Breaking; ಡಿ. 2ರಿಂದ ಈ ರೈಲುಗಳು ಪುನರಾರಂಭ, ಪಟ್ಟಿ
ಬೆಂಗಳೂರು, ನವೆಂಬರ್ 29; ವಿವಿಧ ಕಾರಣಗಳಿಂದ ರದ್ದಾಗಿದ್ದ ಹಲವು ರೈಲು ಸೇವೆಗಳು ಮತ್ತೆ ಆರಂಭವಾಗಲಿದೆ. ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಪುನರಾರಂಭಗೊಳ್ಳುವ ರೈಲುಗಳ ಮಾಹಿತಿ ನೀಡಿದೆ.
ರೈಲು ಸೇವೆ ಬಳಕೆ ಮಾಡುವವರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಡಿಸೆಂಬರ್ 1 ಮತ್ತು 2ರಿಂದ ವಿವಿಧ ರೈಲುಗಳ ಸಂಚಾರವನ್ನು ಪುನಃ ಆರಂಭಿಸಲಿದೆ. ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಈ ಕುರಿತು ಮಾಹಿತಿ ಕೊಟ್ಟಿದೆ.
ಹುಬ್ಬಳ್ಳಿ, ಗದಗ, ವಿಜಯಪುರ, ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಬೇರೆ ರಾಜ್ಯಗಳಿಗೆ ಸಂಚಾರ ನಡೆಸುವ ಜನರಿಗೆ ರೈಲು ಸೇವೆ ಪುನರಾರಂಭದಿಂದ ಅನುಕೂಲವಾಗಲಿದೆ.

ಪುನರಾರಂಭಗೊಳ್ಳುವ ರೈಲುಗಳ ಪಟ್ಟಿ ಇಲ್ಲಿದೆ
* ಹುಬ್ಬಳ್ಳಿ-ವಿಜಯಪುರ (06919). ವಿಜಯಪುರ-ಹುಬ್ಬಳ್ಳಿ (06920) ಪ್ಯಾಸೆಂಜರ್ ರೈಲು ಡಿಸೆಂಬರ್ 2ರಿಂದ ಮತ್ತೆ ಸಂಚಾರ ಆರಂಭಿಸಲಿದೆ.
* ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್-ಗದಗ್ ಎಕ್ಸ್ಪ್ರೆಸ್ (11139) ಡಿಸೆಂಬರ್ 1ರಿಂದ ಮತ್ತು ಗದಗ್-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಎಕ್ಸ್ಪ್ರೆಸ್ (11140) ರೈಲು ಡಿಸೆಂಬರ್ 2ರಿಂದ ಆರಂಭವಾಗಿದೆ.
* ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್ಪ್ರೆಸ್ ( 07378) ರೈಲು ಡಿಸೆಂಬರ್ 1 ರಿಂದ ಪುನಃ ಆರಂಭಗೊಳ್ಳಲಿದೆ. ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ( 07377) ಡಿಸೆಂಬರ್ 2ರಿಂದ ಆರಂಭವಾಗಲಿದೆ.
* ಹುಬ್ಬಳ್ಳಿ-ಸೋಲಾಪುರ್ ಡೈಲಿ ಪ್ಯಾಸೆಂಜರ್ (07332) ರೈಲು ಡಿಸೆಂಬರ್ 2ರಿಂದ ನಿಗದಿತ ಸಮಯಕ್ಕೆ ಸಂಚಾರ ಆರಂಭಿಸಲಿದೆ.
ಕೊಪ್ಪಳ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಉದ್ಘಾಟನೆ; ಕೊಪ್ಪಳದ ರೈಲು ನಿಲ್ದಾಣದಲ್ಲಿ ಸೋಮವಾರ ಎಸ್ಕಲೇಟರ್ ಉದ್ಘಾಟನೆ ಮಾಡಲಾಗಿದೆ. ಹಲವಾರು ದಿನಗಳಿಂದ ಪ್ರಯಾಣಿಕರು ಎಸ್ಕಲೇಟರ್ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟಿದ್ದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ ಎಸ್ಕಲೇಟರ್ ಸೌಲಭ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ಕೊಪ್ಪಳ ರೈಲು ನಿಲ್ದಾಣವು ನಾನ್ ಸಬ್ ಅರ್ಬನ್ ಗ್ರೂಪ್ 5ರ ವರ್ಗದ ನಿಲ್ದಾಣವಾಗಿದೆ. ಪ್ರತಿ ದಿನ ಈ ನಿಲ್ದಾಣಕ್ಕೆ ಅಂದಾಜು 5000 ಜನರು ಬಂದು ಹೋಗುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಕೊಪ್ಪಳ ನಿಲ್ದಾಣದಲ್ಲಿ 2.32 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಎಸ್ಕಲೇಟರ್ಗಳನ್ನು ಅಳವಡಿಸಿದೆ" ಎಂದರು.

ಈ ಎಸ್ಕಲೇಟರ್ ಇಂಧನ ದಕ್ಷತೆಯ ಸ್ಟಾರ್ ಮಾನ್ಯತೆಯನ್ನು ಹೊಂದಿದೆ. ಪ್ಲಾಟ್ ಫಾರ್ಮ್ ಸಂಖ್ಯೆ 1 ಮತ್ತು ಪ್ಲಾಟ್ ಫಾರ್ಮ್ ಸಂಖ್ಯೆ 2ರಲ್ಲಿ ಎಸ್ಕಲೇಟರ್ ಇದೆ. ಇವು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾದ ಸುರಕ್ಷತಾ ಅಂಶಗಳನ್ನು ಒಳಗೊಂಡಿವೆ. ಹಿರಿಯ ನಾಗರಿಕರು, ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರು ಮತ್ತು ದಿವ್ಯಾಂಗ ಜನರಿಗೆ ಇದರಿಂದ ಅನುಕೂಲವಾಗಲಿದೆ.












Click it and Unblock the Notifications