ಖಾಸಗಿ ಕಾರಿನಲ್ಲಿ ಸಿಎಂ ಭೇಟಿಗೆ ಬಂದ ಶ್ರೀರಾಮುಲು ರಾಜೀನಾಮೆ ಕೊಡ್ತಾರ?
ಬೆಂಗಳೂರು, ಅ. 12: ಸಚಿವರ ಖಾತೆ ಬದಲಾವಣೆ ಮಾಡಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ಅಂಕಿತ ಹಾಕುತ್ತಿದ್ದಂತೆಯೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ರಾಜ್ಯಪಾಲ ವಜೂಬಾಯಿ ವಾಲಾ ಅವರಿಂದ ಅಧಿಕೃತ ಆದೇಶ ಹೊರ ಬೀಳುತ್ತಿದ್ದಂತೆಯೆ ಸಚಿವ ಶ್ರೀರಾಮುಲು ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭೇಟಿಗೆ ದಿಢೀರ್ ಆಗಮಿಸಿದ್ದಾರೆ. ಆದರೆ ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ಶ್ರೀರಾಮುಲು ಸಿಎಂ ಭೇಟಿಗೆ ಆಗಮಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಸಿಎಂ ನಿವಾಸಕ್ಕೆ ಆಗಮಿಸಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿಲ್ಲ. ಯಡಿಯೂರಪ್ಪ ಅವರು ವಿಶ್ರಾಂತಿಯಲ್ಲಿದ್ದಾರೆ ಎಂದು ಸಿಬ್ಬಂದಿ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ. ಹೀಗಾಗಿ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿಯೇ ಶ್ರೀರಾಮುಲು ಭೇಟಿಗೆ ಕಾಯ್ದು ಕುಳಿತಿದ್ದಾರೆ. ಶ್ರೀರಾಮುಲು ಅವರು ಖಾಸಗಿ ವಾಹನದಲ್ಲಿ ಆಗಮಿಸಿರುವುದು ಹಲವು ಮುನ್ಸೂಚನೆಗಳನ್ನು ಕೊಡುತ್ತಿದೆ ಎಂದು ಆಪ್ತರು ಮಾಹಿತಿ ಕೊಟ್ಟಿದ್ದಾರೆ. ಹಾಗಾದರೆ ಶ್ರೀರಾಮುಲು ಮುಂದಿನ ನಡೆ ಏನು?
ಆರೋಗ್ಯ ಸಚಿವ ಶ್ರೀರಾಮುಲು ಖಾತೆ ಬದಲಾವಣೆ: ಅಸಮಾಧಾನ ಸ್ಫೋಟ!
ರಾಜೀನಾಮೆಗೆ ಮುಂದಾದ ಶ್ರೀರಾಮುಲು?
ನನಗೆ ಮಂತ್ರಿಸ್ಥಾನ ಸಾಕಾಗಿ ಹೋಗಿದೆ ಎಂದು ಸಚಿವ ಶ್ರೀರಾಮುಲು ಅವರು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ನನಗೇ ಯಾವುದೇ ಸ್ಥಾನ, ಮಂತ್ರಿ ಹುದ್ದೆ ಬೇಡವೇ ಬೇಡ ಎನ್ನುವ ಮೂಲಕ ಯಡಿಯೂರಪ್ಪ ಅವರ ಸಂಪುಟದಿಂದ ಹೊರಗೆ ಬರಲು ಶ್ರೀರಾಮುಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಹೈಕಮಾಂಡ್ ಭೇಟಿಗೆ ನಿರ್ಧಾರ
ಶೀಘ್ರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಗೆ ಶ್ರೀರಾಮುಲು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಆಪ್ತರ ಬಳಿ ಮಾತನಾಡಿರುವ ಅವರು, ಆರೋಗ್ಯ ಇಲಾಖೆಯಲ್ಲಿ ಸಣ್ಣ ಕೆಲಸ ಮಾಡಲು ಆಗುತ್ತಿರಲಿಲ್ಲ. ಮೇಲಿನವರ ಹಸ್ತಕ್ಷೇಪದಿಂದ ಸಾಕಷ್ಟು ನೋವಾಗಿದೆ. ವೈದ್ಯಕೀಯ ಇಲಾಖೆ ನಿರ್ವಹಣೆ ಮಾಡಲು ವೈದ್ಯರೇ ಬೇಕಾಗಿಲ್ಲ. ಹಿಂದೆ ನಾನು ಆರೋಗ್ಯ ಇಲಾಖೆ ಮಂತ್ರಿಯಾಗಿದ್ದಾ 108 ತುರ್ತು ಆರೋಗ್ಯ ಸೇವಾ ಯೋಜನೆ ಆರಂಭಿಸಿದ್ದಾರೆ. ಆ ಯೋಜನೆಯಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಹಳಷ್ಟು ಹೆಸರು ಬಂದಿತ್ತು ಎಂದು ಮಾತನಾಡಿಕೊಂಡಿದ್ದಾರೆ.
ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ
ಕೊರೊನಾ ವೈರಸ್ ವೇಳೆಯಲ್ಲಿಯೂ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಆದರೂ ಖಾತೆ ಬದಲಾವಣೆ ಮಾಡಲಾಗಿದೆ. ಖಾತೆ ಬದಲಾವಣೆ ಮಾಡಿದ್ದು ಬೇಸರವಿಲ್ಲ, ಆದರೆ ವಿಶ್ವಾಸಕ್ಕೆ ತೆಗೆದುಕೊಳ್ಳದೆ ದಿಢೀರ್ ಖಾತೆ ಬದಲಾವಣೆ ಮಾಡಿರುವುದು ಮನಸ್ಸಿಗೆ ನೋವಾಗಿದೆ ಎಂದು ಆಪ್ತರ ಬಳಿ ಶ್ರೀರಾಮುಲು ಮಾತನಾಡಿಕೊಂಡಿದ್ದಾರಂತೆ.
Recommended Video
ಪೂರ್ಣ ಖಾತೆಯನ್ನೂ ಕೊಟ್ಟಿಲ್ಲ!
ಬದಲಾವಣೆ ಮಾಡಿ ಕೊಟ್ಟಿರುವ ಸಮಾಜ ಕಲ್ಯಾಣ ಖಾತೆಯನ್ನೂ ಸಂಪೂರ್ಣವಾಗಿ ಕೊಟ್ಟಿಲ್ಲ. ಅದರಲ್ಲಿಯೂ ಹಿಂದುಳಿದ ವರ್ಗ ಇಲಾಖೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಆ ಮೂಲಕ ಶ್ರೀರಾಮುಲು ಅವರು ಹಿಂದುಳಿದ ವರ್ಗದೊಂದಿಗೆ ಉತ್ತಮ ಬಾಂಧವ್ಯ ಹೊಂದದಂತೆ ಮಾಡುವ ಹುನ್ನಾರವಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿಂದುಳಿದ ವರ್ಗಕ್ಕೆ ಸೇರಿರುವ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.