ಉಮೇಶ್ ಜಾಧವ್ ಸೇರಿ ನಾಲ್ವರು ಶಾಸಕರಿಗೆ ಸ್ಪೀಕರ್ ನೊಟೀಸ್
Recommended Video
ಬೆಂಗಳೂರು, ಮಾರ್ಚ್ 07: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಉಮೇಶ್ ಜಾಧವ್ ಹಾಗೂ ಮೂವರು ಕಾಂಗ್ರೆಸ್ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ನೊಟೀಸ್ ಜಾರಿ ಮಾಡಿದ್ದು, ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಹಾಗೂ ಉಮೇಶ್ ಜಾಧವ್ ಅವರ ಶಾಸಕತ್ವ ಅನರ್ಹಗೊಳಿಸುವಂತೆ ಸ್ಪೀಕರ್ಗೆ ದೂರು ನೀಡಿದ್ದರು. ಈ ದೂರಿಗೆ ಸಂಬಂಧಪಟ್ಟಂತೆ ಶಾಸಕರಿಗೆ ನೊಟೀಸ್ ಜಾರಿ ಆಗಿದೆ.
ಸಿಎಂ ಭೇಟಿ ಮಾಡಿದ ಕಾಂಗ್ರೆಸ್ ಅತೃಪ್ತ ಶಾಸಕರು ಹೇಳಿದ್ದೇನು?
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿರುವ ಉಮೇಶ್ ಜಾಧವ್ ಅವರಿಗೂ ನೊಟೀಸ್ ಜಾರಿಯಾಗಿದೆ. ಅವರ ರಾಜೀನಾಮೆಯನ್ನು ಸ್ಪೀಕರ್ ಅವರು ಇನ್ನೂ ಅಂಗೀಕರಿಸಿಲ್ಲ, ಅದರ ಒಳಗಾಗಿಯೇ ನೊಟೀಸ್ ಜಾರಿಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಾರ್ಚ್ 12 ರಂದು ಎಲ್ಲ ಶಾಸಕರು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ನಲ್ಲಿ ತಿಳಿಸಲಾಗಿದೆ. ಉಮೇಶ್ ಜಾಧವ್ ಅವರು ರಾಜೀನಾಮೆ ಅಂಗೀಕಾರಗೊಳ್ಳುವ ಮೊದಲೆ ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಹೇರಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲಾಗುತ್ತದೆಯಾ ಎಂಬ ಗುಮಾನಿ ಎದ್ದಿದೆ.
ಕಾನೂನು ತಜ್ಞರ ಪ್ರಕಾರ, ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗಲೇ ಬೇಕಿದೆ. ರಾಜೀನಾಮೆ ನೀಡಿದ ನಂತರ ಅವರ ಅನರ್ಹತೆ ಸಾಧ್ಯವಾಗುವುದಿಲ್ಲ, ಸ್ಪೀಕರ್ ಹಾಗೇನಾದರೂ ಮಾಡಿದಲ್ಲಿ ಅವರು ನ್ಯಾಯಾಲಯಕ್ಕೆ ಹೋಗಬಹುದಾಗಿದೆ.