ಶಾಸಕ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ಅಂಗೀಕಾರ
ಬೆಂಗಳೂರು, ಅಕ್ಟೋಬರ್, 20: ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಕ್ಟೋಬರ್ 17ರಂದು ನಂಜನಗೂಡು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಗುರುವಾರ ಅಂಗೀಕರಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ರಾಜೀನಾಮೆ ಅಂಗೀಕಾರ ಕರಿತಂತೆ ಕೆಲವು ಸಂವಿಧಾನಿ ಪ್ರಕ್ರಿಯೆಗಳನ್ನು ಅನುಸರಿಸಬೇಕಾದ ಅಗತ್ಯವಿದ್ದರಿಂದ ರಾಜೀನಾನೆಯನ್ನು ಮೂರು ದಿನಗಳ ಕಾಲ ತಡೆಹಿಡಿಯಲಾಗಿತ್ತು ಎಂದು ತಿಳಿಸಿದರು.
ರಾಜೀನಾಮೆ ಅಂಗೀಕಾರಕ್ಕೂ ಮುನ್ನ ಶ್ರೀನಿವಾಸ್ ಪ್ರಸಾದ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮತನಾಡಿಸಲಾಯಿತು. ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿದ್ದೀರಾ ಎಂದು ಪ್ರಶ್ನಿಸಲಾಯಿತು, ಎಂದು ವಿಧಾನಸಭಾಧ್ಯಕ್ಷ ಕೋಳಿವಾಡ ಅವರು ತಿಳಿಸಿದರು.
ಪ್ರತ್ಯುತ್ತರವಾಗಿ ಶ್ರೀನಿವಾಸ್ ಪ್ರಸಾದ್ ಅವರು 'ರಾಜೀನಾಮೆ ನಿರ್ಧಾರಕ್ಕೆ ಈಗಲೂ ಬದ್ಧರಾಗಿದ್ದು, ದಯವಿಟ್ಟು ಅಂಗೀಕರಿಸಿ. ನನ್ನ ಮೇಲೆ ಯಾವುದೇ ಒತ್ತಡವಿಲ್ಲ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಸ್ಪಷ್ಟಪಡಿಸಿದರು ಎಂದು ಅವರು ಹೇಳಿದರು.
ಅವರಿಂದ ಸ್ಪಷ್ಟನೆ ಪಡೆದುಕೊಂಡ ಬಳಿಕ ಸಂವಿಧಾನದ ಕಲಂ 190 (3) (ಬಿ) ರಾಜೀನಾಮೆ ಅಂಗೀಕರಿಸಿರುವುದಾಗಿ ಕೋಳಿವಾಡ ಅವರು ಹೇಳಿದರು.
ಇನ್ನೂ ಆರು ತಿಂಗಳೊಳಗಾಗಿ ನಂಜನಗೂಡು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲಾಗುವುದು ಅವರು ಹೇಳಿದರು.
ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅವರು ಪ್ರತಿಕ್ರಿಯೆ ನೀಡಿದ್ದು, ರಾಜೀನಾಮೆ ಅಂಗೀಕಾರದಿಂದ ಸಂತೋಷವಾಗಿದೆ. ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಮತ್ತು ಕ್ಷೇತ್ರದ ಜನತೆಯನ್ನು ಸಂಪರ್ಕಿಸಿ ಮುಂದಿನ ನಡೆ ಕುರಿತು ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.












Click it and Unblock the Notifications