಡರೇಶನ್ ಇವರುಗಳಿಗೆ ಪರಿಶಿಷ್ಟ ಪಂಗಡ ಜನಸಂಖ್ಯೆ 2011ರ ಜನಗಣತಿಯಂತೆ ಶೇ.6.95ರಷ್ಟು ಮೀಸಲಾತಿ ಇದೆ.
ಆದರೆ, ಶಿಕ್ಷಣ ಮತ್ತು ಸರ್ಕಾರಿ/ ಸಾರ್ವಜನಿಕ ಉದ್ಯೋಗಗಳಿಗೆ ಪ್ರಸ್ತುತ ಕೇವಲ ಶೇ.3 ಮೀಸಲಾತಿ ಇರುವುದರಿಂದ, ಈ ಜನಾಂಗ ಶಿಕ್ಷಣ ಮತ್ತು ಸರ್ಕಾರಿ/ಸಾರ್ವಜನಿಕ ಉದ್ಯೋಗಗಳಿಂದ ವಂಚಿತರಾಗಿ ಅನ್ಯಾಯಕ್ಕೆ ಒಳಗಾಗಿರುವುದರಿಂದ, ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಆಧಾರದ ಮೇಲೆಹೆಚ್ಚಿಸಬೇಕೆಂದು ಒತ್ತಾಯ ಮಾಡಿದ್ದರು.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಅಧ್ಯಕ್ಷರಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಕಳೆದ ಜೂನ್ 25ರಂದು ನಾಯಕ ಸಮಾಜದ ಮುಖಂಡರೊಂದಿಗೆ ಧರಣಿ ನಡೆಸಲಾಗಿತ್ತು.
ಉಪ ಮುಖ್ಯಮಂತ್ರಿಗಳು, ಸಮಾಜಕಲ್ಯಾಣ ಸಚಿವರು ಹಾಗೂ ಅರಣ್ಯ ಸಚಿವರು ಧರಣಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ಸಮುದಾಯದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.
ಸರ್ಕಾರಕ್ಕೆ ಸಲ್ಲಿಸಲಾಗಿರುವ ಬೇಡಿಕೆಗಳನ್ನು ಪರಿಶೀಲಿಸಿ, ಸಮಗ್ರ ಅಧ್ಯಯನ ನಡೆಸಿ, ವರದಿ ನೀಡುವ ಸಲುವಾಗಿ ಸರ್ಕಾರ ಪರಿಶೀಲನಾ ಆಯೋಗವನ್ನು ರಚಿಸಿದೆ.












Click it and Unblock the Notifications