ಬಿಡುಗಡೆ ಬಳಿಕ ಶ್ರೀರಾಮುಲು ಪಿಎ ರಾಜು ಫೇಸ್ಬುಕ್ ಪೋಸ್ಟ್!
ಬೆಂಗಳೂರು, ಜುಲೈ 02; ವಂಚನೆ ಆರೋಪದ ಮೇಲೆ ಬಂಧಿತರಾಗಿದ್ದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಪಿಎ ರಾಜು ಬಿಡುಗಡೆಯಾಗಿದ್ದಾರೆ. ಫೇಸ್ಬುಕ್ ಮೂಲಕ ಹಲವಾರು ಸ್ಪಷ್ಟೀಕರಣಗಳನ್ನು ನೀಡಿದ್ದಾರೆ.
ಸಚಿವ ಶ್ರೀರಾಮುಲು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಆರೋಪವಾಗಿತ್ತು. ವಿಜಯೇಂದ್ರ ನೀಡಿದ ದೂರಿನ ಅನ್ವಯ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ಶುಕ್ರವಾರ ಬಿ. ವೈ. ವಿಜಯೇಂದ್ರ ಸಹ ಟ್ವೀಟ್ ಮಾಡಿ, 'ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ' ಎಂದು ಹೇಳಿದ್ದರು.
ರಾಜು ಶುಕ್ರವಾರ ಮಧ್ಯಾಹ್ನ ಬಿಡುಗಡೆಗೊಂಡಿದ್ದಾರೆ. ಬಳಿಕ ಅವರು ಫೇಸ್ಬುಕ್ ಪೋಸ್ಟ್ ಹಾಕಿದ್ದು, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಈ ಪ್ರಕರಣದಲ್ಲಿ ನಾನು ಭಾಗಿಯಲ್ಲ, ಯಾವುದೇ ತಪ್ಪು ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳಂಕ ತರುವ ಕೆಲಸ ಮಾಡಲ್ಲ
'ಕಳೆದ 24 ಗಂಟೆಯಿಂದ ನಡೆಯುತ್ತಿರುವ ವಿದ್ಯಮಾನಗಳ ಹಿನ್ನಲೆಲಿ ಎರಡು ಮಾತು, ವಾಸ್ತವ ಸಂಗತಿ ಹಾಗೂ ಸತ್ಯಂಶವನ್ನ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ಸುಮಾರು 20 ವರ್ಷಗಳಿಂದ ಸಚಿವ ಮಾನ್ಯ
ಬಿ.ಶ್ರೀರಾಮುಲು ಅವರ ನೆರಳಲ್ಲಿ ಬದುಕುತ್ತಿದ್ದೇವೆ. ಸಚಿವರ ಪ್ರಾಮಾಣಿಕ ಜನಸೇವೆಲಿ ನೂರಾರು ಮಂದಿ ಅಳಿಲು ಸೇವೆ ಸಲ್ಲಿಸುತ್ತಿದ್ದು, ಅವರಲ್ಲಿ ಒಬ್ಬನಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಶ್ರೀರಾಮುಲು ಅವರಿಗಾಗಲಿ, ಮತ್ಯಾರಿಗೆ ಆಗಲಿ ಕಳಂಕ ತರುವ ಕೆಲಸ ಎಂದೂ ಮಾಡಿಲ್ಲ, ಮುಂದೆ ಮಾಡುವುದು ಇಲ್ಲ' ಎಂದು ರಾಜು ಹೇಳಿದ್ದಾರೆ.

ಆಡಿಯೋದಲ್ಲಿ ಭಾಗಿಯಾಗಿಲ್ಲ
'ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ ವೈ ವಿಜಯೇಂದ್ರ ಅವರ ಕುರಿತ ಯಾವುದೇ ಆಡಿಯೋದಲ್ಲಿ ನಾನು ಭಾಗಿಯಾಗಿಲ್ಲ. ಪೊಲೀಸರು ಈ ಕುರಿತು ವಿಚಾರಣೆ ಕರೆದುಕೊಂಡು ಹೋಗಿದ್ದು, ವಿಚಾರಣೆ ವೇಳೆ ನನ್ನದು ಎನ್ನಲಾದ ಆಡಿಯೋ ಕೇಳಿಸಿದ್ದು, ಅದು ನನ್ನದಲ್ಲ ಎಂದು ನನ್ನ ಧ್ವನಿಯಿಂದ ಗೊತ್ತಾಗಿದೆ. ನನ್ನ ಕುರಿತ ಸತ್ಯಂಶ ಅವರಿಗೆ ಮನವರಿಕೆಯಾಗಿದೆ' ಎಂದು ರಾಜು ಸ್ಪಷ್ಟನೆ ನೀಡಿದ್ದಾರೆ.

ಆಘಾತಕ್ಕೆ ಒಳಗಾಗಿದ್ದೇನೆ
'ನನ್ನ ವಾಯ್ಸ್ ಸ್ಯಾಂಪಲ್ಗಳನ್ನು ಪಡೆದಿದ್ದು, ಸತ್ಯಾಂಶ ಖಾತ್ರಿ ಪಡಿಸಿಕೊಳ್ಳಲು ಅವರ ಬಳಿಯಿರುವ ಆಡಿಯೋ ಜೊತೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಡಿಯೋದಲ್ಲಿ ಇರುವ ಧ್ವನಿ ನನ್ನದಲ್ಲ ಎಂದು ಪ್ರಾಥಮಿಕ ತನಿಖೆಲಿ ಮನವರಿಕೆಯಾಗಿದೆ. ಇವುಗಳನ್ನು FSLಗೂ ಕಳುಹಿಸಿಕೊಡಲಾಗಿದೆ'
'ಮತ್ತೆ ಹೇಳುವೆ..ಸಚಿವರ ಸೇವೆಯಲ್ಲಿ ಪ್ರಾಮಾಣಿಕವಾಗಿ ಅಳಿಲು ಸೇವೆ ಸಲ್ಲಿಸಲು ಬಂದವರಲ್ಲಿ ನಾನು ಒಬ್ಬ..
ಕಳೆದ ಒಂದು ದಿನದಿಂದ ಈಚೆಗೆ ನಡೆದ ಬೆಳವಣಿಗೆಗಳು ಹಾಗೂ ವರದಿಗಳು ಸತ್ಯಕ್ಕೆ ದೂರವಾಗಿದ್ದು, ನಾನು ಆಘಾತಕ್ಕೆ ಒಳಗಾಗಿದ್ದೇನೆ, ನನ್ನ ಕುಟುಂಬವೂ ನೋವಿನಲ್ಲಿ ಇದೆ' ಎಂದು ಹೇಳಿದ್ದಾರೆ.
Recommended Video

ಸತ್ಯಾಸತ್ಯತೆ ಗೊತ್ತಾಗುತ್ತಿತ್ತು
'ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ಅವರು ದೂರು ಸಲ್ಲಿಸುವ ಮುನ್ನ, ನನ್ನನು ಕರೆಯಿಸಿ ಮಾತನಾಡಿದ್ದಿದ್ದರೆ, ವಾಸ್ತವಾಂಶ ಹಾಗೂ ಸತ್ಯಾಸತ್ಯತೆ ಗೊತ್ತಾಗಿರುತ್ತಿತ್ತು. ಈ ಪ್ರಕರಣದಲ್ಲಿ ನಾನು ಭಾಗಿಯಲ್ಲ, ಯಾವುದೇ ತಪ್ಪು ಮಾಡಿಲ್ಲ. ನಾನು ಜೀವನಕ್ಕೆ ಕಷ್ಟ ಪಟ್ಟು ದುಡಿದುಕೊಂಡು ಬದುಕುವ ವ್ಯಕ್ತಿ. ಅಡ್ಡದಾರಿ ಹಿಡಿಯುವವನಲ್ಲ. ಬದುಕಿಗಾಗಿ ಕಷ್ಟಪಟ್ಟು ದುಡಿಯುತ್ತೇವೆ ಹೊರತು ಅಡ್ಡದಾರಿ ಹಿಡಿದು ಬದುಕುವವರಲ್ಲ' ಎಂದು ರಾಜು ಫೇಸ್ಬುಕ್ನಲ್ಲಿ ಬರೆದಿದ್ದಾರೆ.












Click it and Unblock the Notifications