Breaking; ಸೋನಿಯಾ ಕರ್ನಾಟಕ ಭೇಟಿ ಉದ್ದೇಶ ಹೇಳಿದ ಕಟೀಲ್!
ಬೆಂಗಳೂರು, ಅಕ್ಟೋಬರ್ 04; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳಲು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ.
ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಸೋನಿಯಾ ಗಾಂಧಿ ಗುರುವಾರ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋನಿಯಾ ಗಾಂಧಿ ಕರ್ನಾಟಕ ಭೇಟಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
'ಮಗನ ರಾಜಕೀಯ ಭವಿಷ್ಯಕ್ಕಾಗಿ ಎರಡು ದಿನದ ಮಟ್ಟಿಗೆ ಕರ್ನಾಟಕಕ್ಕೆ ಆಗಮಿಸಿರುವ ಸೋನಿಯಾ ಗಾಂಧಿಯವರಿಗೆ ಸಿಎಂ ಕುರ್ಚಿಯ ಭ್ರಮೆಯಲ್ಲಿ ಕಾದಾಡುತ್ತಿರುವ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರನ್ನು ಒಂದುಗೂಡಿಸಲು ವರ್ಷ ಸಾಕಾಗುವುದಿಲ್ಲ ಎಂದು ಅನಿಸುತ್ತಿದೆ' ಎಂದು ಲೇವಡಿ ಮಾಡಿದ್ದಾರೆ.

'ಮೊದಲು ಇವರಿಬ್ಬರನ್ನು ಜೋಡಿಸಿ ನಂತರ ಮುಂದುವರೆಯಲು ಅವರು ಮಗನಿಗೆ ಹೇಳಲಿದ್ದಾರೆ' ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ನಲ್ಲಿ ಭವಿಷ್ಯ ನುಡಿದಿದ್ದಾರೆ.
ಮಗನ ರಾಜಕೀಯ ಭವಿಷ್ಯಕ್ಕಾಗಿ ಎರಡು ದಿನದ ಮಟ್ಟಿಗೆ ಕರ್ನಾಟಕಕ್ಕೆ ಆಗಮಿಸಿರುವ ಸೋನಿಯಾ ಗಾಂಧಿಯವರಿಗೆ ಸಿಎಂ ಕುರ್ಚಿಯ ಭ್ರಮೆಯಲ್ಲಿ ಕಾದಾಡುತ್ತಿರುವ @siddaramaiah ಹಾಗೂ @DKShivakumar ಅವರನ್ನು ಒಂದುಗೂಡಿಸಲು ವರ್ಷ ಸಾಕಾಗುವುದಿಲ್ಲ ಎಂದು ಅನಿಸುತ್ತಿದೆ.
— Nalinkumar Kateel (@nalinkateel) October 4, 2022
ಮೊದಲು ಇವರಿಬ್ಬರನ್ನು ಜೋಡಿಸಿ ನಂತರ ಮುಂದುವರೆಯಲು ಅವರು ಮಗನಿಗೆ ಹೇಳಲಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ನಳಿನ್ ಕುಮಾರ್ ಕಟೀಲ್, 'ಭಾರತದ ಐಕ್ಯತೆಗಾಗಿ ಶ್ರಮಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಸರ್ವಸಮ್ಮತವಾಗಿ ಪ್ರಧಾನಿ ಸ್ಥಾನಕ್ಕೆ ನಾಮಾಂಕೀತರಾಗಿದ್ದರೂ ಅವರನ್ನು ಬದಿಗೆ ಸರಿಸಿ ಅಧಿಕಾರದ ಹಪಾಹಪಿಯಿಂದ ಪ್ರಧಾನಿಯಾದ ನೆಹರೂ ಅವರ ಮರಿಮಗ ಮೊದಲು ತಮ್ಮ ಕುಟುಂಬದ ತೋಡೋ ಇತಿಹಾಸ ಅರಿತು ಹೆಜ್ಜೆ ಹಾಕಿದರೆ ಒಂದೊಂದು ಹೆಜ್ಜೆಯಲ್ಲಿಯೂ ಇತಿಹಾಸದ ಪುಟ ತೆರೆದುಕೊಳ್ಳಲಿದೆ' ಎಂದು ಹೇಳಿದ್ದಾರೆ.
ಸೋಮವಾರ ಮೈಸೂರಿಗೆ ಆಗಮಿಸಿರುವ ಸೋನಿಯಾ ಗಾಂಧಿ ಕೊಡಗಿಗೆ ತೆರಳಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣ ಕೊಡಗು ಭೇಟಿ ರದ್ದುಗೊಳಿಸಿದ್ದಾರೆ.
ಪ್ರಸ್ತುತ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಬಿನಿ ಸಮೀಪದ ಆರೆಂಜ್ ಕೌಂಟಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾರತ್ ಜೋಡೋ ಯಾತ್ರೆ ಸೋಮವಾರ ಮಂಡ್ಯ ತಲುಪಿದೆ.
ಮಂಗಳವಾರ ಮತ್ತು ಬುಧವಾರ ಮೈಸೂರು ದಸರಾ ಹಿನ್ನಲೆಯಲ್ಲಿ ಭಾರತ್ ಜೋಡೋ ಯಾತ್ರೆ ಸ್ಥಗಿತಗೊಳಿಸಲಾಗಿದೆ. ಅಕ್ಟೋಬರ್ 6ರಿಂದ ಯಾತ್ರೆ ಮುಂದುವರೆಯಲಿದೆ. ಗುರುವಾರದ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications