ಕಾವಿ ಹಾಕಿದ ಸ್ವಾಮಿಗೆ ಅತ್ಯಾಚಾರದ ಬಗ್ಗೆ ಏನು ಗೊತ್ತು?
ಪ್ರ: ಧರ್ಮಸ್ಥಳ ಗ್ರಾಮ ಪಂಚಾಯತಿಯ ಇಬ್ಬರು ಸದಸ್ಯರು ನಿಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ತಿಳಿದು ಬಂತು. ಅವರಿಗೆ ನಿಮ್ಮ ಮೇಲೆ ಏನಾದರೂ ವೈಯಕ್ತಿಕ ದ್ವೇಷವಿತ್ತೇ?
ಶ್ರೀಗಳು: ಈ ಇಬ್ಬರೂ ಸದಸ್ಯರು ಯಾರೆಂದು ನನಗೆ ತಿಳಿದಿಲ್ಲ. ಕೇಮಾರು ಸ್ವಾಮೀಜಿಯ ಕಾವಿ ಬಿಚ್ಚಿ ಹಾಕಬೇಕು. ಆ ಸ್ವಾಮಿಗೆ ಅತ್ಯಾಚಾರ ಮಾಡಿದ ಅನುಭವವಿದೆಯೇ ಎನ್ನುವ ಮಾತನ್ನು ಆಡಿದ್ದಾರೆ.
ನಾನೊಬ್ಬ ಸ್ವಾಮೀಜಿ. ಸರ್ವಸಂಗ ಪರಿತ್ಯಾಗಿ ನನಗೆ ಅತ್ಯಾಚಾರ ಮಾಡಿದ ಅನುಭವ ಖಂಡಿತ ಇಲ್ಲ. ಆದರೆ ಅವರು ಕಾವಿ ಬಗ್ಗೆ ಮಾತಾಡಿದ್ದು ನನಗೆ ನೋವಿದೆ. ಕಾವಿ ಹಿಂದೂ ಧರ್ಮದ ಒಂದು ನಂಬಿಕೆ. ಆ ಸದಸ್ಯರ ಕೀಳು ಮಟ್ಟದ ಮಾತಿನಿಂದ ನಮಗೆ ಲಾಭವೇ ಆಯಿತು. ನಮ್ಮ ಹೋರಾಟಕ್ಕೆ ಜನ್ನ ಹೆಚ್ಚು ಬರಲಾರಂಭಿಸಿದರು.

ಪ್ರ:ಸೌಜನ್ಯ ಕೇಸ್ ಮುಚ್ಚಿಹಾಕಲು ಯಾರ್ಯಾರು ಪಿತೂರಿ ನಡೆಸುತ್ತಿದ್ದಾರೆ? ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಯಾರ ಮೇಲೆ ನಿಮ್ಮ ಅನುಮಾನವಿದೆ?
ಶ್ರೀಗಳು: ನಾನೊಬ್ಬ ಸ್ವಾಮೀಜಿ. ನನಗೆ ಯಾರ ಮೇಲೂ ಅಂಜಿಕೆಯಿಲ್ಲ. 10-12 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಸಾಧ್ಯತೆಯಿದೆ ಎನ್ನುವುದನ್ನೂ ನಾನು ಅರಿತಿದ್ದೇನೆ.
ಬಡವರಿಗೆ, ದೀನದಲಿತರಿಗೆ, ಪ್ರಕೃತಿಗೆ ತೊಂದರೆ ಆಗಬಾರದೆನ್ನುವುದು ನನ್ನ ಹೋರಾಟ. ಕೊಡಚಾದ್ರಿ, ನಾಗಾರ್ಜುನ ಸ್ಥಾವರದ ವಿರುದ್ದ ಹೋರಾಟ ಮಾಡಿಕೊಂಡು ಬಂದವನು ನಾನು. ನನಗೆ ಭಯ ಅನ್ನುವುದು ಇಲ್ಲ. ಸೌಜನ್ಯ ಕೊಲೆಯ ನೈಜ ಆರೋಪಿಗಳು ಯಾರು ಎನ್ನುವುದು ನನಗೆ ತಿಳಿದಿಲ್ಲ.
ಪ್ರ: ಯತಿಗಳ ನಿಲುವಿಗೆ ರಾಜ್ಯದಲ್ಲಿ ಹೆಚ್ಚಿನ ಮಾನ್ಯತೆ ಇರುವುದರಿಂದ ಈ ಮಾತು ಕೇಳುತ್ತಿದ್ದೇವೆ. ಪೇಜಾವರ ಶ್ರೀಗಳು ಹೊರತು ಪಡಿಸಿ ನಾಡಿನ ಯತಿಗಳು ಹೋರಾಟಕ್ಕೆ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ತಮ್ಮ ನಿಲುವು ಸ್ಪಷ್ಟ ಪಡಿಸಲಿಲ್ಲ. ಈ ಬಗ್ಗೆ ಏನು ಹೇಳುತ್ತೀರಿ?
ಶ್ರೀಗಳು: ರಾಜ್ಯದ ಯಾವುದೇ ಹೋರಾಟಕ್ಕೆ ಯತಿಗಳ ಬೆಂಬಲ ಮುಖ್ಯ ಅನ್ನುವುದು ಸರಿಯಾದ ಮಾತು. ಪೇಜಾವರ ಶ್ರೀಗಳು ಭೇಟಿ ನೀಡಿದ ಬಳಿಕ ಧರ್ಮಪಾಲ ಸ್ವಾಮೀಜಿಗಳು ಸೌಜನ್ಯ ಮನೆಗೆ ಭೇಟಿ ನೀಡಿ ಬಂದಿದ್ದಾರೆ.
ನಾನಾ ಜನರ ಸೇವೆ ಮಾಡುವುದೇ ಭಗವಂತನ ಪೂಜೆಯಿಂದು ಆಚಾರ್ಯ ಮಧ್ವರು ಹೇಳಿದ್ದಾರೆ. ಈ ಶರೀರ ದೇವರು ಕೊಟ್ಟಿದ್ದು, ಅವರವರ ಚೌಕಟ್ಟಿನ ಇತಿಮಿತಿ ಅನ್ನುವುದು ಇರಬಹುದು. ಆದರೂ ನಾಡಿನ ಎಲ್ಲಾ ಸ್ವಾಮೀಜಿಗಳ ಬೆಂಬಲ ಕೋರುತ್ತಿದ್ದೇವೆ.












Click it and Unblock the Notifications