ಸೌಜನ್ಯ ಕೊಲೆ : ಕೇಮಾರು ಶ್ರೀಗಳ ವಿಶೇಷ ಸಂದರ್ಶನ
ಉಜಿರೆ SDM ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ವಿರುದ್ದ ಪ್ರಮುಖವಾಗಿ ಧ್ವನಿ ಎತ್ತಿದವರಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಕೂಡಾ ಪ್ರಮುಖರು.
ಬಡವರ ಮತ್ತು ದೀನದಲಿತರ ಪರವಾಗಿ ಹೋರಾಟ ಮಾಡಿಕೊಂಡು ಬಂದ ಶ್ರೀಗಳು ಕೊಡಚಾದ್ರಿ, ನಾಗಾರ್ಜುನ ಸ್ಥಾವರದ ವಿರುದ್ದದ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದವರು.
ಸೌಜನ್ಯ ಕೊಲೆ ಪ್ರಕರಣ ಸಿಬಿಐ ಸುಪರ್ದಿಗೆ ವಹಿಸ ಬೇಕೆನ್ನುವ ಹೋರಾಟ ತೀವ್ರವಾಗುತ್ತಿರುವ ಈ ಸಮಯದಲ್ಲಿ ಕೇಮಾರು ಶ್ರೀಗಳ ಮತ್ತು ಈ ಹೋರಾಟದ ಮತ್ತೊಬ್ಬ ಪ್ರಮುಖ ಮುಖಂಡ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ಸಂದರ್ಶನ ಇಂತಿದೆ. (ಒಟ್ಟು ಐದು ಪುಟಗಳಲ್ಲಿ)
ಪ್ರ: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವರದಿ ಬಂದಿದೆ. ವರದಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ನಿಮ್ಮ ಹೋರಾಟದ ಮುಂದಿನ ರೂಪುರೇಷೆ ಏನು?
ಶ್ರೀಗಳು: ನಾನು ಹೋದ ವರ್ಷ ನವೆಂಬರ್ ಐದರಂದು ಸೌಜನ್ಯ ಮನೆಗೆ ಭೇಟಿ ನೀಡಿದ್ದೆ. ನನ್ನ ಭೇಟಿಯ ಹಿಂದೆ ಯಾವುದೇ ದುರುದ್ದೇಶವಿಲ್ಲ. ನನ್ನ ಹೋರಾಟ ಧಾರ್ಮಿಕ ಕ್ಷೇತ್ರದ ಮೇಲಾಗಲಿ ಅಥವಾ ಯಾವುದೇ ವ್ಯಕ್ತಿ ಮೇಲಾಗಲಿ ಅಲ್ಲ. ಊರವರ ಒತ್ತಾಯ ಮತ್ತು ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕೆನ್ನುವ ಕಾರಣಕ್ಕಾಗಿ ನಾನು ಈ ಹೋರಾಟಕ್ಕೆ ಇಳಿದಿದ್ದೇನೆ.
ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯ ಸರಕಾರದ ಸಚಿವರುಗಳು ಬೆಂಗಳೂರಿನಲ್ಲಿ ಕೂತು ಹುಕುಂ ಮಾಡುವುದು, ಹೇಳಿಕೆ ನೀಡುವುದು ತಪ್ಪು. ಬೆಳ್ತಂಗಡಿ, ಉಜಿರೆಗೆ ಬರಲಿ. ವಾಸ್ತವತೆ ಅರಿದುಕೊಂಡು ಮುಂದಿನ ಹೆಜ್ಜೆ ಇಡಲಿ. ನಮ್ಮ ಹೋರಾಟಕ್ಕೆ ರಾಜ್ಯಾದ್ಯಂತ ಊಹಿಸಲೂ ಅಸಾಧ್ಯವಾದ ಜನ ಬೆಂಬಲ ಸಿಗುತ್ತದೆ. ಜನರ ಒತ್ತಾಯಕ್ಕೆ ಮಣಿದು ಸರಕಾರ ಸಿಬಿಐ ತನಿಖೆ ಮುಂದಾಗಲಿದೆ ಎನ್ನುವುದು ನಮ್ಮ ವಿಶ್ವಾಸ.

ಪ್ರ: ಸಿಐಡಿ ತನಿಖೆಯಲ್ಲಿ ನಂಬಿಕೆಯಿಲ್ಲ. ಸಿಬಿಐ ತನಿಖೆಯೇ ಆಗ ಬೇಕೆನ್ನುವುದು ಯಾಕೆ? ಸಿಐಡಿ ತನಿಖೆಯಲ್ಲಿ ಹಸ್ತಕ್ಷೇಪ ನಡೆಯುತ್ತಾದಾದರೆ ಅದು ಸಿಬಿಐ ತನಿಖೆಯಲ್ಲಿ ಯಾಕೆ ನಡೆಯಬಾರದು?
ಶ್ರೀಗಳು: ಸಿಐಡಿ ತನಿಖೆಯಲ್ಲಿ ನಂಬಿಕೆಯಿಲ್ಲ ಎನ್ನುವುದಕ್ಕೆ ಕಾರಣಗಳು ಹಲವಾರು. ಪೊಲೀಸರು foot print ತೆಗೆದು ಕೊಂಡಿದ್ದಾರಾ? ಸೌಜನ್ಯ ಬಟ್ಟೆಯನ್ನು ಮತ್ತು ಮೊಬೈಲ್ ಕರೆಯನ್ನು ಪರಿಶೀಲಿಸಿದ್ದಾರಾ? ಸೌಜನ್ಯ ಯೋನಿಯಲ್ಲಿ ವೀರ್ಯವನ್ನು ಚೆಕ್ ಮಾಡಿದ್ದಾರಾ? ಆರೋಪಿ ಸ್ಥಾನದಲ್ಲಿರುವ ಸಂತೋಷನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದ್ದಾರಾ?
ಹೀಗಾಗಿ ನಮಗೆ ಸ್ವಾಭಾವಿಕವಾಗಿ ಸಿಐಡಿ ತನಿಕೆಯಲ್ಲಿ ನಂಬಿಕೆ ಬರುವುದಿಲ್ಲ. ಸಿಬಿಐ ಅಧಿಕಾರಿಗಳು ಕೂಡಾ ಮನುಷ್ಯರೇ. ಸುಪ್ರೀಂಕೋರ್ಟ್ ಸುಪರ್ದಿಯಲ್ಲಿ, ರಾಜಕೀಯದ ಹಸ್ತಕ್ಷೇಪವಿಲ್ಲದ ಸಿಬಿಐ ತನಿಖೆ ಆಗಬೇಕೆನ್ನುವುದು ನಮ್ಮ ಉದ್ದೇಶ.
ಪ್ರ: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಹಿಂದೂಪರ ಸಂಘಟನೆಗಳು ಸೌಜನ್ಯ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸಲಿಲ್ಲ. ಕೆಲವೊಂದು ಸಂಘಟನೆಗಳು ಬೆಂಬಲ ಸೂಚಿಸಿದರೆ ಕೆಲವೊಂದು ಸಂಘಟನೆಗಳು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಅನ್ನುತ್ತಿದ್ದಾರಲ್ಲಾ?
ಶ್ರೀಗಳು: ಹಿಂದೂ ಪರ ಸಂಘಟನೆಗಳು ಹೋರಾಟದ ಆರಂಭದಲ್ಲಿ ಭಿನ್ನ ನಿಲುವು ತಾಳಿದ್ದು ನಿಜ. ಈಗ ಎಲ್ಲಾ ಹಿಂದೂ ಪರ ಸಂಘಟನೆಗಳು ಹೋರಾಟದ ಪರವಾಗಿದ್ದಾರೆ. ಇಲ್ಲಿ ಹೋರಾಟ ಮಾಡುವವರು ಯಾರೂ ಧಾರ್ಮಿಕ ಕೇಂದ್ರದ ನಂಬಿಕೆಗೆ ಧಕ್ಕೆ ತರಬೇಕೆನ್ನುವ ಉದ್ದೇಶವನ್ನು ಹೊಂದಿಲ್ಲ. ಸಿಬಿಐ ತನಿಖೆಯಿಂದ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ. ಹಾಗಾಗಿ ಎರಡೂ ಈ ಅವಳಿ ಜಿಲ್ಲೆಯಲ್ಲಿ ನಮ್ಮ ಹೋರಾಟಕ್ಕೆ ಹಿಂದೂ ಸಂಘಟನೆಗಳ ಸಂಪೂರ್ಣ ಬೆಂಬಲವಿದೆ.












Click it and Unblock the Notifications