ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸ್ಪೀಕರ್ ರಮೇಶ್ ಕುಮಾರ್!
ಬೆಂಗಳೂರು, ಜುಲೈ 11 : ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಶಾಸಕರ ರಾಜೀನಾಮೆ ವಿಚಾರವನ್ನು ಇಂದು ಇತ್ಯರ್ಥಗೊಳಿಸಲು ಸಾಧ್ಯವಿಲ್ಲ ಎಂದು ಮನವಿ ಸಲ್ಲಿಸಿದ್ದಾರೆ. ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಾಲಯ ನಿರಾಕರಿಸಿದೆ.
ಗುರುವಾರ ಕೆ.ಆರ್.ರಮೇಶ್ ಕುಮಾರ್ ಅವರು ಸುಪ್ರೀಂಕೋರ್ಟ್ ನೀಡಿದ್ದ ಆದೇಶ ವಿರುದ್ಧ ಮನವಿ ಸಲ್ಲಿಸಿದರು. ನಿಯಮಾವಳಿ ಪ್ರಕಾರ ನಾನು ಕೆಲಸ ಮಾಡಬೇಕಿದೆ. ನ್ಯಾಯಾಲಯದ ಆದೇಶದಂತೆ ಇಂದು ಮಧ್ಯರಾತ್ರಿಯೊಳಗೆ ಇತ್ಯರ್ಥಗೊಳಿಸಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದರು.
ಸ್ಪೀಕರ್ ರಮೇಶ್ ಕುಮಾರ್ ಅವರು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ತುರ್ತಾಗಿ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ್ದು, ಶುಕ್ರವಾರ ವಿಚಾರಣೆ ನಡೆಸುವುದಾಗಿ ಹೇಳಿದರು.
ಮುಂಬೈನಲ್ಲಿರುವ ಅತೃಪ್ತ ಶಾಸಕರು ಸ್ಪೀಕರ್ ಮುಂದೆ ಇಂದು ಸಂಜೆ 6 ಗಂಟೆಯೊಳಗೆ ಹಾಜರಾಗಲಿದ್ದಾರೆ. ರಮೇಶ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಶುಕ್ರವಾರ ಮಹತ್ವದ ತೀರ್ಮಾನ ಹೊರಬೀಳುವ ನಿರೀಕ್ಷೆ ಇದೆ.

ರಮೇಶ್ ಕುಮಾರ್ ಅರ್ಜಿ
ಸುಪ್ರೀಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿ ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿದ ಸ್ಪೀಕರ್ ರಮೇಶ್ ಕುಮಾರ್ ಪರ ವಕೀಲರು, ಅತೃಪ್ತ ಶಾಸಕರ ಅನರ್ಹತೆಗೆ ಸಲ್ಲಿಸಿರುವ ಅರ್ಜಿಗಳು ನನ್ನ ಮುಂದೆ ಬಾಕಿ ಇದೆ.
ಆ ಅರ್ಜಿಗಳ ವಿಚಾರಣೆಗೆ ನನಗೆ ಸಮಯಾವಕಾಶ ಬೇಕು. ಆದ್ದರಿಂದ, ಶಾಸಕರ ರಾಜೀನಾಮೆ ಬಗ್ಗೆ ಏಕಾಏಕಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಾದ ಮಂಡನೆ ಮಾಡಿದರು.

ನನ್ನ ಸಾಂವಿಧಾನಿಕ ಕರ್ತವ್ಯ
ವಿಧಾನಸಭೆ ಸ್ಪೀಕರ್ ಆಗಿರುವ ನಾನು ಶಾಸಕರ ರಾಜೀನಾಮೆ ಬಗ್ಗೆ ಪರಿಶೀಲನೆ ನಡೆಸಬೇಕು. ಇದು ನನ್ನ ಸಾಂವಿಧಾನಕ ಕರ್ತವ್ಯವಾಗಿದೆ. ನನಗೆ ನೀವು ಆದೇಶ ಕೊಟ್ಟು, ಗಡುವು ಕೊಡುವುದು ಸಾಧ್ಯವಿಲ್ಲ. ನನ್ನ ಅರ್ಜಿಯನ್ನು ತುರ್ತಾಗಿ ವಿಚಾರಣೆ ಮಾಡಬೇಕು ಎಂದು ರಮೇಶ್ ಕುಮಾರ್ ಮನವಿ ಮಾಡಿದರು.

ನ್ಯಾಯಾಲಯ ಹೇಳಿದ್ದೇನು?
ಸ್ಪೀಕರ್ ರಮೇಶ್ ಕುಮಾರ್ ಅವರ ಅರ್ಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಅವರ ಪೀಠದ ಮುಂದೆ ಬಂದಿತು. ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

ಬೆಳಗ್ಗೆ ಆದೇಶ ನೀಡಿದ್ದೇವೆ
ಸ್ಪೀಕರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಬಗ್ಗೆ ಬೆಳಗ್ಗೆ ಆದೇಶ ನೀಡಲಾಗಿದೆ. ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ. ನಾಳೆ (ಶುಕ್ರವಾರ) ಶಾಸಕರ ಅರ್ಜಿ ಜೊತೆ ನಿಮ್ಮ ಅರ್ಜಿಯ ವಿಚಾರಣೆ ಮಾಡುತ್ತೇವೆ ಎಂದು ಕೋರ್ಟ್ ಹೇಳಿತು.












Click it and Unblock the Notifications