Puneeth Rajkumar: ವಿಶೇಷ ಲೇಖನ: ಕನ್ನಡ ಚಿತ್ರರಂಗಕ್ಕೊಬ್ಬನೇ 'ಯುವರತ್ನ'
ಇಂದು ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಮೂರನೇ ವರ್ಷದ ಪುಣ್ಯಸ್ಮರಣೆ. ಅಪ್ಪು ಅಪಾರ ಅಭಿಮಾನಿಗಳನ್ನು ಅಗಲಿ ಇಂದಿಗೆ ಮೂರು ವರ್ಷಗಳು ಕಳೆದಿದೆ. ಮೂರನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಉಡುಪಿಯ ನಾಗೇಶ್ ಶೆಣೈ ಬರೆದ ವಿಶೇಷ ಲೇಖನ ಇಲ್ಲಿದೆ.
ಕನ್ನಡ ಚಿತ್ರರಂಗಕ್ಕೆ ಈ ವರ್ಷ 90 ವರ್ಷದ ಸಂಭ್ರಮ ಇಂತಹ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಭೂತವಾಗುತ್ತಿರುವುದರ ಹಿಂದೆ ಹಲವು ನಟ, ನಟಿಯರು, ತಂತ್ರಜ್ಞರು ವಿಶೇಷವಾಗಿ ಅಣ್ಣಾವ್ರು "ಅಭಿಮಾನಿ ದೇವರುಗಳು" ಎಂದು ಕರೆಯುತ್ತಿದ್ದ ಕಲಾಭಿಮಾನಿಗಳ ಪ್ರೋತ್ಸಾಹ ಮರೆಯುವಂತಿಲ್ಲ. ಚಿತ್ರರಂಗದ ಈ ಸುದೀರ್ಘ ಪಯಣದಲ್ಲಿ ಹಲವಾರು ನಟರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಒಬ್ಬರು.

ಚಿತ್ರೋದ್ಯಮ 90 ವರ್ಷದ ಪೂರೈಸಿದ ಸುಸಂದರ್ಭದಲ್ಲಿ ಪುನೀತ್ ಅವರು ನಮ್ಮ ಮಧ್ಯ ಇದ್ದಿದ್ದರೆ ತುಂಬಾನೇ ಖುಷಿ ಪಡುತ್ತಿದ್ದರು. ನಾಡು ನುಡಿ ಬಗ್ಗೆ ಅವರು ತುಂಬಾನೇ ಅಭಿಮಾನ ಪ್ರೀತಿ ಹೊಂದಿದ್ದರು. ತಮ್ಮ ಜೀವಿತಾವಧಿಯಲ್ಲಿ ಕನ್ನಡ ಭಾಷೆ ಉಳಿಸುವಲ್ಲಿ ಬೆಳೆಸುವಲ್ಲಿ ವಿಶೇಷ ಕಾಳಜಿಯನ್ನು ಆಸಕ್ತಿಯನ್ನು ತೋರಿದ್ದರು. ಇವತ್ತು ಕನ್ನಡ ಚಿತ್ರೋದ್ಯಮದ ಈ ಐತಿಹಾಸಿಕ ಕ್ಷಣದಲ್ಲಿ ಪುನೀತ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದೆ.
ಪುನೀತ್ ರಾಜಕುಮಾರ್ ಮೊದಲ ಹೆಸರು ಮಾಸ್ಟರ್ ಲೋಹಿತ್. ಮೂಲತಃ ಕಲಾ ಕುಟುಂಬ. ವರ ನಟ ಡಾ. ರಾಜಕುಮಾರ್ ಮಗನಾಗಿದ್ದರೂ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದು ಆಕಸ್ಮಿಕ. ಅದು 1975 ಇಸವಿ 'ಪ್ರೇಮದ ಕಾಣಿಕೆ' ಚಿತ್ರೀಕರಣ ನಡೆಯುತ್ತಿದ್ದ ಸಮಯ ಸಣ್ಣ ಕೂಸಿನ ಪಾತ್ರದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಕರೆಸಿದ ಕೂಸು ಚಿತ್ರೀಕರಣಕ್ಕೆ ಸಹಕರಿಸದಿದ್ದಾಗ ತುರ್ತಾಗಿ ಚಿತ್ರೀಕರಣ ಮುಗಿಸಬೇಕಿದ್ದಿದ್ದರಿಂದ 6 ತಿಂಗಳ ಹಸುಗೂಸಾದ ಮಾಸ್ಟರ್ ಲೋಹಿತ್ಗೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವ ಅದೃಷ್ಟ ಒದಗಿ ಬರುತ್ತದೆ. ನಂತರ ಕಲಾದೇವಿಯ ಆಶೀರ್ವಾದದಿಂದ ಹಲವಾರು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಯಿಸಿ 'ಬೆಟ್ಟದ ಹೂವು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗಳಿಸಿದ್ದು ಈಗ ಇತಿಹಾಸ.
ಬಾಲ ನಟನಾಗಿ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿದ ನಂತರ ಯಾಕೋ ನಟನೆ ಮೇಲೆ ಆಸಕ್ತಿ ಕಮ್ಮಿಯಾಗಿ ನಟನೆಗೆ ವಿರಾಮ ಕೊಟ್ಟು ಸ್ನೇಹಿತರ ಜೊತೆಗೂಡಿ ಉದ್ಯಮದ ಕಡೆ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಉದ್ಯಮದಲ್ಲಿ ಅವರಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ ಸುಖಾ ಸುಮ್ಮನೆ ಅಪವಾದಗಳು ಸುತ್ತಿಕೊಳ್ಳಲು ಪ್ರಾರಂಭವಾಗುತ್ತದೆ. ಇದರಿಂದ ಬೇಸತ್ತ ಪುನೀತ್ ಪುನಃ 'ಅಪ್ಪು' ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದು ಚಿತ್ರರಂಗಕ್ಕೆ ಪುನಃ ಪ್ರವೇಶ ಮಾಡುತ್ತಾರೆ.

'ಅಪ್ಪು' ಚಿತ್ರ ಅವರಿಗೆ ಯಾವ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದು ಕೊಡುತ್ತದೆ ಎಂದರೆ ಅಭಿಮಾನಿ ವಲಯದಲ್ಲಿ ಅವರು ಅದೇ ಹೆಸರಿನಿಂದ ಖ್ಯಾತಿ ಪಡೆಯುತ್ತಾರೆ ನಂತರದಲ್ಲಿ ಅವರು ಮುಟ್ಟಿದೆಲ್ಲಾ ಚಿನ್ನವಾಗುತ್ತ ಹೋಗುತ್ತದೆ. ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಾರೆ. ಸರಿಸುಮಾರು 30 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸುತ್ತಾರೆ.
ಫ್ಯಾಮಿಲಿ ಎಲ್ಲಾ ಜೊತೆ ಕೂತು ನೋಡುವಂತ ಒಂದೊಳ್ಳೆ ಸಂದೇಶವನ್ನು ಸಮಾಜಕ್ಕೆ ನೀಡುವ ಸದಭಿರುಚಿಯ ಚಿತ್ರಗಳನ್ನೇ ಹೆಚ್ಚಾಗಿ ಆರಿಸಿ ನಟಿಸುತ್ತಾರೆ. ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ತುಂಬಾನೇ ಉತ್ಸಾಹದಿಂದ ನಿರೂಪಿಸಿ ಕೊಟ್ಟು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಪ್ರತಿ ಮನೆ ಮನದಲ್ಲೂ ತಮ್ಮ ನಿರೂಪಣೆಯ ಛಾಪು ಮೂಡಿಸುತ್ತಾರೆ.
ಪುನೀತ್ ಹುಟ್ಟಿದ ದಿನಾಂಕ ಮಾರ್ಚ್ 17. ಒಮ್ಮೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಬಂದಿದ್ದಾಗ 17 ನಂಬರ್ ವಿಶೇಷತೆ ಬಗ್ಗೆ ಮಾತನಾಡುತ್ತ "ಎಲ್ಲರೂ ಒಂದು ದಿನ ಸಾಯುತ್ತಾರೆ ಆದರೆ ನಂಬರ್ 17 ಸತ್ತ ಮೇಲೆ ಬದುಕುತ್ತಾರೆ" ಎಂದು ಉಲ್ಲೇಖಿಸಿದ್ದರು. ನನಗೆ ಇನ್ನೂ ನೆನಪಿದೆ ಪುನೀತ್ ಕೊನೆಯದಾಗಿ ನಾಯಕ ನಟನಾಗಿ ಅಭಿನಯಸಿದ್ದ "ಜೇಮ್ಸ್" ಚಿತ್ರ ಅವರ ನಿಧನದ ನಂತರ ಬಿಡುಗಡೆಗೊಂಡಾಗ ಫ್ಯಾನ್ಸ್ ಕ್ರೇಜ್ ಕಲೆಕ್ಷನ್ಸ್ ವಿಷಯದಲ್ಲಿ ಅವರ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಗನ್ನು ಅಳಿಸಿ ಹಾಕಿ ಹೊಸ ದಾಖಲೆ ಬರೆದಿತ್ತು .

ಪುನೀತ್ ಎಷ್ಟೇ ಜನಪ್ರಿಯ ನಟರಾಗಿದ್ದರೂ ಎಂದೂ ಸಹ ಅಹಂಕಾರವನ್ನು ಪ್ರದರ್ಶಿಸಿದವರಲ್ಲ. ತುಂಬಾನೇ ಸರಳವಾಗಿ ಬದುಕ್ಕಿದ್ದವರು ಸಹಬಾಳ್ವೆಯನ್ನೇ ಜಾಸ್ತಿಯಾಗಿ ಇಷ್ಟ ಪಡುತ್ತಿದ್ದರು. ತನ್ನ ಸಿನಿಮಾ ಎಷ್ಟು ಕೋಟಿ ಗಳಿಸಿತು ಎಂದು ಯಾವತ್ತೂ ಲೆಕ್ಕ ಇಟ್ಟವರಲ್ಲ. ಹಾಗಾಗಿ ಇವತ್ತಿಗೂ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಪುನೀತ್ ಅಭಿನಯಿಸಿದ್ದ ಜಾಕಿ ಚಿತ್ರ ಅವರ ಹುಟ್ಟುಬ್ಬದ ಪ್ರಯುಕ್ತ ಮಾರ್ಚ್ 15, 2024 ರೀ ರಿಲೀಸ್ ಆದಾಗ ತುಂಬಿದ್ದ ಜನಸ್ತೋಮ ನಡೆದ ಸಂಭ್ರಮಾಚರಣೆ ಹಿಂದೆ ಪುನೀತ್ ಹೊಸ ಚಿತ್ರ ರಿಲೀಸ್ ಆದಾಗ ಹೇಗಿರುತ್ತಿತೋ ಹಾಗೆ ಇತ್ತು. ಇದು ಪುನೀತ್ ರವರ ಚಿತ್ರಗಳ ಕ್ರೇಜ್ ಅವರ ಅಭಿಮಾನಿಗಳಲ್ಲಿಇವತ್ತಿಗೂ ಹಾಗೆ ಇದೆ ಎನ್ನುವುದನ್ನು ಸಾಬೀತು ಪಡಿಸುತ್ತದೆ.
ಹಿಂದೊಮ್ಮೆ ರಾಘವೇಂದ್ರ ರಾಜಕುಮಾರ್ ಅವರು ಪುನೀತ್ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಸ್ಥಾಪಿಸಿದ್ದ PRK ಪ್ರೊಡಕ್ಷನ್ಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತ "ತಾನು ಬೆಳೆಯುವುದರ ಜೊತೆ ತನ್ನವರನ್ನು ಬೆಳೆಸೋ ಅಪ್ಪು ಗುಣದ ಮೆಚ್ಚುಗೆ ವ್ಯಕ್ತಪಡಿಸುತ್ತ ಪುನೀತ್ ರವರಲ್ಲಿ ನಾನು ಶಂಕರನಾಗ್ ನೋಡ್ತೀನಿ. ಶಂಕರನಾಗ್ ಅವರಲ್ಲಿ ಇದ್ದ ಹಾಗೆ ಎನರ್ಜಿ ಮತ್ತೆ ವಿಭಿನ್ನ ರೀತಿಯಲ್ಲಿ ಸಿನಿಮಾ ಮಾಡಬೇಕು ಎಂಬ ಕನಸು ಅಪ್ಪುಗೂ ಇದೆ" ಎಂದಿದ್ದರು.
ರಾಘಣ್ಣ ತಿಳಿಸಿದ ಹಾಗೆ ಪುನೀತ್ ಅವರಲ್ಲಿ ಇದ್ದ ಅಂತಹದೊಂದು ಕನಸು ಬೆಳಕಿಗೆ ಬಂದದ್ದು ಅವರ ಕೊನೆಯದಾಗಿ ಕಾಣಿಸಿಕೊಂಡ ಗಂಧದಗುಡಿ ಚಿತ್ರದಲ್ಲಿ. ಅಲ್ಲಿ ಅವರ ಸರಳತೆಯ ಪಾಠವಿತ್ತು, ಪ್ರಕೃತಿಯ ಬಗ್ಗೆ ಪ್ರೀತಿಯಿತ್ತು, ವನ್ಯಜೀವಿಗಳ ಬಗ್ಗೆ ಕಾಳಜಿ ಪ್ರತಿಬಿಂಬಿಸುತಿತ್ತು. ಪುನೀತ್ ಅಭಿನಯಿಸಿದ್ದ ಚಿತ್ರಗಳಲ್ಲಿ ಅಡಕವಾಗಿದ್ದ ಸಂದೇಶಗಳು ಅವರು ನಿಧನರಾದ ನಂತರ ಬೆಳಕಿಗೆ ಬಂದ ಅವರು ಮಾಡಿದ ಸಮಾಜಮುಖಿ ಕೆಲಸಗಳು ಈಗಿನ ಯುವಕ ಯುವತಿಯರ ಮೇಲೆ ತುಂಬಾನೇ ಪ್ರಭಾವ ಬೀರಿದೆ. ಅವರ ಫ್ಯಾನ್ಸ್ ಗಳಲ್ಲಿ ಹೆಚ್ಚಾಗಿ ಇದ್ದವರು ಕೂಡ ವಿದ್ಯಾರ್ಥಿಗಳೇ ಹಾಗಾಗಿ ಕನ್ನಡ ಚಿತ್ರರಂಗಕ್ಕೊಬ್ಬನೇ 'ಯುವರತ್ನ' ಎಂದರೆ ತಪ್ಪಾಗಲಾರದು.
ಬರಹ: ನಾಗೇಶ್ ಶೆಣೈ, ಉಡುಪಿ












Click it and Unblock the Notifications