ಮಾಧ್ಯಮಗಳಿಗೆ ಸದನ ಸಮಿತಿಯ 'ಮೂಗು ದಾರ'
ಕನ್ನಡದ ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ನಿಯಂತ್ರಣ ಹೇರುವ ಸಂಬಂಧ ಅಧ್ಯಯನ ನಡೆಸಲು 9 ಸದಸ್ಯರ ಸದನ ಸಮಿತಿಯನ್ನು ವಿಧಾನಸಭಾ ಸ್ಪೀಕರ್ ಕೆ.ಬಿ ಕೋಳಿವಾಡ್ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, ಮಾರ್ಚ್ 28: ಕನ್ನಡದ ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ನಿಯಂತ್ರಣ ಹೇರುವ ಸಂಬಂಧ ಅಧ್ಯಯನ ನಡೆಸಲು 9 ಸದಸ್ಯರ ಸದನ ಸಮಿತಿಯನ್ನು ವಿಧಾನಸಭಾ ಸ್ಪೀಕರ್ ಕೆ.ಬಿ ಕೋಳಿವಾಡ್ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್ ರಮೇಶ್ ಕುಮಾರ್ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಟಿವಿ ಮತ್ತು ದೃಶ್ಯ ಮಾಧ್ಯಮಗಳ ಕುರಿತು ಈ ತಂಡ ಅಧ್ಯಯನ ನಡೆಸಲಿದೆ.[ಟಿವಿ ಮಾಧ್ಯಮಗಳಿಗೆ ಲಗಾಮು, ಸದನ ಸಮಿತಿ ರಚನೆಗೆ ಸ್ಪೀಕರ್ ಸೂಚನೆ]
ಶಾಸಕರಾದ ರಾಜೂ ಕಾಗೆ, ಸುರೇಶ್ ಗೌಡ, ಎನ್.ಎ ಹ್ಯಾರಿಸ್, ಎಸ್.ಟಿ ಸೋಮಶೇಖರ್, ಬಿ.ಆರ್. ಯಾವಗಲ್, ನಾರಾಯಣ ಗೌಡ, ಸಾರಾ ಮಹೇಶ್, ಅಶೋಕ್ ಪಟ್ಟಣ, ಶಿವರಾಜ್ ತಂಗಡಗಿ ಸಮಿತಿಯಲ್ಲಿರುವ ಇತರ ಸದಸ್ಯರಾಗಿದ್ದಾರೆ.
ಸದನ ಸಮಿತಿ ರಚನೆಯನ್ನು ಸಚಿವ ಬಸವರಾಜ ರಾಯರೆಡ್ಡಿ ತೀವ್ರವಾಗಿ ವಿರೋಧಿಸಿದ್ದರು. ಮಾಧ್ಯಮಗಳ ಸಂಪಾದಕರ ಸಂಧಾನ ಸಭೆ ಕರೆದು ವಿಷಯಕ್ಕೆ ಪೂರ್ಣ ವಿರಾಮ ಹಾಕಲು ಅವರು ಸೂಚಿಸಿದರು. ಆದರೆ ರಾಯರೆಡ್ಡಿ ಆಕ್ಷೇಪದ ನಡುವೆಯೇ ಸಭಾಧ್ಯಕ್ಷರು ಸದನ ಸಮಿತಿ ರಚಿಸಿದ್ದಾರೆ.
ಈ ಹಿಂದೆ ಮಾರ್ಚ್ 22ರ ಅಧಿವೇಶನದಲ್ಲಿ ಕನ್ನಡದ ದೃಶ್ಯ ಮಾಧ್ಯಮಗಳಿಗೆ ಕಡಿವಾಣ ಹಾಕುವ ಸಂಬಂಧ ವಿಧಾನ ಸಭೆಯ ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ ನಡೆದಿತ್ತು. 'ನಮ್ಮ ತೇಜೋವಧೆ ಮಾಡಲಾಗುತ್ತಿದೆ,' ಎಂದು ಪಕ್ಷ ಭೇದ ಮರೆತು ಶಾಸಕರೆಲ್ಲಾ ಮಾಧ್ಯಮಗಳ ಮೇಲೆ ಅಬ್ಬರಿಸಿದ್ದರು.
ನಂತರ ಶಾಸಕರ ಒತ್ತಾಯದ ಮೇರೆ ಮಾಧ್ಯಮಗಳಿಗೆ ಕಡಿವಾಣ ಹಾಕಲು 15 ದಿನದೊಳಗೆ ಸದನ ಸಮಿತಿ ರಚನೆ ಮಾಡಲಾಗುವುದು ಎಂದು ಸ್ಪೀಕರ್ ಕೆ.ಬಿ ಕೋಳಿವಾಡ್ ಹೇಳಿದ್ದರು. ಅದರಂತೆ ಇದೀಗ 9 ಸದಸ್ಯರ ಸಮಿತಿ ರಚನೆ ಮಾಡಿದ್ದಾರೆ.