ಹಿಂದಿ ಹೇರಿಕೆ: ಸಿಡಿದೆದ್ದ ದಕ್ಷಿಣ ಭಾರತದ ನಾಯಕರು
ಬೆಂಗಳೂರು, ಆ. 23: ಕೊರೊನಾ ವೈರಸ್ ಸಂಕಷ್ಟದಲ್ಲಿ ಮತ್ತೊಮ್ಮೆ ಹಿಂದಿ ಹೇರಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಬಾರಿ ಉತ್ತರ ಭಾರತದ ಹಿರಿಯ ಅಧಿಕಾರಿಯೊಬ್ಬರು ದಕ್ಷಿಣ ಭಾರತೀಯರನ್ನು ಮೂದಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರನ್ನು ಬಿಟ್ಟು ದಕ್ಷಿಣ ಭಾರತದ ಉಳಿದೆಲ್ಲ ರಾಜಕೀಯ ಪಕ್ಷಗಳ ನಾಯಕರು ಇದನ್ನು ಖಂಡಿಸಿದ್ದಾರೆ. ಹಿಂದಿ ಹೇರಿಕೆ ವಿಚಾರ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಬಂದಿದೆ.
Recommended Video
ಕೇಂದ್ರ ಆಯುಷ್ ಇಲಾಖೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಈ ಘಟನೆ ನಡೆದಿದ್ದು ದಕ್ಷಿಣ ಭಾರತೀಯರ ಆತ್ಮಾಭಿಮಾನವನ್ನು ಕೆಣಕುವಂತೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಮಾತನಾಡಿದ್ದಾರೆ. ದಕ್ಷಿಣ ಭಾರತದ ರಾಜಕೀಯ ನಾಯಕರು ಪಕ್ಷಬೇಧ ಮರೆತು ಹಿಂದಿ ಹೇರಿಕೆ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ತಕ್ಷಣ ಆಯುಷ್ ಇಲಾಖೆ ಕಾರ್ಯದರ್ಶಿ ರಾಜೇಶ್ ಕಾಟೆಚಾ ಅವರನ್ನು ತಕ್ಷಣ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ. ಇಡೀ ಪ್ರಕರಣದ ವಿವರ ಇಲ್ಲಿದೆ.
ಮಾಜಿ ಸಿಎಂ ಕಿಡಿ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಆಯುಷ್ ಇಲಾಖೆ ಕಾರ್ಯದರ್ಶಿ ರಾಜೇಶ್ ಕೊಟೆಚಾ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ನಮ್ ದೇಶದ ಎಲ್ಲ ಭಾಷೆಗಳು ಒಕ್ಕೂಟ ವ್ಯವಸ್ಥೆಯ ಒಂದು ಭಾಗ. ಒಕ್ಕೂಟ ವ್ಯವಸ್ಥೆ ಎಂಬುದು ನಮ್ಮ ದೇಶದ ಒಗ್ಗಟ್ಟಿನ ಮಂತ್ರ. ಹೀಗಿರುವಾಗ, ಹಿಂದಿ ಮಾತನಾಡಲು ಬಾರದ ಕಾರಣಕ್ಕೆ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಿ ಎಂಬುದು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ. ಇದು ಸಂವಿಧಾನ ವಿರೋಧಿ ನಡೆಯಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದಿ ಗೊತ್ತಿಲ್ಲದವರು ಹೊರ ಹೋಗಿ ಹೇಳಿಕೆ ವಿವಾದ: ಆಯುಷ್ ಕಾರ್ಯದರ್ಶಿ ಅಮಾನತಿಗೆ ಸಂಸದೆ ಕನಿಮೋಳಿ ಆಗ್ರಹ
ಹಿಂದಿ ಭಾಷೆ ಬರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಮಿಕ್ಕೆಲ್ಲ ಭಾಷೆಯ ಜನರು ಇನ್ನೂ ಎಷ್ಟು ತ್ಯಾಗ ಮಾಡಬೇಕು? ಹಿಂದಿ ಶ್ರೇಷ್ಠತೆಯ ಗೀಳಿನಲ್ಲಿರುವ ಆಯುಷ್ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಅವರ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳ ಬೇಕು. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು ಎಂದು ಎಚ್ಡಿಕೆ ಆಗ್ರಹಿಸಿದ್ದಾರೆ.
ಡಿಎಂಕೆ ಸಂಸದೆ ಕನಿಮೋಳಿ ಪತ್ರ
ಇನ್ನು ಆಯುಷ್ ಇಲಾಖೆ ಕಾರ್ಯದರ್ಶಿ ಮಾತಿಗೆ ಡಿಎಂಕೆ ಸಂಸದೆ ಕನಿಮೋಳಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದ 22 ಭಾಷೆಗಳಿಗೆ ಸಂವಿಧಾನದಲ್ಲಿ ಮಾನ್ಯತೆಯಿದೆ. ಇಂಗ್ಲೀಷ್ನಲ್ಲಿರುವ ಸಂವಿಧಾನದಲ್ಲಿ ಸರ್ಕಾರದ ಯಾವುದೇ ಸುತ್ತೋಲೆ ಅಥವಾ ನಡಾವಳಿ ಇಂಗ್ಲೀಷ್ನಲ್ಲಿರಬೇಕು ಎಂದು ತಿಳಿಸಲಾಗಿದೆ. ಆದರೂ ಆಯುಷ್ ಇಲಾಖೆಯ ಕಾರ್ಯದರ್ಶಿಯ ಮಾತು ಉದ್ಧಟತನದಿಂದ ಕೂಡಿದೆ.
ಹಿಂದಿ ಮಾತನಾಡದ ರಾಜ್ಯಗಳು ಸಂವಹನಕ್ಕೆ ಸಹವರ್ತಿ ಭಾಷೆಯಾಗಿ ಇಂಗ್ಲೀಷ್ ಬಳಸಿಕೊಳ್ಳಬೇಕು ಎಂದು ದಿ. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು 1959ರ ಆಗಷ್ಟ್ 7 ರಂದು ಮಾತನಾಡಿದ್ದಾರೆ. ಆದರೂ ಬಲವಂತವಾಗಿ ಹಿಂದಿ ಹೇರಿಕೆಗೆ ಕೇಂದ್ರ ಸರ್ಕಾರದ ಅಧಿಕಾರಿಳು ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ತಕ್ಷಣ ಅಧಿಕಾರಿಯ ಮೇಲೆ ಕ್ರಮಕೈಗೊಳ್ಳಬೇಕೆಂದು ಡಿಎಂಕೆ ಸಂಸದೆ ಕನಿಮೋಳಿ ಅವರು ಕೇಂದ್ರ ಆಯುಷ್ ಇಲಾಖೆ ರಾಜ್ಯಖಾತೆ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕಾರ್ತಿ ಚಿದಂಬರಂ ಆಕ್ಷೇಪ
ಹಿಂದಿ ಬಾರದ ತಮಿಳುನಾಡು ಪ್ರತಿನಿಧಿಗಳನ್ನು ಆಯುಷ್ ತರಬೇತಿ ಕಾರ್ಯಾಗಾರವು ನಿರ್ಲಕ್ಷಿಸಿದೆ. ಅವರಿಗೆ ಹಿಂದಿ ಬರುವುದಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಹಿಂದಿ ಬಾರದವರು ಕಾರ್ಯಾಗಾರದಿಂದ ಹೊರನಡೆಯಬೇಕು ಎಂದು ಹೇಳುವುದಾಗಲೀ ಅಥವಾ ಹಿಂದಿಯಲ್ಲಿಯೇ ಮಾತನಾಡಬೇಕು ಎಂದು ಆಗ್ರಹಿಸುವುದನ್ನಾಗಲೀ ಒಪ್ಪಲು ಸಾಧ್ಯವಿಲ್ಲ ಎಂದು ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಬಲವಂತದ ಹಿಂದಿ ಬೇಡ, ದ್ವಿಭಾಷಾ ನೀತಿ ಸಾಕು: ಕನ್ನಡಿಗರ ಆಂದೋಲನ
ಏನಿದು ಹಿಂದಿ ಹೇರಿಕೆ ಪ್ರಕರಣ?
ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿ ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ 'ಹಿಂದಿ ಮಾತನಾಡಲು ಆಗದವರು ತರಬೇತಿಯಿಂದ ಹೊರನಡೆಯಬಹುದು. ನನಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದರು. ಅವರ ಹೇಳಿಕೆ ಇದೀಗ ವಿವಾದ ಹುಟ್ಟುಹಾಕಿದೆ.
ತಮಿಳು ಅಥವಾ ಇಂಗ್ಲಿಷ್ನಲ್ಲಿ ಮಾತನಾಡಿಎಂದು ಹೇಳಿದ್ದ ಕನಿಮೋಳಿ ಅವರಿಗೆ ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಅಧಿಕಾರಿಯೊಬ್ಬರು ನೀವು ಭಾರತೀಯರೇ? ಎಂದು ಪ್ರಶ್ನಿಸಿದ್ದರು. ಈ ಪ್ರಕರಣದ ನಂತರ ಸಿಐಎಸ್ಎಫ್ ವಿಚಾರಣೆಗೆ ಆದೇಶಿಸಿದ್ದನ್ನು ನೆನಪಿಸಿಕೊಳ್ಳಬಹುದು.