ಉದ್ಯಮಿ, ಚಿತ್ರ ನಿರ್ಮಾಪಕ ಹರಿ ಖೋಡೆ ನಿಧನ
ಶ್ರೀಹರಿ ಖೋಡೆ ಸಿನಿಮಾಗಳನ್ನು ಸಹ ನಿರ್ಮಿಸಿದ್ದರು. ಕವನಗಳನ್ನು ರಚಿಸಿದ್ದರು. ರಾಜಕೀಯದ ನಂಟು ಸಹ ಇತ್ತು.
ಬೆಂಗಳೂರು, ನವೆಂಬರ್ 1: ಉದ್ಯಮಿ, ಚಿತ್ರ ನಿರ್ಮಾಪಕ ಶ್ರೀಹರಿ ಎಲ್. ಖೋಡೆ (77) ಸೋಮವಾರ ರಾತ್ರಿ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ನೂರು ವರ್ಷಕ್ಕೂ ಹಳೆಯದಾದ ಖೋಡೆ ಇಂಡಿಯಾ ಲಿಮಿಟೆಡ್ ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಹರಿ ಖೋಡೆ.
ಖೋಡೆ ಇಂಡಿಯಾ ಹಾಗೂ ಯುನೈಟೆಡ್ ಬ್ರಿವರೀಸ್ ಎರಡೂ ಬೆಂಗಳೂರು ಮೂಲದ, ರಾಜ್ಯದಲ್ಲೇ ಹೆಸರಾದ ಮದ್ಯ ತಯಾರಿಕೆ ಕಂಪನಿಗಳು. ಖೋಡೆ ಬ್ರ್ಯಾಂಡ್ ಗಳನ್ನು ಯುರೋಪ್ ಹಾಗೂ ಕೆನಡಾಗೆ ರಫ್ತು ಮಾಡುವ ಮೂಲಕ ವಿಸ್ತರಣೆಗೆ ಮುಂದಾಗಲಾಗಿತ್ತು.
ಶ್ರೀಹರಿ ಖೋಡೆ ಸಿನಿಮಾಗಳನ್ನು ಸಹ ನಿರ್ಮಿಸಿದ್ದರು. ಕವನಗಳನ್ನು ರಚಿಸಿದ್ದರು. ರಾಜಕೀಯದ ನಂಟು ಸಹ ಇತ್ತು. ದೇವರಾಜ ಅರಸ್, ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್ ಸೇರಿ ಹಲವು ಮುಖ್ಯಮಂತ್ರಿಗಳಿಗೆ ಅವರು ಹತ್ತಿರದವರಾಗಿದ್ದರು. 2004ರಲ್ಲಿ ಅರಸು ಸಂಯುಕ್ತ ಪಕ್ಷವನ್ನು ಸ್ಥಾಪಿಸಿದ್ದರು. ಅದರೆ ಅದು ಯಶಸ್ಸು ಕಾಣಲಿಲ್ಲ.
ಹರಿ ಖೋಡೆ ಸಂತ ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ನಾಗಮಂಡಲ ಸೇರಿದಂತೆ ನಾಲ್ಕು ಸಿನಿಮಾಗಳನ್ನು ನಿರ್ಮಿಸಿದ್ದರು. ಎಲ್ಲವೂ ಟಿ.ಎಸ್.ನಾಗಾಭರಣ ನಿರ್ದೇಶಿಸಿದ್ದರು. ಖೋಡೆ ಅವರ ನಿರ್ಮಾಣದ ಕೊನೆ ಚಿತ್ರ 'ಅಲ್ಲಮ' ಇನ್ನೂ ಬಿಡುಗಡೆ ಆಗಬೇಕಿದೆ. ಅವರ ನಿರ್ಮಾಣದ ಮೂರು ಸಿನಿಮಾಗಳಿಗೆ ಪ್ರಶಸ್ತಿ ಬಂದಿದ್ದವು. ಗಾಯಕ ಸಿ.ಅಶ್ವಥ್ ಅವರು ಖೋಡೆ ರಚಿಸಿದ್ದ ಕೆಲವು ಕವನಗಳಿಗೆ ಸಂಗೀತ ನೀಡಿದ್ದರು.
ಹರಿ ಖೋಡೆ ಅವರಿಗೆ ಪತ್ನಿ, ಮೂವರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.